ಮೋದಿ ತಾನೂ ಕೆಲಸ ಮಾಡುವುದಿಲ್ಲ, ಇತರರಿಗೂ ಕೆಲಸ ಮಾಡಲು ಬಿಡುವುದಿಲ್ಲ
ಪ್ರಧಾನಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಹೊಸದಿಲ್ಲಿ, ಜೂ.14: ಆಮ್ ಆದ್ಮಿ ಪಕ್ಷದ 21 ಮಂದಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲು ಪೂರ್ವಾನ್ವಯವಾಗುವಂತೆ ವಿನಾ ಯಿತಿ ನೀಡುವ ಸಂಬಂಧ ದಿಲ್ಲಿ ಸರಕಾರ ತಂದಿದ್ದ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ತಿರಸ್ಕರಿಸಿದ ಬೆನ್ನಲ್ಲೇ, ದಿಲ್ಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.
ಒಬ್ಬ ಶಾಸಕ ವಿದ್ಯುತ್, ಮತ್ತೊಬ್ಬ ನೀರು ಹಾಗೂ ಇನ್ನೊಬ್ಬ ಆಸ್ಪತ್ರೆ, ಶಾಲೆಗೆ ಒಬ್ಬ ಹೀಗೆ ಪ್ರತಿಯೊಬ್ಬರೂ ಒಂದೊಂದು ಕ್ಷೇತ್ರದ ಹೊಣೆ ಹೊರಬೇಕಿತ್ತು. ಆದರೆ ಮೋದಿಯವರು ನಾನು ಕೆಲಸ ಮಾಡುವುದಿಲ್ಲ, ಇತರರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಸರಕಾರದ ಒಳ್ಳೆಯ ಕೆಲಸಗಳಿಂದಾಗಿ ಮೋದಿ ಅಧೀರರಾಗಿದ್ದಾರೆ ಎಂದು ಸಿಎಂ ಚುಚ್ಚಿದ್ದಾರೆ. 21 ಮಂದಿ ಶಾಸಕರಿಗೆ ಸಂಸದೀಯ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದಕ್ಕೆ ಯಾವ ಲಾಭವನ್ನೂ ನೀಡುತ್ತಿಲ್ಲ. ಒಬ್ಬರಿಗೆ ಒಂದು ರೂಪಾಯಿ ಕೂಡಾ ನೀಡುತ್ತಿಲ್ಲ. ವಾಹನ ಅಥವಾ ಬಂಗ್ಲೆ ಕೂಡಾ ಕೊಡುತ್ತಿಲ್ಲ. ಎಲ್ಲ ಶಾಸಕರು ಉಚಿತವಾಗಿ ದುಡಿಯುತ್ತಿದ್ದಾರೆ. ಆದರೆ ಮೋದಿ, ನೀವೆಲ್ಲರೂ ಮನೆಯಲ್ಲೇ ಕುಳಿತಿರಿ ಯಾರೂ ಕೆಲಸ ಮಾಡಬೇಡಿ ಎಂದು ಹೇಳುತ್ತಿದ್ದಾರೆ ಎಂಬುದಾಗಿ ಆಪ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ.
ಕಾನೂನು ಪ್ರಕಾರ, ಜನಪ್ರತಿನಿಧಿಗಳು ಇತರ ಲಾಭದಾಯಕ ಹುದ್ದೆಗಳನ್ನು ಹೊಂದಿರುವಂತಿಲ್ಲ. ಈ ಕಾರಣದಿಂದ ದಿಲ್ಲಿ ಸರಕಾರ, ದಿಲ್ಲಿ ವಿಧಾನಸಭೆ ಶಾಸಕರ (ಅನರ್ಹತೆ ತೆಗೆಯುವ) ಕಾಯ್ದೆಗೆ ತಿದ್ದುಪಡಿ ತಂದು, 21 ಶಾಸಕರನ್ನು ಕೇಜ್ರಿವಾಲ್ ಈಗಾಗಲೇ ನೇಮಕ ಮಾಡಿದ್ದು, ಇದು ಕಾಯ್ದೆಯ ಉಲ್ಲಂಘನೆಯಲ್ಲ ಎಂದು ಮಸೂದೆ ಆಂಗೀಕರಿಸಿತ್ತು. ಇದನ್ನು ತಿರಸ್ಕರಿಸಿರುವ ರಾಷ್ಟ್ರಪತಿಯವರ ಕ್ರಮವನ್ನು ಕೂಡಾ ಆಪ್ ವಿರೋಧಿಸಿದೆ.
ಇದೀಗ 21 ಶಾಸಕರ ಭವಿಷ್ಯ ತೂಗುಯ್ಯಲೆಯಾಗಿದ್ದು, ಇವರು ಹೊಸದಾಗಿ ಚುನಾವಣೆ ಎದುರಿಸಬೇಕಾಗಬಹುದು. ಆದರೆ ಅಂಥ ಸಾಧ್ಯತೆ ಇಲ್ಲ ಎಂದು ಆಪ್ ವಿಶ್ವಾಸ ವ್ಯಕ್ತಪಡಿಸಿದೆ.