ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೆ: ಉನ್ನತ ಮಟ್ಟದ ಸಭೆ ಕರೆದ ಜೇಟ್ಲಿ
ಹೈದರಾಬಾದ್ನಲ್ಲಿ ಟೊಮೆಟೊ ಕೆಜಿಗೆ 100 ರೂ.
ಹೊಸದಿಲ್ಲಿ, ಜೂ.15: ಜನ ಸಾಮಾನ್ಯರ ಅವಶ್ಯಕ ಆಹಾರಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 19 ತಿಂಗಳಲ್ಲಿ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಉನ್ನತ ಮಟ್ಟದ ಸಭೆ ಕರೆಯಲು ನಿರ್ಧರಿಸಿದ್ದಾರೆ.
ತರಕಾರಿಗಳ ಬೆಲೆ ಏರಿಕೆಯು ದೊಡ್ಡ ತಲೆನೋವಾಗಿದೆ. ಮಂಗಳವಾರ ಬಿಡುಗಡೆಯಾದ ಸಗಟು ಬೆಲೆ ಸೂಚ್ಯಂಕದ ದತ್ತಾಂಶಗಳ ಪ್ರಕಾರ ತರಕಾರಿಯ ಹಣದುಬ್ಬರ ಮೂರು ತಿಂಗಳಲ್ಲಿ ಶೇ. 2.21 ರಿಂದ 12.34ಕ್ಕೆ ಏರಿಕೆಯಾಗಿದೆ. ಟೊಮೆಟೊ ಬೆಲೆ ದೇಶಾದ್ಯಂತ ಕೆಜಿಗೆ 80 ರೂ.ಗೆ ಏರಿಕೆಯಾಗಿದ್ದು, ಹೈದರಾಬಾದ್ನಲ್ಲಿ ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಟೊಮಟೊ ಬೆಲೆ ಏರಿಕೆಗೆ ಬೆಳೆ ಹಾನಿಯೇ ಕಾರಣ ಎನ್ನಲಾಗಿದೆ. ಬಟಾಟ ಹಾಗೂ ಈರುಳ್ಳಿಯ ಬೆಲೆಗಳಲ್ಲೂ ಏರಿಕೆಯಾಗುತ್ತಿದೆ.
ಆಹಾರ ಬೆಲೆ ಏರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಜೈಟ್ಲಿ ನೇತೃತ್ವದಲ್ಲಿ ಬುಧವಾರ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಮ್ವಿಲಾಸ್ ಪಾಸ್ವಾನ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹಾಗೂ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಭಾಗವಹಿಸುವ ನಿರೀಕ್ಷೆಯಿದೆ. ಅವಶ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮಗೊಳ್ಳುವ ಕುರಿತು ಚರ್ಚೆ ನಡೆಯಲಿದೆ.