ಸಗಟು ಬೆಲೆಯುಬ್ಬರದ ಬಗ್ಗೆ ಉನ್ನತ ಸಚಿವರೊಂದಿಗೆ ಜೇಟ್ಲಿ ಸಭೆ
ಹೊಸದಿಲ್ಲಿ, ಜೂ.15: ಸಗಟು ಮಾರಾಟ ಹಣದುಬ್ಬರವನ್ನು 19 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿಸಿರುವ ಆಹಾರ ವಸ್ತುಗಳ ಬೆಲೆಯೇರಿಕೆಯ ಬಗ್ಗೆ ಚರ್ಚಿಸಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಅಪರಾಹ್ನ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಲಿದ್ದಾರೆ.
ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ, ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಸಹಿತ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಅವಶ್ಯ ವಸ್ತುಗಳ ದರವನ್ನು ನಿಯಂತ್ರಣದಲ್ಲಿರುವ ಕ್ರಮಗಳ ಕುರಿತು ಅವರು ಚರ್ಚಿಸಲಿದ್ದಾರೆ. ಆಹಾರ ಪೂರೈಕೆಯ ‘ಹೆಚ್ಚು ಸಕ್ರಿಯವಾದ ವ್ಯವಸ್ಥಾಪನಕ್ಕಾಗಿ’ ಸರಕಾರವನ್ನು ಫಿಕಿ ವಿನಂತಿಸಿದೆ. ಹಣದುಬ್ಬರವು ಆರ್ವಿಐಯ ಸೂಚಿತ ಮಾರ್ಗದೊಳಗೆಯೇ ಇರಲಿದೆಯೆಂಬ ಆಶಾವಾದವನ್ನು ಅದು ವ್ಯಕ್ತಪಡಿಸಿದೆ.
ತರಕಾರಿಗಳ ಬೆಲೆಯು ಅತೀ ದೊಡ್ಡ ಕಳವಳದ ವಿಷಯವಾಗಿದೆ. ಮಂಗಳವಾರ ಬಿಡುಗಡೆಯಾಗಿರುವ ಸಗಟು ಬೆಲೆ ಸೂಚ್ಯಂಕವು ಎಪ್ರಿಲ್ ಶೇ.2.21ರಷ್ಟಿದ್ದ ತರಕಾರಿ ಬೆಲೆಯುಬ್ಬರವು ಮೇಯಲ್ಲಿ ಶೇ.12.94ಕ್ಕೆ ತಲುಪಿದೆಯೆಂದು ತಿಳಿಸಿದೆ.
ಬೆಳೆ ಹಾನಿಯಿಂದಾಗಿ ದೇಶಾದ್ಯಂತ ಟೊಮೆಟೊದ ಬೆಲೆ ಕಿ.ಗ್ರಾಂಗೆ ಸರಾಸರಿ ರೂ. 80ರಷ್ಟಿದೆ. ಹೈದರಾಬಾದ್ನಲ್ಲಿ ಟೊಮೆಟೊವನ್ನು ಕಿ.ಗ್ರಾಂಗೆ ರೂ. 100ರಂತೆ ಮಾರಲಾಗುತ್ತಿದೆ. ಬಟಾಟೆ ಹಾಗೂ ನೀರುಳ್ಳಿ ಬೆಲೆಯೂ ಏರಿದೆ. ಬೇಳೆ ಕಾಳುಗಳ ಚಿಲ್ಲರೆ ಮಾರಾಟದ ಬೆಲೆ ಕಿ.ಗ್ರಾಂಗೆ ರೂ. 170ಕ್ಕೂ ಹೆಚ್ಚಾಗಿದೆ. 2015 ರಿಂದೀಚೆಗೆ ದ್ವಿದಳ ಧಾನ್ಯಗಳ ಬೆಲೆಯುಬ್ಬರ ಎರಡಂಕೆಯಲ್ಲೇ ಉಳಿದಿದ್ದು, ಮೇಯಲ್ಲಿ ಶೇ.35.56 ಇತ್ತು.
ಎಣ್ಣೆಗಳ ಬೆಲೆಯೇರಿಕೆಯು ಮುಂದಿನ ಆರ್ಥಿಕ ವರ್ಷದೊಳಗೆ ಸಗಟು ಬೆಲೆಯುಬ್ಬರವನ್ನು ಮುಪ್ಪಟ್ಟುಗೊಳಿಸಬಹುದೆಂದು ಕೆಲವು ಆರ್ಥಿಕಜ್ಞರು ಎಚ್ಚರಿಕೆ ನೀಡಿದ್ದಾರೆ.