ಬಿಎಸ್ಇಬಿ ಮಾಜಿ ಅಧ್ಯಕ್ಷ ಮತ್ತು ಜೆಡಿಯು ಮಾಜಿ ಶಾಸಕಿಯ ವಿರುದ್ಧ ಬಂಧನ ವಾರಂಟ್
ಪಟ್ನಾ,ಜೂ.15: ರಾಜ್ಯದಲ್ಲಿಯ ಪ್ಲಸ್ ಟು ಪರೀಕ್ಷೆಗಳಲ್ಲಿ ರ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಶಾಲಾ ಪರೀಕ್ಷಾ ಮಂಡಳಿ(ಬಿಎಸ್ಇಬಿ)ಯ ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಮತ್ತು ಅವರ ಪತ್ನಿ, ಮಾಜಿ ಜೆಡಿಯು ಶಾಸಕಿ ಉಷಾ ಸಿನ್ಹಾ ಅವರ ಬಂಧನಕ್ಕಾಗಿ ಇಲ್ಲಿಯ ಚೀಫ್ ಜ್ಯುಡಿಷಿಯಲ್ ನ್ಯಾಯಾಲಯವು ಬುಧವಾರ ವಾರಂಟ್ಗಳನ್ನು ಹೊರಡಿಸಿದೆ.
ಹಗರಣದ ತನಿಖೆಯ ವೇಳೆ ಗಂಗಾದೇವಿ ಕಾಲೇಜಿನ ಪ್ರಾಂಶುಪಾಲೆಯಾಗಿದ್ದ ಸಿನ್ಹಾ ಅವರ ಪಾತ್ರವು ಬೆಳಕಿಗೆ ಬಂದಿತ್ತು. ತೊಂದರೆಯಿಂದ ತಪ್ಪಿಸಿಕೊಳ್ಳಲು ಸಿನ್ಹಾ ಕಳೆದ ವಾರ ಕಿರಿಯ ಪ್ರೊಫೆಸರ ದಿಲೀಪ್ ಶರ್ಮಾರನ್ನು ಕಾಲೇಜಿನ ಪ್ರಾಂಶುಪಾಲರಾಗಿ ನಿಯೋಜಿಸಿ ರಜೆಯಲ್ಲಿ ತೆರಳಿದ್ದವರು ಪತಿಯೊಂದಿಗೆ ಭೂಗತರಾಗಿದ್ದಾರೆ. ಸಿನ್ಹಾ ಸ್ಥಾನದಲ್ಲಿ ಹಿರಿಯ ಪ್ರೊಫೆಸರ್ ಕಂಚನ್ ಚಾಖೈಯಾರ್ ಅವರನ್ನು ಕಾಲೇಜಿನ ಪ್ರಾಂಶುಪಾಲರಾಗಿ ಮಂಗಳವಾರ ನೇಮಕಗೊಳಿಸಲಾಗಿತ್ತು.
ತನ್ನ ವಿಧಾನಸಭಾ ಕ್ಷೇತ್ರವಾಗಿದ್ದ ನಲಂದಾ ಜಿಲ್ಲೆಯ ಹಿಲ್ಸಾವನ್ನು ಆರ್ಜೆಡಿ ಕೋಟಾಕ್ಕೆ ನೀಡಲಾಗಿದ್ದರಿಂದ ಸಿನ್ಹಾ 2015ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಅವರನ್ನು ಪ್ರಾಂಶುಪಾಲೆಯನ್ನಾಗಿ ಮಾಡಲಾಗಿತ್ತು.
ಲಾಲ್ಕೇಶ್ವರ ಪ್ರಸಾದ್ ಸಿಂಗ್ ವಿರುದ್ಧವೂ ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ತನಿಖಾ ತಂಡದ ನೇತೃತ್ವ ವಹಿಸಿರುವ ಎಸ್ಎಸ್ಪಿ ಮನು ಮಹಾರಾಜ್ ತಿಳಿಸಿದ್ದಾರೆ. ಹಗರಣದ ರೂವಾರಿಯಾಗಿರುವ ವಿವಾದಿತ ಬಿಷುನ್ ರಾಯ್ ಕಾಲೇಜಿನ ಪ್ರಾಂಶುಪಾಲ ಹಾಗೂ ಕಾರ್ಯದರ್ಶಿ ಬಚ್ಚಾ ರಾಯ್ನನ್ನು ಪೊಲೀಸರು ಜೂ.11ರಂದು ಬಂಧಿಸಿದ್ದರು.