ವಿಫಲವಾದ ಕಾಂಗ್ರೆಸ್ 'ಆತ್ಮಹತ್ಯೆ ಯತ್ನ'
ಪಂಜಾಬ್ ಉಸ್ತುವಾರಿಗೆ ರಾಜೀನಾಮೆ ಕೊಟ್ಟ ಕಮಲ್ ನಾಥ್
![ವಿಫಲವಾದ ಕಾಂಗ್ರೆಸ್ ಆತ್ಮಹತ್ಯೆ ಯತ್ನ ವಿಫಲವಾದ ಕಾಂಗ್ರೆಸ್ ಆತ್ಮಹತ್ಯೆ ಯತ್ನ](https://www.varthabharati.in/sites/default/files/images/articles/2016/06/16/Politics-2_4.jpg)
ಹೊಸದಿಲ್ಲಿ: ಇಂದಿರಾಗಾಂಧಿ ಹತ್ಯೆ ಬಳಿಕ ನಡೆದ ಸಿಕ್ಖ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ತಮ್ಮನ್ನು ಅಕಾಲಿದಳ ಹಾಗೂ ಆಮ್ ಆದ್ಮಿ ಪಕ್ಷ ಟೀಕಿಸಿದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಪಂಜಾಬ್ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದರಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ..
ಕಮಲ್ ನಾಥ್ ಅವರ ವಿರುದ್ಧ ಯಾವ ಎಫ್ಐಆರ್ ಕೂಡಾ ದಾಖಲಾಗಿಲ್ಲ. ಅದಾಗ್ಯೂ ಕಮಲ್ ನಾಥ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಪತ್ರ ಬರೆದು, "ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಕೇಂದ್ರ ಸಚಿವನಾಗಿದ್ದಾಗ ಕೂಡಾ ಯಾವ ಕಳಂಕವೂ ಅಂಟಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅವರ ರಾಜೀನಾಮೆ ಸ್ವೀಕರಿಸಲಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ ಹೇಳಿದ್ದಾರೆ.
ಸಿಕ್ಖ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಕಮಲನಾಥ್ ಅವರ ನೇಮಕದಿಂದ ಪಕ್ಷದ ಚುನಾವಣಾ ಭವಿಷ್ಯಕ್ಕೆ ರಾಜ್ಯದಲ್ಲಿ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಇದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ವಿಶೇಷ ಮಹತ್ವ ಪಡೆದಿದೆ. ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಹುಲಿಗಳಾದ ಗುಲಾಂ ನಬಿ ಆಜಾದ್ ಹಾಗೂ ನಾಥ್ ಅವರನ್ನು ನೇಮಕ ಮಾಡಲಾಗಿತ್ತು. ಪಕ್ಷಕ್ಕೆ ಯುವಚೈತನ್ಯ ತುಂಬುವ ಪ್ರಯತ್ನದಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಚುನಾವಣೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಹಿರಿಯರಿಗೆ ಮಣೆ ಹಾಕಲಾಗಿತ್ತು.
ತಮ್ಮ ವಿರುದ್ಧ ಸಿಕ್ಖ್ ಹತ್ಯಾಕಾಂಡದಲ್ಲಿ ಮಾಡಿರುವ ನಿರಾಧಾರ ಆರೋಪಗಳಿಂದ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಕಮಲನಾಥ್ ಸ್ಪಷ್ಟಪಡಿಸಿದ್ದಾರೆ.