ಹೆತ್ತವರು, ಸಂಬಂಧಿಕರಿಗೆ ಹಲ್ಲೆಯಾದರೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ
ಆತ್ಮರಕ್ಷಣೆ ಕಾನೂನಿನ ವ್ಯಾಪ್ತಿ ವಿಸ್ತರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಜೂ.17: ಮಹತ್ವದ ತೀರ್ಪೊಂದರಲ್ಲಿ, ಆತ್ಮರಕ್ಷಣೆ ಹಕ್ಕು ಕಾನೂನಿನ ವ್ಯಾಪ್ತಿ ವಿಸ್ತರಿಸಿರುವ ಸುಪ್ರೀಂಕೋರ್ಟ್, ಹೆತ್ತವರು, ಸಂಬಂಧಿಕರಿಗೆ ಹಲ್ಲೆಯಾದರೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದೆ.
ಗ್ರಾಮಗಳಲ್ಲಿ ತಮ್ಮ ನೆರೆಯವರ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಇದಕ್ಕೂ ಮುನ್ನ ರಾಜಸ್ಥಾನ ಹೈಕೋರ್ಟ್ ಕೂಡಾ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಆರೋಪಿಗಳಿಗೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಿತ್ತು.
ಆದರೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಇಬ್ಬರೂ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿರುವುದು ನಿಜವಾಗಿದ್ದರೂ, ಏಕೆ ಹಲ್ಲೆ ನಡೆಸಿದರು ಎಂದು ತಿಳಿದುಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅವರ ಮೈಮೇಲೆ ಅಷ್ಟೊಂದು ಗಾಯಗಳಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಇಬ್ಬರನ್ನು ಆರೋಪಮುಕ್ತಗೊಳಿಸಿದೆ. ಹೆತ್ತವರು, ಸಂಬಂಧಿಕರಿಗೆ ಹಲ್ಲೆಯಾದರೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ.