ವಿಶ್ವವಿಖ್ಯಾತ ವಿದ್ವಾಂಸ, ಇಗ್ನೊ ಉಪಕುಲಪತಿ ಪ್ರೊ. ಅಸ್ಲಂಗೆ ಸ್ಮತಿ ಇರಾನಿ ಕಿರುಕುಳ
ನವದೆಹಲಿ :ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯಬಗ್ಗೆ ತನಿಖೆ ನಡೆಸುವ ಸಲುವಾಗಿ ಉಪಕುಲಪತಿ ಪ್ರೊ. ಮೊಹಮ್ಮದ್ ಅಸ್ಲಂ ಅವರನ್ನು ನವೆಂಬರ್ 2014 ರಿಂದ ರಜೆ ಮೇಲೆ ತೆರಳುವಂತೆ ಸಚಿವೆ ಸ್ಮತಿ ಇರಾನಿ ನೇತೃತ್ವದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆದೇಶಿಸಿತ್ತಲ್ಲದೆ ಅವರಿಗೆತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡಲು ತನಿಖಾ ವರದಿಯ ಪ್ರತಿಯೊಂದನ್ನೂ ನಿರಾಕರಿಸಿ ಅವರುಕೇಂದ್ರ ಮಾಹಿತಿ ಆಯೋಗ ಮತ್ತು ನ್ಯಾಯಾಲಯದ ಕದ ತಟ್ಟುವಂತೆಮಾಡಲಾಯಿತು, ಎಂದು ಮುಸ್ಲಿಮ್ ಮಿರರ್ ವರದಿ ಮಾಡಿದೆ.
ಪ್ರೊ. ಅಸ್ಲಂ ಅವರನ್ನು ವಿಶ್ವವಿದ್ಯಾಲಯದಿಂದ ದೂರವಿರುವಂತೆ ಮಾಡಲು ಸಕಲ ಪ್ರಯತ್ನಗಳನ್ನೂ ಇಲಾಖೆ ಮಾಡುತ್ತಿದೆಯೆಂಬುದು ಈಗ ಸ್ಪಷ್ಟವಾಗಿದೆಯೆಂದು ವರದಿ ತಿಳಿಸಿದೆಯಲ್ಲದೆ ಯಾವುದೇ ಆರ್ಥಿಕ ಅವ್ಯವಹಾರಗಳು ಅಥವಾ ಸ್ವಜನಪಕ್ಷಪಾತದ ಆರೋಪಗಳಿಲ್ಲದ ಹೊರತಾಗಿಯೂ ಉಪಕುಲಪತಿಯೊಬ್ಬರನ್ನು ರಜೆ ಮೇಲೆ ತೆರಳುವಂತೆ ಹೇಳಿರುವುದು ಅತಿರೇಕದ ಕ್ರಮವೆಂದು ಹೇಳಿದೆ.
ವಿಶ್ವವಿಖ್ಯಾತ ಶಿಕ್ಷಣ ತಜ್ಞ ಹಾಗೂ ಚಿಂತಕರಾಗಿರುವ ಪ್ರೊ. ಅಸ್ಲಂ ಅವರನ್ನು ವಿಕಾಸ್ ಶಾ ಸ್ಥಾಪಿಸಿದ ಇಂಗ್ಲೆಂಡಿನ ಖ್ಯಾತ ಜರ್ನಲ್ ‘ಥಾಟ್ ಇಕನಾಮಿಕ್ಸ್’ ವಿಶ್ವದ ಅತ್ಯಂತ ಪ್ರಭಾವಶಾಲಿ ಚಿಂತಕ’ನೆಂದು ಗುರುತಿಸಿದೆ.
ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಸೇರುವ ಮೊದಲು ಅವರು ವಿಶ್ವ ಬ್ಯಾಂಕ್ ಅಲ್ಲದೆ ಕಾಶ್ಮೀರದ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಎಂಡ್ ಪಬ್ಲಿಕ್ ಎಡ್ಮಿನಿಸ್ಟ್ರೇಶನ್ ಇಲ್ಲಿ ಕೂಡ ಸೇವೆ ಸಲ್ಲಿಸಿದ್ದಾರಲ್ಲದೆ ಪಂಚಾಯತ್ ರಾಜ್ ವ್ಯವಸ್ಥೆಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಭಾರತ ಹಾಗೂ ವಿದೇಶಗಳಲ್ಲಿ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿರುವ ಅವರಿಗೆ ಬಾಂಗ್ಲಾದೇಶ ಮುಕ್ತ ವಿಶ್ವವಿದ್ಯಾಲಯವು 2004ರಲ್ಲಿ ಪಂಚಾಯತ್ ರಾಜ್ ಯೋಜನೆಯ ಪರಿಣಾಮಕಾರಿ ಜಾರಿ ಹಾಗೂ ಅದೇ ಮಾದರಿಯನ್ನು ಬಾಂಗ್ಲಾದೇಶದಲ್ಲಿ ಅನುಕರಣೆ ಮಾಡುವ ನಿಟ್ಟಿನಲ್ಲಿನ ಪ್ರಯತ್ನಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಿತ್ತು.