" ಮುಝಫರ್ನಗರ ಗಲಭೆಯ ಬಳಿಕ 50000 ಕ್ಕೂ ಹೆಚ್ಚು ಮುಸ್ಲಿಮರಿಂದ ವಲಸೆ "
ಕೈರಾನ ವಲಸೆ ಬಿಜೆಪಿಯ ನಾಟಕ: ಉವೈಸಿ
![ಮುಝಫರ್ನಗರ ಗಲಭೆಯ ಬಳಿಕ 50000 ಕ್ಕೂ ಹೆಚ್ಚು ಮುಸ್ಲಿಮರಿಂದ ವಲಸೆ ಮುಝಫರ್ನಗರ ಗಲಭೆಯ ಬಳಿಕ 50000 ಕ್ಕೂ ಹೆಚ್ಚು ಮುಸ್ಲಿಮರಿಂದ ವಲಸೆ](https://www.varthabharati.in/sites/default/files/images/articles/2016/06/19/asaduddinowaisi-759.jpg)
ಹೈದ್ರಾಬಾದ್,ಜೂ.19: ಉತ್ತರ ಪ್ರದೇಶದ ಮುಝಫರ್ನಗರ ಗಲಭೆ ಬಳಿಕ ಈ ಪ್ರದೇಶದಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮರು ವಲಸೆ ಹೋಗಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಶನಿವಾರ ಪ್ರತಿಪಾದಿಸಿದ್ದಾರೆ. ಕೈರಾನದಲ್ಲಿ ಹಿಂದೂಗಳು ವಲಸೆ ಹೋಗಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಸತ್ಯಶೋಧನಾ ಸಮಿತಿ ಕಳುಹಿಸಿದಂತೆ ಬಿಜೆಪಿ, ಇಲ್ಲಿಗೂ ಸತ್ಯಶೋಧನಾ ವರದಿ ಕಳುಹಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕೈರಾನದಿಂದ 346 ಹಿಂದೂ ಕುಟುಂಬಗಳು ವಲಸೆ ಹೋಗಿವೆ ಎನ್ನುವ ಬಿಜೆಪಿ ತರ್ಕ ಹಸಿಸುಳ್ಳು. ಅದು ಘಟನೆಯ ಬಗ್ಗೆ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಸೃಷ್ಟಿಸಿರುವ ನಾಟಕ ಎಂದು ಟೀಕಿಸಿದ್ದಾರೆ.
"ಸುಮಾರು 50 ಸಾವಿರ ಮಂದಿ ಮುಸ್ಲಿಮರು ತಲೆ ತಲಾಂತರದಿಂದ ವಾಸಿಸುತ್ತಿದ್ದ ತಮ್ಮ ಮೂಲ ಸ್ಥಾನದಿಂದ, ಮುಝಫರ್ನಗರ ಗಲಭೆ ಬಳಿಕ ವಲಸೆ ಹೋಗಿದ್ದಾರೆ. ದೇಶದಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಇದು ಮುಸ್ಲಿಮರನ್ನು ಸಾಮೂಹಿಕ ಬುಡಮೇಲುಗೊಳಿಸಿದ ಘಟನೆ" ಎಂದು ಹೈದ್ರಾಬಾದ್ ಸಂಸದರೂ ಆಗಿರುವ ಅವರು ಹೇಳಿದ್ದಾರೆ.
ಈ 50 ಸಾವಿರ ಮಂದಿಯ ಭವಿಷ್ಯ ಏನಾಗಿದೆ ಎನ್ನುವುದನ್ನು ತಿಳಿಯಲು ಬಿಜೆಪಿ ಸತ್ಯಶೋಧನಾ ಸಮಿತಿ ಕಳುಹಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಿರುವ ಬಿಜೆಪಿಗೆ ಕೈರಾನಾ ಘಟನೆ ಬಿಟ್ಟರೆ, ಬೇರೆ ಯಾವ ವಿಷಯಗಳೂ ಇಲ್ಲ. ದುರದೃಷ್ಟದ ವಿಚಾರವೆಂದರೆ ಸಮಾಜವಾದಿ ಪಕ್ಷ ಕೂಡಾ ಇವರಿಗೆ ಸಹಕರಿಸುತ್ತಿದೆ ಎಂದು ಉವೈಸಿ ಹೇಳಿದರು.
"ಇದು ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಎರಡಕ್ಕೂ ಅನ್ವಯಿಸುತ್ತದೆ. ಬಿಜೆಪಿ ಅಲ್ಯಸಂಖ್ಯಾತರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿದೆ. ಸಮಾಜವಾದಿ ಪಕ್ಷವನ್ನು ಆಯ್ಕೆ ಮಾಡದಿದ್ದರೆ, ಮುಸ್ಲಿಮರು ಅಭದ್ರರು ಎನ್ನುವ ಸಂದೇಶವನ್ನು ರವಾನಿಸಲು ಸಮಾಜವಾದಿ ಪಕ್ಷ ನಾಟಕ ಮಾಡುತ್ತಿದೆ" ಎಂದು ಟೀಕಿಸಿದರು.