ಕೈಲಾಸ ಮಾನಸ ಸರೋವರ ಯಾತ್ರೆ
ಮೂವರು ಭಾರತೀಯರು, ಒಬ್ಬ ಕೆನಡಿಯನ್ ಸಾವು
ಕಠ್ಮಂಡು, ಜೂ.19: ಕೈಲಾಸ ಮಾನಸ ಸರೋವರ ಯಾತ್ರೆಯ ವೇಳೆ ಮೂವರು ಭಾರತೀಯರು ಹಾಗೂ ಒಬ್ಬ ಭಾರತೀಯ ಮೂಲದ ಕೆನಡಿಯನ್ ಯಾತ್ರಿಕ ಟಿಬೆಟ್ನಲ್ಲಿ ಸಾವಿಗೀಡಾಗಿದ್ದಾರೆ.
ಗುರುವಾರ ಹಾಗೂ ಶನಿವಾರದ ನಡುವೆ ಸಂಭವಿಸಿರುವ ಈ ಸಾವುಗಳಿಗೆ ಹೃದಯ ಸ್ತಂಭನ ಹಾಗೂ ತಗ್ಗುಪ್ರದೇಶದಿಂದ ಹಿಮಾಲಯದ ಎತ್ತರಪ್ರದೇಶದ ವಾತಾವರಣಕ್ಕೆ ಶರೀರ ಹೊಂದಿಕೊಳ್ಳದ ಕಾರಣ ಉಂಟಾಗುವ 'ಆಲ್ಟಿಟ್ಯೂಡ್ ಸಿಕ್ನೆಸ್' ಕಾರಣವೆನ್ನಲಾಗಿದೆ.
ಎಲ್ಲ ಸಾವುಗಳು ಕಳೆದ ಮೂರು ದಿನಗಳಲ್ಲಿ ಚೀನಾದ ಟಿಬೆಟ್ ವಲಯದಲ್ಲಿ ಸಂಭವಿಸಿವೆ. ಶನಿವಾರ ಕೊನೆಯ ಸಾವು ಉಂಟಾಗಿದೆಯೆಂದು ಕಠ್ಮಂಡುವಿನಲ್ಲಿರುವ ಭಾರತೀಯ ಉಪರಾಯಭಾರಿ ವಿನಯ್ಕುಮಾರ್ ಎಚ್ಟಿಗೆ ತಿಳಿಸಿದ್ದಾರೆ.
ಮೃತರನ್ನು ಮಧ್ಯಪ್ರದೇಶದ ದೌಲತ್ ಸಿಂಗ್(59), ರಾಜಸ್ಥಾನದ ಬಿ. ಲಿಂಗೇಶ್ವರ(62) ಹಾಗೂ ಭೋಗಿಲಾಲ್ ಪಟೇಲ್(76) ಮತ್ತು ಭಾರತೀಯ ಮೂಲದ ಕೆನಡಿಯನ್, ಕೃಷ್ಣಮೂರ್ತಿ(62) ಎಂದು ಗುರುತಿಸಲಾಗಿದೆ.
ದೌಲತ್ ಸಿಂಗ್ರ ಮೃತದೇಹವನ್ನು ರಸ್ತೆಯ ಮೂಲಕ ಭಾರತಕ್ಕೆ ತರಲಾಗಿದ್ದರೆ, ಉಳಿದ ಮೂವರ ಪಾರ್ಥಿವ ಶರೀರಗಳನ್ನು ಹೆಲಿಕಾಪ್ಟರ್ ಮೂಲಕ ಕಠ್ಮಂಡುಗೆ ಒಯ್ಯಲಾಗಿದೆ. ಅವರಲ್ಲೊಬ್ಬನ ಶವವನ್ನು ಭಾರತಕ್ಕೆ ಕಳುಹಿಸಲಾಗಿದ್ದರೆ, ಉಳಿದಿಬ್ಬರ ಕಳೇಬರಗಳನ್ನು ರವಿವಾರ ಕಳುಹಿಸಲಾಗುವುದು.