ಮನುಷ್ಯ ಸಂಪನ್ನನಾಗಲು ವಿದ್ಯೆ ಅವಶ್ಯ: ವಿಶ್ವನಾಥ್ ಶೆಟ್ಟಿ
ನ್ಯಾಶನಲ್ ಸಮೂಹ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ
ತೀರ್ಥಹಳ್ಳಿ, ಜೂ.19: ಮನುಷ್ಯರನ್ನು ಸಂಪತ್ತನ್ನಾಗಿ ರೂಪಿಸುವ ಶಕ್ತಿ ವಿದ್ಯೆಗೆ ಇದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮನೋಧರ್ಮ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಡಿ.ಎಸ್. ವಿಶ್ವನಾಥ್ ಶೆಟ್ಟಿ ಅಭಿಪ್ರಾಯಪಟ್ಟರು.
ನ್ಯಾಶನಲ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನ್ಯಾಶನಲ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ವಿದ್ಯಾರ್ಥಿ ಗಳಲ್ಲಿ ಆತ್ಮಭಿಮಾನ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ತನ್ನ ಲಾಭಾಂಶದಲ್ಲಿ ಕಿಂಚಿತ್ ಸೇವೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ನ್ಯಾಶನಲ್ ಸಮೂಹ ಸಂಸ್ಥೆಗಳು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಯೂಸುಫ್ ಹೈದರ್ ಮಾತನಾಡಿ, ಹೆಚ್ಚಿನ ವಿದ್ಯಾರ್ಥಿಗಳು ಎಸೆಸೆಲ್ಸಿ ಮುಗಿದೊಡನೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ. ಇದಕ್ಕೆ ಪೋಷಕರ ಆರ್ಥಿಕ ಸಂಕಷ್ಟಗಳೂ ಕಾರಣವಾಗುತ್ತದೆ. ಇಂದು ವಿದ್ಯಾಭ್ಯಾಸ ದುಬಾರಿಯಾಗುತ್ತಿದೆ. ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಬಡ ಮಧ್ಯಮ ವರ್ಗದಿಂದ ಬಂದವರಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಎನ್ನುವುದು ಈ ಬಾರಿಯ ಫಲಿತಾಂಶದಿಂದ ವ್ಯಕ್ತವಾಗಿದೆ ಎಂದರು.ಸಂಸ್ಥೆ ಕಳೆದ ಶೈಕ್ಷಣಿಕ ವರ್ಷದಿಂದ ನೀಡುತ್ತಿರುವ ಪುರಸ್ಕಾರದ 50 ಸಾವಿರ ರೂ. ಮೊತ್ತ ಇಂದು 3ಲಕ್ಷದ 8 ಸಾವಿರ ರೂ. ಗೆ ತಲುಪಿದೆ ಇದು ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದ ಅವರು, ವಿದ್ಯಾರ್ಥಿಗಳು ಮುಂದೆ ಪ್ರಜ್ಞಾವಂತ ನಾಗರಿಕರಾಗಿ, ಸಮಾಜಕ್ಕೆ ಕೊಡುಗೆ ನೀಡುವಂತಾದರೆ ತಮ್ಮ ಸೇವೆ ಸಾರ್ಥಕವಾಗಲಿದೆ ಎಂದರು ಅಭಿಪ್ರಾಯಿಸಿದರು.
ಈ ಬಾರಿಯ ಸುಮಾರು 161 ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನು ನೀಡಲಾಗಿದೆ. ಎಸೆಸೆಲ್ಸಿಯ 88, ಪಿಯುಸಿ 42 ಮತ್ತು 39 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಭಾರಿಯ ಶೈಕ್ಷಣಿಕ ವರ್ಷದ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮವಾಗಿ ತೇರ್ಗಡೆಯಾದ ವಿದ್ಯಾರ್ಥಿನಿ ಪಿ. ಸ್ಮತಿ, ಪಿಯುಸಿಯಲ್ಲಿ ರಾಜ್ಯಕ್ಕೆ 4 ನೆ ರ್ಯಾಂಕ್ ಗಳಿಸಿದ ತೇಜಸ್ವಿನಿ, ಪಾಲಿಟೆಕ್ನಿಕ್ನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುವ ರೋಶನ್ ಡಿಸೋಜ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಪಾಲುದಾರ ಅಬ್ದುರ್ರಹ್ಮಾನ್, ನ್ಯಾಶನಲ್ ಸಂಸ್ಥೆಯ ಹಿರಿಯರಾದ ಇಬ್ರಾಹೀಂ ಷರೀಫ್, ಅಬ್ದುಲ್ ಕಲಾಂ,ಕಬೀರ್, ಸುಲೈಮಾನ್ ಸಾಹಿಲ್, ಸಲ್ಮಾನ್, ಮಂಜುನಾಥ ಮಲ್ಯ ಪತ್ರಕರ್ತರಾದ ಮುನ್ನೂರು ಮೋಹನ್ ಶೆಟ್ಟಿ, ಬಿ.ಗಣಪತಿ, ಜಿ.ಆರ್. ಸತ್ಯನಾರಾಯಣ ಉಪಸ್ಥಿತರಿದ್ದರು.







