ಮದರ್ ತೆರೆಸಾ ಭಾರತದ ಕ್ರೈಸ್ತೀಕರಣದ ಸಂಚಿನ ಭಾಗ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್
ಬಸ್ತಿ (ಉ.ಪ್ರ.): ನೋಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೆಸಾ ಭಾರತದ ಕ್ರೈಸ್ತೀಕರಣದ ಸಂಚಿನ ಭಾಗ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಮತ್ತೆ ವಿವಾದಕ್ಕೆ ತುತ್ತಾಗಿದ್ದಾರೆ.
``ಕ್ರೈಸ್ತೀಕರಣದ ಘಟನೆಗಳಿಂದಾಗಿಯೇ ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ತ್ರಿಪುರಾ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಪ್ರತ್ಯೇಕತಾವಾದಿ ಆಂದೋಲನಗಳು ಹುಟ್ಟಿಕೊಂಡವು,'' ಎಂದು ಆದಿತ್ಯನಾಥ ಹೇಳಿದ್ದಾರೆ.
ರಾಮ ಕಥಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ``ನಿಮಗೆಲ್ಲಾ ಈಶಾನ್ಯ ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಅರಿವಿಲ್ಲ. ನಿಜಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಬೇಕು,'' ಎಂದರು.
ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಅವರು ಅದರ ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ,'' ಎಂದು ಹೇಳಿದರು. ``ಕರ ಸೇವಕರು ಬಾಬ್ರಿ ಮಸೀದಿ ಧ್ವಂಸಗೊಳಿಸಿದಾಗ ಅವರನ್ನು ತಡೆಯಲು ಅವರಿಗೆ ಸಾಧ್ಯವಾಗದೇ ಇದ್ದಾಗ ಈಗ ನಿರ್ಮಾಣವನ್ನು ಅವರಿಗೆ ಹೇಗೆ ತಡೆಯಲು ಸಾಧ್ಯ?''ಎಂದವರ ಪ್ರಶ್ನಿಸಿದರು.
ಕೈರಾನದಿಂದ ಹಿಂದೂಗಳು ವಲಸೆ ಹೋಗುತ್ತಿರುವ ವಿಚಾರವೆತ್ತಿದ ಅವರು ``ಹಿಂದೂಗಳನ್ನು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಹೊರ ಹೋಗುವಂತೆ ಬಲವಂತ ಪಡಿಸಿದ್ದಾಗ ಯಾರೂ ``ಅಸಹಿಷ್ಣುತೆ'ಯ ವಿಚಾರ ಎತ್ತಿರಲಿಲ್ಲ,'' ಎಂದರು.
``ಉತ್ತರ ಪ್ರದೇಶವನ್ನಾಳಿದ ವಿವಿಧ ಸರಕಾರಗಳ ಓಲೈಕೆ ನೀತಿ ಹಾಗೂ ಕಪಟ ಜಾತ್ಯತೀತತೆಯಿಂದ ಇಂದು ಹಿಂದೂಗಳು ಕೈರಾನದಿಂದ ವಲಸೆ ಹೋಗುವಂತಾಗಿದೆ,''ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು. ಇದರಿಂದಾಗಿಯೇ ಕೈರಾನದಲ್ಲಿ ಹಿಂದೆ 68 ಶೇ ರಷ್ಟಿದ್ದ ಹಿಂದೂ ಜನಸಂಖ್ಯೆ ಈಗ 8 ಶೇ ಗೆ ಇಳಿದಿದೆ, ಎಂದು ಹೇಳಿದರು.
``ಬಡವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಉದ್ದೇಶದಿಂದಲೇ ಮದರ್ ತೆರೇಸಾ ಅವರ ಸೇವೆ ಮಾಡುತ್ತಿದ್ದರು,'' ಎಂದು ಕಳೆದ ವರ್ಷ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು