ಯೋಗ ದಿನಾಚರಣೆಯಿಂದ ದೂರ ಬಿಹಾರ ಸರಕಾರ
ಪಟ್ನಾ,ಜೂ.21: ಮಂಗಳವಾರ ವಿಶ್ವ ಯೋಗ ದಿನಾಚರಣೆ ಸಂದರ್ಭ ಬಿಹಾರದ ನಿತೀಶ್ ಕುಮಾರ್ ಸರಕಾರವು ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸಿರಲಿಲ್ಲ. ಇದೇ ವೇಳೆ ನಗರದ ಗಾಂಧಿ ಮೈದಾನದಲ್ಲಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಯೋಗವನ್ನು ‘ಜಾಗತಿಕ ಕಾರ್ಯಕ್ರಮ’ವನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶಂಸಿಸಿದರು.
ರವಿಶಂಕರ್ ಪ್ರಸಾದ್ ಜೊತೆಗೆ ಗಿರಿರಾಜ್ ಸಿಂಗ್ ಮತ್ತು ರಾಮಕೃಪಾಲ್ ಯಾದವ್ ಸೇರಿದಂತೆ ಕೇಂದ್ರ ಸಚಿವರು ರಾಜ್ಯದಲ್ಲಿ ಪ್ರತ್ಯೇಕ ಯೋಗ ದಿನಾಚರಣೆ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
.........................
ಇಡಿಯಿಂದ 86 ಕೋಟಿ ರೂ. ಶೇರು ಸ್ತಂಭನ
ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣ
ಹೊಸದಿಲ್ಲಿ, ಜೂ.21: ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದು ದಿಲ್ಲಿ, ಮುಂಬೈ ಹಾಗೂ ಹೈದರಾಬಾದ್ಗಳಲ್ಲಿ 10 ಸಂಸ್ಥೆಗಳಿಗೆ ದಾಳಿ ನಡೆಸಿದ್ದಾರೆ. ಅವುಗಳ ರೂ. 86.07 ಕೋಟಿ ವೌಲ್ಯದ ಶೇರುಗಳನ್ನು ಅವರು ಸ್ತಂಭನಗೊಳಿಸಿದ್ದಾರೆ.
ಶೋಧದ ವೇಳೆ ಇ.ಡಿ. ಪ್ರಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಸಂಸ್ಥೆಗಳ ಆವರಣಗಳಿಂದ ವಶಪಡಿಸಿಕೊಂಡಿದೆ.
ಜೂ.15ರ ದಾಳಿಗಳ ಬಳಿಕ ಹೊಸ ಮಾಹಿತಿ ದೊರೆತಿದ್ದು, ದುಬೈ, ಮಾರಿಶಸ್ ಹಾಗೂ ಸಿಂಗಾಪುರಗಳಲ್ಲಿರುವ ನಿರ್ದಿಷ್ಟ ಸಂಸ್ಥೆಗಳ ಶೇರುಗಳನ್ನು ಸ್ತಂಭನಗೊಳಿಸುವಂತೆ ಅದು ಆದೇಶ ಜಾರಿಗೊಳಿಸಿದೆ. ಅಗಸ್ಟಾ ವೆಸ್ಟ್ಲ್ಯಾಂಡ್, ಐಡಿಎಸ್ ಟ್ಯುನಿಶಿಯದ ಮೂಲಕ ಮಧ್ಯವರ್ತಿಗಳಾದ ಗೈಡೊ ಹಶ್ಕ್ ಹಾಗೂ ಕಾರ್ಲೊ ಗೆರೋಸಾರಿಗೆ ಸುಮಾರು 28 ದಶಲಕ್ಷ ಯೂರೊಗಳನ್ನು ಪಾವತಿಸಿದೆಯೆಂದು ತನಿಖಾಧಿಕಾರಿಗಳಿಗೆ ತಿಳಿದುಬಂದ ಬಳಿಕ ಈ ದಾಳಿಗಳು ನಡೆದಿವೆ.
ಐಡಿಎಸ್ ಟ್ಯುನಿಶಿಯ, ಮೆ. ಇಂಟರ್ಸ್ಟೆಲ್ಲರ್ ಮಾರಿಶಸ್ ಸಹಿತ ವಿವಿಧ ಕಂಪೆನಿಗಳಿಗೆ 12.4 ದಶಲಕ್ಷ ಯೂರೊಗಳನ್ನು ವರ್ಗಾಯಿಸಿದೆ. ಈ ಹಣವು ಮಾರಿಶಸ್, ದುಬೈ ಹಾಗೂ ಸಿಂಗಾಪುರಗಳಲ್ಲಿರುವ ಕಂಪೆನಿಗಳ ಜಾಲವೊಂದರ ಮೂಲಕ ಸಾಗಿದೆ. ಈ ಹಿನ್ನೆಲೆಯಲ್ಲಿ ಅದು, ದಿಲ್ಲಿ, ಮುಂಬೈ ಹಾಗೂ ಹೈದರಾ ಬಾದ್ಗಳಲ್ಲಿರುವ ಭಾರತೀಯ ಕಂಪೆನಿಗಳ 10 ಸ್ಥಳಗಳಿಗೆ ದಾಳಿ ನಡೆಸಿ, ಮಾರಿಶಸ್ನ ಮೆ.ಇಂಟರ್ಸ್ಟೆಲ್ಲಾರ್ಗೆ ಸಂಬಂಧಿಸಿದ ಮೇಲಿನ ಕಂಪೆನಿಗಳಿಂದ ಭಾರತೀಯ ಕಂಪೆನಿಗಳಿಗೆ ನಿಧಿ ವರ್ಗಾವಣೆಯಾದ ಕುರಿತು ಸಾಕ್ಷಗಳನ್ನು ಹೊರ ತೆಗೆದಿದೆ.