ರಾಮ್ದೇವ್ಗೆ ಅರಾವಳಿಯಲ್ಲಿ ಸಾವಿರ ಎಕರೆ ನಿವೇಶನ?
ಹೊಸದಿಲ್ಲಿ, ಜೂ.21: ಯೋಗಗುರು ರಾಮ್ದೇವ್ 1 ಸಾವಿರ ಎಕರೆ ವಿಸ್ತೀರ್ಣದಲ್ಲಿ ಹರಡಲಿರುವ ದೊಡ್ಡ ಯೋಜನೆಯೊಂದರ ಘೋಷಣೆಯನ್ನು ಮಂಗಳವಾರ ಫರಿದಾಬಾದ್ನಲ್ಲಿ ಮಾಡುವ ನಿರೀಕ್ಷೆಯಿದೆ. ಫರಿದಾಬಾದ್ನ ಅರಾವಳಿ ಪರ್ವತಗಳಲ್ಲಿರುವ ಕೋಟ್ ಗ್ರಾಮದಲ್ಲಿ ಪತಂಜಲಿ ಗುಂಪಿನ ಸ್ಥಾಪಕ ಭಾರೀ ಪ್ರಮಾಣದ ಭೂಮಿಯನ್ನು ಪಡೆದಿದ್ದಾರೆ. ಅಲ್ಲಿ ಯೋಗದ ಕುರಿತಾದ ಬೃಹತ್ ಸಂಸ್ಥೆ ಅಥವಾ ಆರೋಗ್ಯ ನಿಗಾ ವ್ಯವಸ್ಥೆ ಮೇಲೇಳುವ ಸಾಧ್ಯತೆಯಿದೆ.
ರಾಮ್ದೇವ್ರ ವಕ್ತಾರ ಈ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
‘‘ಅವಸರವೇನು? ಮಂಗಳವಾರ ಘೋಷಣೆಯಾಗುವವರೆಗೂ ನೀವು ಕಾಯಬೇಕು. ರಾಮ್ದೇವ್ ಫರಿದಾಬಾದ್ನಲ್ಲಿ ದೊಡ್ಡ ಯೋಗ ಕಾರ್ಯಕ್ರಮವೊಂದನ್ನು ನಡೆಸಲಿದ್ದಾರೆ. ಅದರಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಖ್ಯ ಅಭ್ಯಾಗತರಾಗಲಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಫರಿದಾಬಾದ್ನ ಯೋಗ ಶಿಬಿರದಲ್ಲಿ 7 ವಿಶ್ವ ದಾಖಲೆಗಳನ್ನು ಸ್ಥಾಪಿಸಲಾಗುವುದೆಂದು ಅಧಿಕೃತ ಆಹ್ವಾನಪತ್ರ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ, ‘ಹ್ಯಾಪನಿಂಗ್ ಹರ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಮ್ದೇವ್, ರೂ. 5 ಸಾವಿರ ಕೋಟಿ ಬಂಡವಾಳದಲ್ಲಿ ಒಂದು ವಿಶ್ವವಿದ್ಯಾನಿಲಯ ಹಾಗೂ ಒಂದು ಅಂತಾರಾಷ್ಟ್ರೀಯ ಆರೋಗ್ಯ ನಿಗಾ ಕೇಂದ್ರದ ಸ್ಥಾಪನೆಯನ್ನು ಘೋಷಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಸುಪ್ರೀಂ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪೊಂದರನ್ವಯ ಕೋಟ್ ಹಾಗೂ ಅರಾವಳಿಯ ಇತರ ಗ್ರಾಮಗಳ ರಿಜಿಸ್ಟ್ರಿಯನ್ನು ಜಿಲ್ಲಾಧಿಕಾರಿ ಕೆಲವು ವರ್ಷಗಳಿಗೆ ಅಮಾನತುಗೊಳಿಸಿದ್ದರು. ಆದಾಗ್ಯೂ, 2014-15ರಲ್ಲಿ ಅನೇಕ ಭೂ ನೋಂದಣಿಗಳು ನಡೆದಿರುವುದು ತಿಳಿದುಬಂದಿದೆ. ಕೋಟ್ ಗ್ರಾಮದ ಜಮೀನು ಕ್ರೋಡೀಕರಣವನ್ನು 2012ರಲ್ಲಿ ನಿಲ್ಲಿಸಲಾಗಿತ್ತು. ಅದು 2013ರಲ್ಲಿ ಪುನರಾರಂಭ ಗೊಂಡಿತು ಹಾಗೂ ಬಳಿಕ ಪುನಃ ನಿಂತಿತು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿನ ಪ್ರಕರಣವೊಂದರಲ್ಲಿ ಹರ್ಯಾಣ ಸರಕಾರವು, ಕೋಟ್ನಲ್ಲಿ ಜಮೀನು ಕ್ರೋಡೀಕರಣವು 2013ರಲ್ಲಿ ನಿಂತಿದೆಯೆಂದು ತಿಳಿಸಿತ್ತು.
ಗ್ರಾಮದಲ್ಲಿ ಕೃಷಿ ಜಮೀನಿಲ್ಲ. ಆದುದರಿಂದ ಕ್ರೋಡೀಕರಣದ ಅಗತ್ಯವಿಲ್ಲವೆಂದು ಅದು ‘ರೋಜ್ ಕಾ ಗುಜ್ಜರ್’ಗೆ ಅದು ಹೇಳಿತ್ತು. ಬಳಿಕ 2014ರಲ್ಲಿ ಅದನ್ನು ನಿಲ್ಲಿಸಲಾಗಿತ್ತು.
ಯಾವುದಾದರೂ ಯೋಜನೆಗೆ ಅನುಕೂಲ ಕಲ್ಪಿಸಲು ಸರಕಾರವು, ಹೆಚ್ಚಿನದು ಅರಣ್ಯವಾಗಿರುವ ಬೆಟ್ಟಪ್ರದೇಶದ ವಿಭಜನೆಗಾಗಿ ಪುನಃ ಕ್ರೋಡೀಕರಣವನ್ನು ಉಪಯೋಗಿಸಲಿದೆಯೇ ಎಂಬ ಪ್ರಶ್ನೆಯನ್ನು ಇತ್ತೀಚಿನ ವರದಿಗಳು ಎಬ್ಬಿಸಿವೆ.