ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ
-ಸರಕಾರದ ಅನುದಾನ ತಾರತಮ್ಯ ಕುರಿತು ಚರ್ಚೆ

ಸುಳ್ಯ, ಜೂ.22: ಸುಳ್ಯ ನಗರ ಪಂಚಾಯತ್ನ ಸಾಮಾನ್ಯ ಸಭೆಯು ನಗರ ಪಂಚಾಯತ್ನ ಪೌರ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ವೇದಿಕೆಯಲ್ಲಿದ್ದರು.
ಮನೆ ನಿವೇಶನ ಹಕ್ಕುಪತ್ರ ಇದ್ದು, ಆರ್ಟಿಸಿ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಲು ಅವಕಾಶವಿಲ್ಲದೆ ಇರುವುದರಿಂದ ಫಾರ್ಮ್ ನಂಬರ್ 3ರ ಖಾತೆ ತೆರೆದು ಅಂತಹವರಿಗೆ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕೆ.ಎಂ.ಮುಸ್ತಫಾ ಆಗ್ರಹಿಸಿದರು. ಮೀನು ಮಾರುಕಟ್ಟೆ ಬಳಿ ಸರಕಾರಿ ನೌಕರರೊಬ್ಬರಿಗೆ ವ್ಯಾಪಾರಕ್ಕೆ ಸ್ಥಳವನ್ನು ಬಾಡಿಗೆಗೆ ನೀಡಿದ ಕ್ರಮ ಸರಿಯಲ್ಲ. ಅವರು ಅಲ್ಲಿ ಒಳ ಬಾಡಿಗೆ ನೀಡಿದ್ದಾರೆ ಎಂದು ಸದಸ್ಯ ಗೋಕುಲ್ದಾಸ್ ಆರೋಪಿದರು. ತೋಟಗಾರಿಕಾ ಇಲಾಖೆಗೆ ಹಾಪ್ಕಾಮ್ಸ್ ಮಳಿಗೆ ಆರಂಭಿಸಲು ನೀಡಿದ್ದ ಸ್ಥಳವೂ ಈಗ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಮುಸ್ತಫಾ ದೂರಿದರು.
ಮಳೆಗಾಲ ಆರಂಭವಾಗಿದ್ದು ರಸ್ತೆ ಚರಂಡಿಯನ್ನು ತಕ್ಷಣ ದುರಸ್ತಿ ಮಾಡುವಂತೆ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ತಿಂಗಳೂ ಸಭೆಯಲ್ಲಿ ಹಿಂದಿನ ತಿಂಗಳ ಜಮಾ-ಖರ್ಚು ನೀಡಬೇಕು ಎಂದು ಗೋಕುಲ್ದಾಸ್ ಒತ್ತಾಯಿಸಿದರು.
ಯಡಿಯೂರಪ್ಪ ಸರಕಾರವಿದ್ದಾಗ ಮೊದಲ ವರ್ಷ ಎರಡೂವರೆ ಕೋಟಿ ಬಳಿಕ 5 ಕೋಟಿ ಮೂರನೆ ವರ್ಷ ಏಳುವರೆ ಕೋಟಿ ರೂ. ನಗರೋತ್ಥಾನ ಯೋಜನೆಯಲ್ಲಿ ನಗರ ಪಂಚಾಯತ್ಗೆ ಬಂದಿದೆ. ಆ ಬಳಿಕ ರಾಜ್ಯ ಸರಕಾರದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಈ ವರ್ಷ ಕೇವಲ 88 ಲಕ್ಷ ರೂ. ಅನುದಾನ ಮಾತ್ರ ಬಂದಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು. 2 ವರ್ಷದಿಂದ ವಸತಿ ಯೋಜನೆಗೆ ಅನುದಾನವೂ ಬಂದಿಲ್ಲ ಎಂದವರು ಹೇಳಿದರು.
ಯಡಿಯೂರಪ್ಪ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ ಎಂದು ಮುಸ್ತಫಾ ಹೇಳಿದ್ದು ಸಭೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಎಸ್ಎಫ್ಸಿಯಲ್ಲಿ ಈ ವರ್ಷ 33 ಲಕ್ಷ ರೂ. ಮಾತ್ರ ಬಂದಿದೆ. ಉಳಿದ ಕಡೆಗಳಿಗೆ 50ರಿಂದ 60 ಲಕ್ಷ ರೂ. ನೀಡಲಾಗಿದೆ. ಅನುದಾನ ನೀಡುವಾಗಲೂ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
ಒಳಚರಂಡಿಗೆ ಸಂಪರ್ಕ ನೀಡಿ ಒಂದು ವರ್ಷ ಆಗಿದೆ. ಮನೆ-ಮನೆ ಕಸ ಸಂಗ್ರಹವೂ ಆರಂಭವಾಗಿದೆ. ಹಾಗಿದ್ದೂ ಯಾವುದಕ್ಕೂ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂದು ನಗರ ಪಂಚಾಯತ್ ಸದಸ್ಯ ಕೆ.ಎಂ.ಮುಸ್ತಫಾ ದೂರಿದ್ದಾರೆ. ಒಳಚರಂಡಿ ಹಾಗೂ ಕಸ ಸಂಗ್ರಹದ ನಿರ್ವಹಣೆಯೇ ಸರಿಯಾಗಿ ಮಾಡುತ್ತಿಲ್ಲ, ಮತ್ತೆ ಹೇಗೆ ಶುಲ್ಕ ವಸೂಲಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಒಳಚರಂಡಿ ಸಂಪರ್ಕಕ್ಕೆ ಹಾಗೂ ಮನೆ-ಮನೆ ಕಸ ಸಂಗ್ರಹಕ್ಕೆ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಇದುವರೆಗೆ ಶುಲ್ಕ ವಸೂಲಿ ಮಾಡುತ್ತಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಪ್ರಕಾಶ್ ಹೆಗ್ಡೆ ಹೇಳಿದರು.
ಒಳಚರಂಡಿ ಕಾಮಗಾರಿಯಲ್ಲಿ ಆರಂಭದಿಂದ ಕೊನೆಯವರೆಗೂ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕಮಿಶನ್ ಮಾಡದೆ ಸಂಪರ್ಕ ನೀಡಲಾಗಿದೆ. ತಾನು ಅದಕ್ಕಾಗಿ ಹಲವು ಬಾರಿ ಹೋರಾಟ ಕೂಡಾ ಮಾಡಿದ್ದೇನೆ ಎಂದು ಅವರು ಹೇಳಿದರು. ಕೋಳಿ ಅಂಗಡಿಗಳನ್ನು ಹಳೆ ಮೀನು ಮಾರುಕಟ್ಟೆಗೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರೂ ಇನ್ನೂ ಯಾಕೆ ಸ್ಥಳಾಂತರ ಮಾಡಿಲ್ಲ ಎಂದು ಗೋಕುಲ್ದಾಸ್ ಪ್ರಶ್ನಿಸಿದರು.
ಪ್ರತಿ ವಾರ್ಡಿನಲ್ಲೂ ವಾರ್ಡು ಸಬೆ ನಡೆಸುವುದಾಗಿ ಅಧ್ಯಕ್ಷರು ಹೇಳಿದ್ದು ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಮುಸ್ತಫಾ ದೂರಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವಂತೆ ಬಸ್ ನಿಲ್ದಾಣದ ಎದುರು ಶೀಟ್ ಹಾಕಿ ಆಸನ ವ್ಯವಸ್ಥೆ ಮಾಡುವಂತೆ ಅವರು ಆಗ್ರಹಿಸಿದರು. 14ನೆ ಹಣಕಾಸು ಯೋಜನೆಯಲ್ಲಿ ಒಂದು ಕೋಟಿ ಅನುದಾನದಲ್ಲಿ 5 ಲಕ್ಷ ರೂ.ನ್ನು ಇತರ ಧರ್ಮದವರ ಸ್ಮಶಾನ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಮುಸ್ತಫಾ ಒತ್ತಾಯಿಸಿದರು.
ಒಳಚರಂಡಿ ಯೋಜನೆಗೆ ಬಂದ ಅನುದಾನದಲ್ಲಿ ಬಳಕೆಯಾಗದೆ ಉಳಿದ 56 ಲಕ್ಷ ರೂ.ನ್ನು ವರ್ಗ ಒಂದಕ್ಕೆ ವರ್ಗಾಯಿಸಿ ಅದನ್ನು ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಹಂಚಬೇಕೆಂದು ಎನ್.ಎ.ರಾಮಚಂದ್ರ ಹೇಳಿದರು. ಇದಕ್ಕೆ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಒಪ್ಪಿಗೆ ಸೂಚಿಸಲಿಲ್ಲ. ಅಧ್ಯಕ್ಷರ ವಿವೇಚನೆಯ ಕೆಲಸಕ್ಕೆ 30 ಲಕ್ಷ ರೂ. ಮುಗಿದಿದೆ. ಅದನ್ನು ಕಳೆದ ಉಳಿಕೆ ಹಣವನ್ನು ಸಮಾನವಾಗಿ ಹಂಚುವ ಎಂದವರು ಹೇಳಿದರು. ಬಳಿಕ ಸಾಕಷ್ಟು ಚರ್ಚೆ ನಡೆದ ಅಧ್ಯಕ್ಷರ ವಿವೇಚನಾ ಕೋಟಕ್ಕೆ 15 ಲಕ್ಷ ರೂ. ನೀಡಿ ಉಳಿಕೆ ಹಣವನ್ನು ಹಂಚುವುದೆಂದು ನಿರ್ಧರಿಸಲಾಯಿತು. ಎಸ್ಎಫ್ಸಿಯಲ್ಲಿ 83 ಲಕ್ಷ ರೂ.ಅನುದಾನ ಬಂದಿದ್ದು, ಅದರಲ್ಲಿ ಮೀಸಲು ನಿಗದಿ ಮಾಡಿ ಉಳಿಕೆ ಹಣವನ್ನು ಪ್ರತಿ ವಾರ್ಡಿಗೆ 75 ಸಾವಿರದಂತೆ ಹಂಚುವುದೆಂದು ನಿರ್ಣಯಿಸಲಾಯಿತು.
ಸ್ವಚ್ಛ ನಗರ ಪ್ರಶಸ್ತಿಗೆ ಬಂದ ಸರ್ಟಿಫಿಕೇಟ್ಗಳನ್ನು ಸಭೆಯಲ್ಲಿ ಸದಸ್ಯರಿಗೆ ವಿತರಿಸಲಾಯಿತು.







