ಇಸ್ರೊದಿಂದ ಮತ್ತೊಂದು ಐತಿಹಾಸಿಕ ಸಾಧನೆ
ಪಿಎಸ್ಎಲ್ವಿ-ಸಿ34 ಯಶಸ್ವಿ ಉಡಾವಣೆ
ಏಕಕಾಲಕ್ಕೆ 20 ಉಪಗ್ರಹಗಳು ಅಂತರಿಕ್ಷಕ್ಕೆ
ಶ್ರೀಹರಿಕೋಟಾ(ಆ.ಪ್ರ.), ಜೂ.22: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಇಂದು ದಾಖಲೆಯ 20 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ಹಾರಿಸಲಾದ ತನ್ನ ಮಹತ್ವಾಕಾಂಕ್ಷಿ ಪಿಎಸ್ಎಲ್ವಿ ರಾಕೆಟ್ನ ಮೂಲಕ ಇಸ್ರೊ 26 ನಿಮಿಷಗಳಲ್ಲಿ ಈ ಕೆಲಸವನ್ನು ಪೂರೈಸಿದೆ.
ಧ್ರುವೀಯ ಉಪಗ್ರಹ ಉಡಾವಣಾ ವಾಹನವು(ಪಿಎಸ್ಎಲ್ವಿ) ‘ತನ್ನ ಕೆಲಸವನ್ನು ಪೂರೈಸಿದೆ’ ಎಂದು ಇಸ್ರೊದ ಅಧ್ಯಕ್ಷ ಎ.ಕೆ. ಕಿರಣ್ಕುಮಾರ್ ಹೇಳಿದ್ದಾರೆ.
320 ಟನ್ ಭಾರದ ಪಿಎಸ್ಎಲ್ವಿ-ಸಿ34, ಕೆನಡಾ, ಇಂಡೊನೇಶ್ಯ, ಜರ್ಮನಿ ಹಾಗೂ ಅಮೆರಿಕಗಳ ಒಟ್ಟು 17 ಸಣ್ಣ ಉಪಗ್ರಹಗಳನ್ನು ಹೊತ್ತಿದ್ದರೂ, 727 ಕಿ.ಗ್ರಾಂ ಭಾರದ ಭಾರತೀಯ ಭೂ ವೀಕ್ಷಣಾ ಉಪ ಗ್ರಹ-ಕಾರ್ಟೊಸ್ಯಾಟ್-ಪ್ರಧಾನ ಪ್ರಯಾಣಿಕನಾಗಿತ್ತು. ಇದರೊಂದಿಗೆ ಸತ್ಯಭಾಮಾ ಸ್ಯಾಟ್ ಸ್ವಯಂ ಎಂಬ ಹೆಸರಿನ 2 ಭಾರತೀಯ ಶೈಕ್ಷಣಿಕ ಸಮುದಾಯದಿಂದ ನಿರ್ಮಿತ ಉಪಗ್ರಹಗಳೂ ಇದ್ದವು.
ಟೆರ್ರಾಬೆಲ್ಲಾ ನಿರ್ಮಿತ ಭೂ ಚಿತ್ರೀಕರಣ ಉಪಗ್ರಹ, ಅತ್ಯಂತ ನಿಖರ ಚಿತ್ರಗಳನ್ನು ತೆಗೆಯಬಲ್ಲ ಸ್ಕೈಸ್ಯಾಟ್ ಜೆನ್-2 ಎಂಬ 110 ಕಿ.ಗ್ರಾಂನ ಗೂಗಲ್ ಉಪಗ್ರಹಗಳ ಸಹಿತ ಅಮೆರಿಕ ನಿರ್ಮಿತ 13 ಉಪಗ್ರಹಗಳು ಇಂದು ಕಕ್ಷೆಗೆ ಸೇರಿವೆ. ಸುಮಾರು 1,288 ಕಿ.ಗ್ರಾಂ ತೂಕದ 20 ಉಪಗ್ರಹಗಳ ಉಡಾವಣೆಗೆ ತಗಲಿದ ವೆಚ್ಚ, ಇತರ ಬಾಹ್ಯಾಕಾಶ ಸಂಸ್ಥೆ ಗಳಿಗೆ ತಗಲಬಹುದಾಗಿದ್ದ ವೆಚ್ಚದ ಕೇವಲ ಅರ್ಧದಷ್ಟು.
ಭಾರತದ ಕಾರ್ಟೊಸ್ಯಾಟ್-2 ಸರಣಿಯು ಈ ಹಿಂದಿನ ಕಾರ್ಟೊಸ್ಯಾಟ್-2, 2ಎ ಹಾಗೂ 2ಬಿಗಳಂತೆಯೇ ಇದೆ. ಕಾರ್ಟೊಸ್ಯಾಟ್ ಕಳುಹಿಸುವ ಛಾಯಾಚಿತ್ರಗಳು ಭೂಪಟ ಲೇಖನ, ನಗರ, ಗ್ರಾಮೀಣ, ಕರಾವಳಿಯ ಭೂ ಉಪಯೋಗ, ನೀರಿನ ಹಂಚಿಕೆ ಹಾಗೂ ಇತರ ಕೆಲಸಗಳಿಗೆ ಉಪಯೋಗವಾಗುತ್ತವೆ.
ಒಂದೇ ಬಾರಿಗೆ 20 ಉಪಗ್ರಹಗಳ ಉಡಾವಣೆಯೆಂದರೆ ಹಕ್ಕಿಗಳನ್ನು ಗಗನಕ್ಕೆ ಹಾರಿ ಬಿಟ್ಟಂತೆ. ಬಾಹ್ಯಾಕಾಶಕ್ಕೆ ಸೇರಿಸಲಾಗಿರುವ ಪ್ರತಿ ಉಪಗ್ರಹವೂ ತನ್ನದೇ ಆದ ಚಟುವಟಿಕೆಯನ್ನು ನಡೆಸಲಿದೆ. ಅದು ಇತರ ಉಪಗ್ರಹಗಳಿಂದ ಸ್ವತಂತ್ರವಾಗಿರುತ್ತದೆ. ಪ್ರತಿಯೊಂದೂ ಯಾವುದಕ್ಕಾಗಿ ವಿನ್ಯಾಸಿಸಲಾಗಿದೆಯೋ ಅಷ್ಟು ಕಾಲದ ಅದ್ಭುತ ಆಯುಷ್ಯವನ್ನು ಪಡೆದಿರುತ್ತದೆಂದು ಇಸ್ರೋ ಅಧ್ಯಕ್ಷ ಈ ಮೊದಲು ಎನ್ಡಿಟಿವಿಗೆ ತಿಳಿಸಿದ್ದರು.
ಒಂದೇ ರಾಕೆಟ್ನಲ್ಲಿ ಇಸ್ರೊ 10ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಕಳುಹಿಸಿರುವುದು ಇದು ಪ್ರಥಮವಾಗಿದೆ.
ಇಸ್ರೊಗೆ ಪ್ರಧಾನಿ ಅಭಿನಂದನೆ
ಹೊಸದಿಲ್ಲಿ, ಜೂ.22: ಒಂದೇ ಬಾರಿಗೆ 20 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ ಇಸ್ರೊದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಶ್ಲಾಘಿಸಿದ್ದಾರೆ. ಇಸ್ರೊ ಹೊಸ ಅಡ್ಡಿಗಳನ್ನು ಮುರಿಯುವುದನ್ನು ಮುಂದುವರಿಸಿದೆಯೆಂದು ಅವರು ಹೇಳಿದ್ದಾರೆ.
ಜನರ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿ ವರ್ತನೀಯ ಶಕ್ತಿಯನ್ನು ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತೆ ಮತ್ತೆ ತೋರಿಸಿವೆಯೆಂದು ಪ್ರಧಾನಿ ಟ್ವೀಟಿಸಿದ್ದಾರೆ.
ಅನೇಕ ವರ್ಷಗಳಿಂದ ಇತರ ದೇಶಗಳ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ನಾವು ಕೌಶಲ ಹಾಗೂ ಸಾಮರ್ಥ್ಯ ವನ್ನು ಅಭಿವೃದ್ಧಿಪಡಿಸಿಕೊಂಡಿದ್ದೇವೆ. ಇದು ನಮ್ಮ ವಿಜ್ಞಾನಿಗಳ ಕೌಶಲವೆಂದು ಅವರು ಕೊಂಡಾಡಿದ್ದಾರೆ. ಈ ಮಹತ್ವದ ಸಾಧನೆಗಾಗಿ ಇಸ್ರೊವನ್ನು ಪ್ರಧಾನಿ ಅಭಿನಂದಿಸಿದ್ದಾರೆ. ಪುಣೆ ಹಾಗೂ ಚೆನ್ನೈಯ ವಿದ್ಯಾರ್ಥಿಗಳು ಉಪಗ್ರಹಗಳನ್ನು ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಅವರು ಹೊಗಳಿದ್ದಾರೆ.