ಕೊಣಾಜೆ: ಹಸಿರುಗ್ರಾಮ ನಿರ್ಮಾಣದ ಸಂಕಲ್ಪ
![ಕೊಣಾಜೆ: ಹಸಿರುಗ್ರಾಮ ನಿರ್ಮಾಣದ ಸಂಕಲ್ಪ ಕೊಣಾಜೆ: ಹಸಿರುಗ್ರಾಮ ನಿರ್ಮಾಣದ ಸಂಕಲ್ಪ](https://www.varthabharati.in/sites/default/files/images/articles/2016/06/23/23mdp1.jpg)
ಕೊಣಾಜೆ, ಜೂ.23: ಬಂಟ್ವಾಳ ತಾಲೂಕಿನ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಪರಿಸರ ದಿನಾಚರಣೆಯನ್ನು ಹಸಿರು ಗ್ರಾಮ ನಿರ್ಮಾಣ ಸಂವಾದ ಹಾಗೂ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಜನಶಿಕ್ಷಣ ಟ್ರಸ್ಟ್, ಸುಗ್ರಾಮ ಸಂಘದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.
ಪರಿಸರ ದಿನಾಚರಣೆಯ ಮಹತ್ವ ಮತ್ತು ಅಗತ್ಯದ ಕುರಿತು ಮಹಾತ್ಮ ಗಾಂಧಿ ನರೇಗ ಮಾಜಿ ಒಂಬುಡ್ಸ್ಮೆನ್ ಶೀನ ಶೆಟ್ಟಿ ಮಾಹಿತಿ ನೀಡಿ ಅನುಭವ ವಿನಿಮಯ, ಚರ್ಚೆ ಸಂವಾದ ನಡೆಸಿದರು.
ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಉಡುಪಿ ತಾಲೂಕಿನ 60 ಗ್ರಾ.ಪಂ.ಗಳ ಸುಗ್ರಾಮ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸದಸ್ಯರ ಮನೆಗಳ ವಠಾರಗಳಲ್ಲಿ ತಲಾ 2ಇಂಗು ಗುಂಡಿ ಹಾಗೂ ತಲಾ 10ರಂತೆ ಹಣ್ಣಿನ ಗಿಡಗಳನ್ನು ನೆಡುವ, ಅಂಗನವಾಡಿ, ಶಾಲೆ, ಪಂಚಾಯಿತಿ ಕಚೇರಿ ವಠಾರ , ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಗ್ರಾಮಗಳನ್ನು ನಿರ್ಮಿಸಿ ನೆಲ ಜಲ ಸಂರಕ್ಷಣೆಗೆ ಯೋಜನೆ ರೂಪಿಸಲಾಯಿತು. ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕಿ ಚಂಚಲ, ಸಮುದಾಯ ಸಂಘಟಕಿಯರಾದ ದಿವ್ಯಾ, ದೀಪಿಕಾ, ಬಾಳೆಪುಣಿ ಗ್ರಾ.ಪಂ. ಸದಸ್ಯೆ ಲೀಲಾ, ನೌಕರ ಸದಾನಂದ, ಪ್ರೇರಕಿ ಜಯಾ ಸಹಕರಿಸಿದರು.