ಭಿನ್ನಮತ ಬೇಡ: ಅತೃಪ್ತರಿಗೆ ಕಿಮ್ಮನೆ ಕಿವಿಮಾತು

ಬೆಂಗಳೂರು, ಜೂ.25: ಸಚಿವ ಸಂಪುಟ ಪುನಾರಚನೆಯಿಂದ ಉಂಟಾಗಿರುವ ಸಮಸ್ಯೆ ಯನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಂಡು ಮುಖ್ಯಮಂತ್ರಿಗೆ ಹಾಗೂ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಮತ್ತು ಪಿ.ಟಿ.ಪರಮೇಶ್ವರ್ ನಾಯಕ್ ಭಿನ್ನಮತೀಯರಿಗೆ ಸಲಹೆ ನೀಡಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಕಿಮ್ಮನೆ ರತ್ನಾಕರ, ಅಧಿಕಾರದ ಆಮಿಷ ಹಾಗೂ ಭ್ರಷ್ಟಾಚಾರದಿಂದ ಹಿಂದಿನ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡಿತ್ತು. ಇದರಿಂದ ನಾವು ಪಾಠ ಕಲಿಯುವ ಜೊತೆಗೆ ಸಚಿವ ಸಂಪುಟ ಪುನಾರಚನೆಯಿಂದ ಬಂದಿರುವ ಸಮಸ್ಯೆಯನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಕುಟುಂಬದೊಳಗಿನ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡು ವುದು ಸರಿಯಲ್ಲ ಎಂದು ನುಡಿದರು.
ಅಸಮರ್ಥರು ಅಥವಾ ಅನರ್ಹರು ಎಂಬ ಕಾರಣದಿಂದ ಯಾರನ್ನೂ ಸಚಿವ ಸಂಪುಟದಿಂದ ಕೈಬಿಟ್ಟಿಲ್ಲ. ಇತರೆ ಕಾಂಗ್ರೆಸ್ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೆಲವರನ್ನು ಕೈಬಿಡಲಾಗಿದೆ. ಇದು ಹೈಕಮಾಂಡ್ನ ನಿರ್ಧಾರ. ಮತ್ತೊಬ್ಬರಿಗೆ ಅವಕಾಶ ನೀಡಲು ಎಲ್ಲರೂ ಕೈಜೋಡಿಸ ಬೇಕು. ಇದರಿಂದ ಪಕ್ಷವು ಬಲಗೊಳ್ಳಲಿದೆ ಎಂದು ಕಿಮ್ಮನೆ ಹೇಳಿದರು.
ಯಾವುದೇ ವಿಷಯದಲ್ಲಿ ಅಸಮಾಧಾನ, ಪ್ರತಿರೋಧ, ನೋವು ಪಕ್ಷದೊಳಗೆ ಇತ್ಯರ್ಥ ಮಾಡಿಕೊಳ್ಳ ಬೇಕು. ಸಿದ್ದರಾಮಯ್ಯ ಅವರಿಗೆ, ಪಕ್ಷದ ಅಧ್ಯಕ್ಷರಿಗೆ, ಉತ್ತಮ ಸರಕಾರ ನೀಡಲು ಸಹಕಾರ ನೀಡಬೇಕಾಗಿದೆ. ಎಲ್ಲರಿಗೂ ಮಂತ್ರಿಯಾಗುವ ಸಾಮರ್ಥ್ಯ ಇದೆ. ನಮ್ಮನ್ನು ಮೊದಲ ಪಂಕ್ತಿಯಲ್ಲಿ ಗುರುತಿಸಿದ್ದಾರೆ ಎಂದ ಅವರು, ಪಕ್ಷದಲ್ಲಿರುವ ಬಿಕ್ಕಟ್ಟು, ವೈಯಕ್ತಿಕ ನೋವನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳಬೇಕು. ನಮಗೆ ಕೊಟ್ಟ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಬೇರೆಯವರಿಗೂ ಅವಕಾಶ ಮಾಡಿಕೊಡು ವುದು ನಮ್ಮ ಕರ್ತವ್ಯ ಎಂದರು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಯಾದ ಹಿನ್ನೆಲೆಯಲ್ಲಿಯೇ ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಿಮ್ಮನೆ, ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದ ನನ್ನನ್ನು ಕೈಬಿಟ್ಟಿದ್ದಾರೆ ಎನ್ನುವ ಮಾತು ಸುಳ್ಳು ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಪರಮೇಶ್ವರ್ ನಾಯಕ್ ಮಾತನಾಡಿ, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಪ್ರಕರಣಕ್ಕೂ, ಮಂತ್ರಿ ಸ್ಥಾನಕ್ಕೂ ಸಂಬಂಧವಿಲ್ಲ. ಪಕ್ಷ ಕೊಟ್ಟ ತೀರ್ಮಾನಕ್ಕೆ ನಾವು ಬದ್ಧ. ನನ್ನಂತಹವನನ್ನು ಗುರುತಿಸಿದ್ದು ದೊಡ್ಡ ನಿರ್ಧಾರ. ಸಮರ್ಥರು, ಅಸಮರ್ಥರು ಎಂಬ ವಿಚಾರ ಪಕ್ಷದಲ್ಲಿಲ್ಲ. ಸಿಎಂ ನಿರ್ಧಾರಕ್ಕೆ ನಮ್ಮ ಒಪ್ಪಿಗೆಯಿದೆ ಎಂದರು.





