ಮೋದಿಗೆ ಮೊರೆ: ಆರರ ಬಾಲೆಗೆ ಜೀವದಾನ
ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಬಾಲಕಿ
ಪುಣೆ: ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಇಲ್ಲಿನ ಎರಡನೇ ತರಗತಿ ವಿದ್ಯಾರ್ಥಿನಿ ವೈಶಾಲಿ ಇದೀಗ ಮನೆಮಾತು. ಪ್ರಧಾನಿ ನರೇಂದ್ರ ಮೋದಿಯವರ ಸಕಾಲಿಕ ನೆರವಿನಿಂದ ಈಕೆ ಮರುಹುಟ್ಟು ಪಡೆದಿದ್ದಾಳೆ. ಹೃದಯ ರಂಧ್ರದ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಬಾಲಕಿ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.
ಹೃದಯದಲ್ಲಿ ರಂಧ್ರ ಇರುವ ತನ್ನ ಸಮಸ್ಯೆ, ಇದರ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚ, ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಒಪ್ಪವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿವರಿಸಿದ ಬಾಲೆ ಸಹಾಯಕ್ಕಾಗಿ ಮನವಿ ಮಾಡಿದ್ದಳು. ವೈಶಾಲಿ ಯಾದವ್ ತಂದೆ ಪೈಂಟರ್ ಆಗಿದ್ದು, ಇಷ್ಟೊಂದು ದುಬಾರಿ ವೆಚ್ಚ ಭರಿಸುವ ಸ್ಥಿತಿಯಲ್ಲಿರಲಿಲ್ಲ. ಮಗಳ ಔಷಧಿಗಾಗಿ ಆಕೆಯ ಆಟಿಕೆ ಹಾಗೂ ಬೈಸಿಕಲ್ ಕೂಡಾ ಮಾರಬೇಕಾಯಿತು.
ಮೋದಿಗೆ ಪತ್ರ ಬರೆದು ವಾರದಲ್ಲೇ ಪ್ರಧಾನಿ ಕಚೇರಿ ಈ ಬಗ್ಗೆ ಕ್ರಮ ಕೈಗೊಂಡು, ಆಕೆಗೆ ಅಗತ್ಯ ಚಿಕಿತ್ಸೆ ನೀಡುವಂತೆ ಪುಣೆ ಜಿಲ್ಲಾ ಆಸ್ಪತ್ರೆಗೆ ಸೂಚಿಸಿತ್ತು. "ಪುಟ್ಟ ವೈಶಾಲಿ ನೆರವು ಕೋರಿ ಪತ್ರ ಬರೆದಿದ್ದಳು. ಇದೀಗ ಸಕಾಲಿಕ ನೆರವು ನೀಡಲು ಸಾಧ್ಯವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ಆಗಿರುವುದು ನಿಜಕ್ಕೂ ಸಂತೋಷ ಎನಿಸುತ್ತದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶನಿವಾರ ಪುಣೆಯಲ್ಲಿ ಮೋದಿಯನ್ನು ಭೇಟಿ ಮಾಡಿದ ಬಾಲಕಿ ಕೃತಜ್ಞತೆ ಸಲ್ಲಿಸಿದ್ದಾಳೆ. ಪುಣೆ ಭೇಟಿ ಅವಧಿಯಲ್ಲಿ ಮೋದಿ, ಯುವಕರು ಹಾಗೂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದರು.