ರಂಗ ಸಾಧಕನ ಸುವರ್ಣ ಸಂಭ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ,ಜೂ.26 : ಇಂದು ಎಸ್.ಮಂಗಳೂರು ಅಭಿನಂದನಾ ಸಮಿತಿ ಮೂಡುಬಿದಿರೆ ಇದರ ವತಿಯಿಂದ ಜೂ.31ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿರುವ ರಂಗ ಸಾಧಕ, ಸ್ತ್ರೀ ಪಾತ್ರಧಾರಿ, ಇಂದು ಎಸ್.ಮಂಗಳೂರು ಅವರ ಸುವರ್ಣ ಸಂಭ್ರಮದ ಅಮಂತ್ರಣ ಪತ್ರಿಕೆಯನ್ನು ಚಲನಚಿತ್ರ ನಟ ಸುಂದರ ರೈ ಮಂದಾರ ಅವರು ಸಮಾಜ ಮಂದಿರದ ಆವರಣದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸುಂದರ ರೈ ಅವರು ನಾಟಕ ಕಲಾವಿದರಿಗೆ ದೊಡ್ಡ ಮಟ್ಟದಲ್ಲಿ ಗೌರವ ಸಿಗುವುದು ವಿರಳ. ರಂಗ ಕಲಾವಿದರು ಓರ್ವ ಮೇಲ್ಮಟ್ಟದಲ್ಲಿ ನಿಲ್ಲುವ ಕಲಾವಿದನನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು, ಮತ್ತೊಬ್ಬ ಕಲಾವಿದನ ಉದಯಕ್ಕೆ ಮೈಲಿಗಲ್ಲಾಗಲಿ. ಅಭಿನಂದನಾ ಕಾರ್ಯಕ್ರಮಗಳು ಕಲಾವಿದನಿಗೆ ಸಿಗುವ ದೊಡ್ಡ ಗೌರವವಾಗಿದೆ ಇಂತಹ ಮಹತ್ವದ ಕಾರ್ಯಕ್ರಮಗಳು ಅರ್ಥಪೂರ್ಣ ಎಂದು ಹೇಳಿದರು.
ರಂಗ ಪ್ರೋತ್ಸಾಹಕ, ಪುರಸಭಾ ಸದಸ್ಯ ರಾಜೇಶ್ ಕೋಟೆಗಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಾವಿದ ಹೆಚ್.ಕೆ ನಯನಾಡು ಮಾತನಾಡಿ ಇಂದು ಶೇಖರ್ ಅವರು ಉತ್ತಮ ಗುಣ ನಡತೆಯ ಕಲಾವಿದ. ಓರ್ವ ಉತ್ತಮ ಸ್ತ್ರೀ ಪಾತ್ರಧಾರಿಯಾಗಿ 50 ವರ್ಷಗಳನ್ನು ರಂಗಭೂಮಿಯಲ್ಲಿ ಕಳೆದಿದ್ದರೂ ಯಾವುದೇ ಅಹಂ ಇಲ್ಲದ ಕಲಾವಿದ ಎಂದು ಶ್ಲಾಘಿಸಿದರು. ಚಲನಚಿತ್ರ ನಟ ಸುರೇಶ್ ಅಂಚನ್, ಕಾರ್ಯಕಾರಿ ಸಮಿತಿಯ ಹೆರಾಲ್ಡ್ ತಾವ್ರೋ, ಸುರೇಶ್ ಜೋಡುಕಲ್ ಹಾಗೂ ಮಂಜು ಕಾರ್ಕಳ ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ಮಣಿ ಕೋಟೆಬಾಗಿಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಸಮಿತಿಯ ಸದಸ್ಯ ವಿಶ್ವನಾಥ ಶೆಟ್ಟಿ ವಂದಿಸಿದರು.







