ಜೆಎನ್ಯು ಆವರಣದ ರಸ್ತೆಗಳಿಗೆ ದಾರ್ಶನಿಕರ ಹೆಸರಿಡಲು ನಿರ್ಧಾರ
ಹೊಸದಿಲ್ಲಿ, ಜೂ.26: ತನ್ನ ಕೇಂದ್ರ ಪುಸ್ತಕಭಂಡಾರಕ್ಕೆ ಡಾ. ಬಿ.ಆರ್. ಅಂಬೇಡ್ಕರರ ಹೆಸರನ್ನಿರಿಸಲು ನಿರ್ಧರಿಸಿದ ಬಳಿಕ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವು (ಜೆಎನ್ಯು) ತನ್ನ ಆವರಣದೊಳಗಿನ ರಸ್ತೆಗಳಿಗೆ, ಜವಾಹರಲಾಲ್ ನೆಹರೂ ಹಾಗೂ ರಾಮ ಮನೋಹರ ಲೋಹಿಯಾರಂತಹ ದಾರ್ಶನಿಕರ ಹೆಸರುಗಳನ್ನಿರಿಸಲು ಚಿಂತಿಸುತ್ತಿದೆ.
ವಿವಿಯ ಕಾರ್ಯಕಾರಿ ಆವರಣದೊಳಗಿನ ವಿವಿಧ ರಸ್ತೆಗಳಿಗೆ ರಾಮಮನೋಹರ ಲೋಹಿಯಾ ಹಾಗೂ ಜವಾಹರಲಾಲ್ ನೆಹರೂರಂತಹ ದಾರ್ಶನಿಕರ ಹೆಸರುಗಳನ್ನು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಸಮಿತಿಯು ಮಂಜೂರಾತಿ ನೀಡಿದೆ. ಆದರೆ, ಹೆಸರುಗಳನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ದಾರ್ಶನಿಕರ ಹೆಸರುಗಳನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸುವ ಸಂಭವವಿದೆ. ಆ ಬಳಿಕವೇ ರಸ್ತೆಗಳಿಗೆ ಮರು ನಾಮಕರಣ ಮಾಡಲಾಗುವುದೆಂದು ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ವಿವಿಯ ಕೇಂದ್ರ ಗ್ರಂಥಾಲಯಕ್ಕೆ ಬಿ.ಆರ್. ಅಂಬೇಡ್ಕರರ ಹೆಸರಿಡುವಂತೆ ಆರೆಸ್ಸೆಸ್ನ ವಿದ್ಯಾರ್ಥಿ ಘಟಕವಾಗಿರುವ ಎಬಿವಿಪಿ ಒತ್ತಾಯಿಸಿತ್ತು.
ಕ್ಯಾಂಪಸ್ನ ಎಡಪಂಥೀಯ ಬೆಂಬಲಿತ ಗುಂಪುಗಳೊಂದಿಗೆ ಸೈದ್ಧಾಂತಿಕ ಸಮರದಲ್ಲಿ ತೊಡಗಿರುವ ಎಬಿವಿಪಿ, ವಿವಿ ಆವರಣದಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆ ಸ್ಥಾಪಿಸುವಂತೆ ಎಪ್ರಿಲ್ನಲ್ಲಿ ಆಗ್ರಹಿಸಿತ್ತು.