ಕೌಶಲ್ಯಾಭಿವೃದ್ಧಿ ಕುರಿತ ಸಮೀಕ್ಷಾ ವರದಿ ಬಿಡುಗಡೆ
ಮಣಿಪಾಲ, ಜೂ.26: ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹಿಂದೆಂದಿಗಿಂತಲೂ ಅಧಿಕ ಮಹತ್ವ ಬಂದಿದೆ ಎಂದು ಮಣಿಪಾಲ್ ಸಿಟಿ ಆ್ಯಂಡ್ ಗಿಲ್ಡ್ಸ್ ಸಂಸ್ಥೆಯ ಮುಖ್ಯಸ್ಥ ರಾಜೇಶ್ ಕೈಮಾಲ್ ಅಭಿ ಪ್ರಾಯಪಟ್ಟಿದ್ದಾರೆ.
ದಿ ಸಿಟಿ ಆ್ಯಂಡ್ ಗಿಲ್ಡ್ಸ್ ಗ್ರೂಪ್ ವತಿಯಿಂದ ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ಸಮೀಕ್ಷಾ ವರದಿ ‘ಸ್ಕಿಲ್ಸ್ ಕಾನ್ಫಿಡೆನ್ಸ್ ರಿಪೋರ್ಟ್’ನ್ನು ಇತ್ತೀಚೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದಿನ ಕೌಶಲ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಕಾರ್ಮಿಕರಲ್ಲಿ ಅಥವಾ ಉದ್ಯೋಗಿಗಳಲ್ಲಿ ಇರುವ ವಿಶ್ವಾಸದ ಮಟ್ಟವನ್ನು ಅಧ್ಯಯನ ಮಾಡುವುದು ಈ ಸಮೀಕ್ಷೆಯ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು.
ಕೌಶಲ್ಯ ಅಂತರದಿಂದಾಗಿ ಉತ್ಪಾದನೆ ಪ್ರಮಾಣ ಕುಸಿಯುತ್ತಿದೆ ಎಂದು ಶೇ.40ರಷ್ಟು ಮಂದಿ ಅಭಿಪ್ರಾಯಪಟ್ಟರೆ, ಸಂಸ್ಥೆಯ ಸಮಯ ವ್ಯರ್ಥವಾಗುತ್ತದೆ ಮತ್ತು ಪ್ರಬಲವಾದ ನಾಯಕತ್ವದ ಕೊರತೆ ಉಂಟಾಗುತ್ತದೆ ಎಂದು ಶೇ.35ರಷ್ಟು ಮಂದಿ ಹೇಳಿದ್ದಾರೆ. ಕೌಶಲ್ಯ ಹೊಂದಿದ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನಡೆಸುವುದು ಕಷ್ಟವಾಗಿದೆ ಎಂದು 3ನೆ ಒಂದರಷ್ಟು ಹಿರಿಯ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಶೇ.79ಮಂದಿ ಉದ್ಯೋಗದಲ್ಲಿದ್ದುಕೊಂಡೇ ತರಬೇತಿ ಪಡೆಯುವುದು ಸೂಕ್ತ ಎಂದಿದ್ದರೆ, ಶೇ.66ರಷ್ಟು ಜನರು ಆನ್ಲೈನ್ ಮತ್ತು ಇ-ಲರ್ನಿಂಗ್ ಉತ್ತಮ ಎಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಭಾರತದಲ್ಲಿ 272 ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿಗಳು(ಸಿಇಒ)/ ಹಿರಿಯ ನಾಯಕರು, 532 ವ್ಯವಸ್ಥಾಪಕರು ಮತ್ತು 1251 ಸಾಮಾನ್ಯ ಉದ್ಯೋಗಿಗಳು ಸೇರಿದಂತೆ ಒಟ್ಟು 2055 ಉದ್ಯೋಗಿಗಳನ್ನು ಕಳೆದ ಮೇ ತಿಂಗಳಲ್ಲಿ ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿತ್ತು ಎಂದು ಅವರು ತಿಳಿಸಿದರು.