ಡಿವೈಎಫ್ಐ ವತಿಯಿಂದ ರಕ್ತದಾನ ಶಿಬಿರ, ಪ್ರಶಸ್ತಿ ಪ್ರದಾನ

ಮಂಗಳೂರು, ಜೂ.27: ಡಿವೈಎಫ್ಐ ನಾಯಕ ಶ್ರೀನಿವಾಸ್ ಬಜಾಲ್ರ 14ನೆ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಬಜಾಲ್ ಸಂತ ಜೋಸೆಫರ ಫ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯ ಎನ್.ಉದಯಕಿರಣ್, ಜಿಲ್ಲೆಯಲ್ಲಿ ಬಲಿಷ್ಠ ಯುವಜನರ ಪಡೆಯನ್ನು ಹೊಂದಿರುವಂತಹ ಸಂಘಟನೆ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಕಳೆದ 14 ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ, ಇವತ್ತು ಜಿಲ್ಲೆಯ ಸೌಹರ್ದತೆಯನ್ನು ಹಾಳುಗೆಡವುವಂತಹ ಕೋಮುವಾದಿ ಶಕ್ತಿಗಳು ಯುವಜನತೆಯನ್ನು ಅವರ ನೈಜ ಸಮಸ್ಯೆಗಳ ಆಧಾರದಲ್ಲಿ ಸಂಘಟಿಸುವ ಬದಲು ಅವರ ಮನಸ್ಸಲ್ಲಿ ಕೋಮುದ್ವೇಷವನ್ನು ಹರಡಿಸಿ ಸಮಾಜವನ್ನು ಒಡೆಯುವಂತಹ ಕೃತ್ಯಗಳಲ್ಲಿ ತೊಡಗಿಸುವ ಮೂಲಕ ಈ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವಂತಹ ಮತ್ತು ಮುಗ್ಧ ಯುವಜನರನ್ನು ಜೈಲುಪಾಲು ಮಾಡುವ ಮೂಲಕ ಅವರನ್ನು ಕ್ರಿಮಿನಲ್ಗಳನ್ನಾಗಿ ಪರಿವರ್ತಿಸುವ ಕೆಲಸಗಳಲ್ಲಿ ತೊಡಗಿದೆ. ಶ್ರೀನಿವಾಸ್ರನ್ನು ಕೊಂದಂತಹ ಹಂತಕರು ಸುಪರಿ ಕಿಲ್ಲರ್ಗಳು ಜಿಲ್ಲೆಯಲ್ಲಿ ಹಲವು ಹತ್ಯೆಗಳನ್ನು ನಡೆಸಿ ಜೈಲುಪಾಲಾಗಿರುವುದನ್ನು ಕಂಡಿದ್ದೇವೆ. ಆದ್ದರಿಂದ ಯುವಜನರು ಈ ಕೋಮುವಾದಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ ನವಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್ಐ ಬಜಾಲ್ ಘಟಕದ ಮಾಜಿ ಮುಖಂ ಸುರೇಶ್ ಬಜಾಲ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೆ.ಎಂ.ಸಿ ಆಸ್ಪತ್ರೆಯ ವೈದ್ಯೆ ಡಾ. ಸೋನಾಲಿ, ಡಿವೈಎಫ್ಐ ಸ್ಥಳೀಯ ಮುಖಂಡರಾದ ಆಶೋಕ್ ಸಾಲ್ಯಾನ್, ವರಪ್ರಸಾದ್ ಉಪಸ್ಥಿತರಿದ್ದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಧೀರಜ್ ಪಕ್ಕಲಡ್ಕ ಸ್ವಾಗತಿಸಿ ಪ್ರಜ್ವಲ್ ವಂದಿಸಿದರು.ಡಿವೈಎಫ್ಐ ಬಜಾಲ್ ಘಟಕದ ಕಾರ್ಯದರ್ಶಿ ರಿತೇಶ್ ಪಕ್ಕಲಡ್ಕ ನಿರೂಪಿಸಿದರು. ರಕ್ತದಾನ ಶಿಬಿರವನ್ನು ಕೆಎಂಸಿ ರಕ್ತನಿಧಿ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಯಿತು. ಶಿಬಿರದಲ್ಲಿ 50ಕ್ಕೂ ಮಿಕ್ಕಿ ಡಿವೈಎಫ್ಐ ಕಾರ್ಯಕರ್ತರು ರಕ್ತದಾನ ಮಾಡಿದರು.







