ಸ್ವಾಮಿಗೆ ಮೋದಿ, ಷಾ ಮೌನ ಸಮ್ಮತಿ?
ಜೇಟ್ಲಿ ಬಳಗಕ್ಕೆ ಅಸಮಾಧಾನ
ಹೊಸದಿಲ್ಲಿ, ಜೂ.27: ಪಕ್ಷದ ಸಹೋದ್ಯೋಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಉನ್ನತ ಅಧಿಕಾರಿ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿರುವುದು ಪಕ್ಷದ ವಲಯದಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ.
ಹಣಕಾಸು ಸಚಿವರು ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಕಾರ್ಯವೈಖರಿಯನ್ನು ಟೀಕಿಸಿರುವ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೇಟ್ಲಿ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ ಎಂಬ ವರದಿಗಳೂ ಇವೆ.
ಪ್ರಧಾನಿ ಮೋದಿ ಆರ್ಥಿಕ ಸಲಹೆಗಾರರಾಗಿ ಅರವಿಂದ ಅವರನ್ನು ನೇಮಕ ಮಾಡಿಕೊಳ್ಳುವ ಮುನ್ನ ಆ ವ್ಯಕ್ತಿ ಭಾರತದ ವಿರುದ್ಧ ಲಾಬಿ ಮಾಡುತ್ತಿದ್ದರು. ಈ ಕಾರಣದಿಂದ ತಕ್ಷಣ ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಸ್ವಾಮಿ ಆಗ್ರಹಿಸಿದ್ದರು. ಜೊತೆಗೆ ಜೇಟ್ಲಿ ಅವರ ಹೆಸರನ್ನು ಉಲ್ಲೇಖಿಸದೇ, ಚೀನಾ ಪ್ರವಾಸದ ವೇಳೆ ಟೈ ಹಾಗೂ ಸೂಟ್ ಧರಿಸಿ ವೆಯಿಟರ್ನಂತೆ ಕಾಣುತ್ತಿದ್ದರು ಎಂದು ಲೇವಡಿ ಮಾಡಿದ್ದರು.
ಸ್ವಾಮಿ ಹೇಳಿಕೆಗೆ ಜೇಟ್ಲಿಯವರ ಆಪ್ತ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಕ್ಷದಲ್ಲಿ ಶಿಸ್ತಿನಿಂದ ವರ್ತಿಸುವಂತೆ ಜೇಟ್ಲಿ ಆಪ್ತರು ಸಲಹೆ ಮಾಡಿದ್ದಕ್ಕೆ ಮತ್ತೆ ಟ್ವಿಟ್ಟರ್ನಲ್ಲಿ, ನಾನು ಶಿಸ್ತಿನಿಂದ ವರ್ತಿಸಿದರೆ ರಕ್ತಪಾತವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು.
ಈ ಬೀದಿ ಜಗಳದಿಂದ ಮುಜುಗರಕ್ಕೀಡಾಗಿರುವ ಪಕ್ಷದ ವರಿಷ್ಠರು, ಅಧಿಕೃತ ಹೇಳಿಕೆ ನೀಡಿ ಸ್ವಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಹಾಗೂ ಪಕ್ಷಾಧ್ಯಕ್ಷ ಅಮಿತ್ ಷಾ ಈ ಬಗ್ಗೆ ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ವಾಮಿಯವರ ಹೇಳಿಕೆಗೆ ಮೋದಿ ಹಾಗೂ ಷಾ ಅವರ ಕೃಪಾಕಟಾಕ್ಷವಿದೆ ಎಂದು ಬಿಜೆಪಿಯ ಎದುರಾಳಿಗಳು ಹೇಳಿಕೊಳ್ಳುತ್ತಿದ್ದಾರೆ.