ಚಟುಕು ಸುದ್ದಿಗಳು
ಕದ್ದ ಸೊತ್ತು ಮಾರಾಟ ಮಾಡುತ್ತಿದ್ದಾತನ ಸೆರೆ
ಉಡುಪಿ, ಜೂ.27: ಕಳವುಗೈದ ಸೊತ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಉಡುಪಿ ಪೊಲೀಸರು ಸೋಮವಾರ ಬೆಳಗ್ಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಬಂಧಿತನನ್ನು ಉ.ಕ. ಜಿಲ್ಲೆಯ ಮುಂಡಗೋಡುವಿನ ಯಲ್ಲಪ್ಪ ಎಂಬವರ ಮಗ ಶಿವು ಯಾವೆ ಶಿವಾನಂದ (28) ಎಂದು ಗುರುತಿಸಲಾಗಿದೆ. ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಟಿವಿಯನ್ನು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಈತನನ್ನು ಉಡುಪಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಈತನಿಂದ 6 ಸಾವಿರ ರೂ. ವೌಲ್ಯದ ಪಿಲಿಪ್ಸ್ ಕಂಪೆನಿಯ ಎಲ್ಇಡಿ ಟಿವಿ, 33 ಸಾವಿರ ರೂ. ವೌಲ್ಯದ ಚಿನ್ನದ ಬ್ರೇಸ್ಲೈಟ್ ಹಾಗೂ 12 ಸಾವಿರ ರೂ. ವೌಲ್ಯದ ಎರಡು ಚಿನ್ನದ ಉಂಗುರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಇವುಗಳನ್ನು ಮಂಗಳೂರು ಆಕಾಶಭವನ ಸೂಜಿಕಲ್ಲು ಗುಡ್ಡೆ ಎಂಬಲ್ಲಿ ಬಾಡಿಗೆಗೆ ವಾಸವಾಗಿದ್ದ ಬೇಬಿ ಎಂಬವರ ಮನೆಯಿಂದ ಬಸವರಾಜ್ ಎಂಬಾತನೊಂದಿಗೆ ಸೇರಿ ಕಳವು ಮಾಡಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈನ್ ಮಿಲನ್ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ
ಬಂಟ್ವಾಳ, ಜೂ. 27: ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾವಂತ ಜೈನ್ಸ್ ವಿದ್ಯಾರ್ಥಿಗಳನ್ನು ಜೈನ್ ಮಿಲನ್ ವತಿಯಿಂದ ಸಿದ್ದಕಟ್ಟೆಯ ಜಿನ ಚೈತ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಿಲನ್ ಅಧ್ಯಕ್ಷ ವೀರ್ ಆದಿರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ದಕ್ಷಾ ಜೈನ್, ಉದಾತ್ತ್ ಜೈನ್, ವರ್ಣಿತಾ ಜೈನ್, ಪ್ರದೀಪ್ತಾ ಜೈನ್, ಅಹನಾ ಆರಿಗ, ರಚನಾ ವರ್ಮಾರನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರಕ್ಕೆ ಧನಸಹಾಯ ನೀಡಿದ ವೀರ್ ದಿಲೀಪ್ ಜೈನ್, ಸುನಂದಾ, ಡಾ. ಬಿ.ಪಿ.ಇಂದ್ರ ವೇಣೂರು, ನ್ಯಾಯವಾದಿ ರವಿವರ್ಮ ಶೆಟ್ಟಿ, ರಾಜೇಂದ್ರ ಕುಮಾರ್ ಮೂಡುಬಿದಿರೆ, ಡಾ.ಸೀಮಾ ಸುದೀಪ್ ಸಿದ್ದಕಟ್ಟೆ, ಸುಜಿತ್ ಕುಮಾರ್ ಜೈನ್ರನ್ನು ಗೌರವಿಸಲಾಯಿತು. ಡಾ. ಬಿ.ಪಿ.ಇಂದ್ರ, ವೀರ್ ಸುಭಾಶ್ಚಂದ್ರ ಜೈನ್, ನಿರ್ದೇಶಕ ವೀರ್ ಸುದರ್ಶನ್ ಜೈನ್, ಅರ್ಕಕೀರ್ತಿ ಇಂದ್ರ, ಅಜಿತ್ ಕುಮಾರ್ ಕಂಬಳಿ, ಯುವರಾಜ್ ಜೈನ್ ಎಣ್ಮಾಜೆ, ಅಶೋಕ್ ಕುಮಾರ್ ಸಂಗಬೆಟ್ಟು, ಸುಮನ್ ಜೈನ್ ಉಪಸ್ಥಿತರಿದ್ದರು.
ವನ್ಯಜೀವಿಗಳಿಂದ ದಾಳಿ: ಕೋ.ರೂ. ಮೊತ್ತದ ಪರಿಹಾರ
ಕಾಸರಗೋಡು, ಜೂ.27: ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ವನ್ಯಜೀವಿಗಳ ದಾಳಿಯಿಂದ 20 ಮಂದಿ ಮೃತಪಟ್ಟಿದ್ದು, 215 ಮಂದಿ ಗಾಯಗೊಂಡಿದ್ದಾರೆ ಎಂದು ಅಂಕಿ ಅಂಶದಿಂದ ವ್ಯಕ್ತವಾಗಿದೆ.ಓರ್ವ ಹಂದಿ ದಾಳಿಯಿಂದ ಮತ್ತು ಇತರರು ಹಾವು ಕಡಿತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಇದಲ್ಲದೆ ಲಕ್ಷಾಂತರ ರೂ. ಕೃಷಿ ಹಾನಿ ಉಂಟಾದ್ದು ಅರಣ್ಯ ಇಲಾಖೆ 1.25 ಕೋ.ರೂ. ನಷ್ಟ ಪರಿಹಾರ ನೀಡಿದೆ. ವನ್ಯಜೀವಿಗಳ ದಾಳಿಯಿಂದ ಗಾಯಗೊಂಡವರಿಗೆ 41 ಲಕ್ಷ ರೂ., ಮೃತಪಟ್ಟವರಿಗೆ 24 ಲಕ್ಷ ರೂ., ಕೃಷಿ ನಾಶ ಉಂಟಾದವರಿಗೆ 50 ಲಕ್ಷ ರೂ. ನೀಡಲಾಗಿದೆ.ಕಾಸರಗೋಡು ಅರಣ್ಯ ವಲಯದಲ್ಲಿ ಅತೀ ಹೆಚ್ಚು ಕೃಷಿ ಹಾನಿ ಉಂಟಾಗಿದೆ. ಕಾಡಾನೆ , ಹಂದಿ, ಮಂಗಗಳ ದಾಳಿ ಹೆಚ್ಚಾಗಿತ್ತು. ಹಾವು ಕಡಿತಕ್ಕೊಳಗಾಗಿ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 134 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. 25 ಮಂದಿ ಹಂದಿಗಳ ದಾಳಿಯಿಂದ ಗಾಯ ಗೊಂಡಿದ್ದಾರೆ ಎಂದು ಅಂಕಿ ಅಂಶ ತಿಳಿಸುತ್ತಿದೆ.
ಒಬ್ಬ ಕಾಡಾನೆ ದಾಳಿಯಿಂದಲೂ ಗಾಯಗೊಂಡಿದ್ದಾನೆ. 2015ರಲ್ಲಿ 72 ಮಂದಿ ಹಂದಿ ದಾಳಿಗೊಳಗಾಗಿದ್ದಾರೆ. 2012ರ ಜೂನ್ನಿಂದ 2015ರ ಡಿಸೆಂಬರ್ 31ರ ತನಕದ ಅಂಕಿ ಅಂಶವನ್ನು ಇದು ಉಲ್ಲೇಖಿಸುತ್ತಿದೆ. ಅಡೂರಿನ ಚಿನ್ನಪ್ಪಾಡಿಯ ಸಿ.ಕೆ. ಇಬ್ರಾಹೀಂರಿಗೆ ಮಾಹಿತಿ ಹಕ್ಕು ಕಾಯ್ದೆಯಂತೆ ಲಭಿಸಿದ ಅಂಕಿ ಅಂಶದಲ್ಲಿ ಅರಣ್ಯ ಇಲಾಖೆ ಈ ಮಾಹಿತಿ ನೀಡಿದ್ದು, ವನ್ಯ ಮೃಗಗಳ ದಾಳಿ ತಡೆಗಟ್ಟಲು ರಕ್ಷಿತಾರಣ್ಯ ಪ್ರದೇಶದಲ್ಲಿ 49.05 ಕಿ.ಮೀ. ಸೌರ ಶಕ್ತಿ ಬೇಲಿ ನಿರ್ಮಿಸಲಾಗಿದೆ.
ವಾರಸುದಾರರಿಗೆ ಸೂಚನೆ
ಉಡುಪಿ, ಜೂ.27: ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಜೂ.7ರಂದು ಬೆಳಗ್ಗೆ ಒಳರೋಗಿಯಾಗಿ ದಾಖಲಾದ ಸುಮಾರು 65 ವರ್ಷದ ರತ್ನಾ, ಸೀತಾರಾಮ ಆಚಾರ್ಯರ ಮಗಳು, ರತ್ನಾವತಿ ನಿಲಯ, ಬಡಾ ಗ್ರಾಮ, ಎರ್ಮಾಳ್ ಅಂಚೆ ಈ ವಿಳಾಸದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂ.26ರಂದು ಮೃತ ಪಟ್ಟಿದ್ದಾರೆ. ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು (ದೂರವಾಣಿ: 0820-2520555) ಸಂಪರ್ಕಿಸುವಂತೆ ಜಿಲ್ಲಾ ವೈದ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರು ಢಿಕ್ಕಿ: ಪಾದಚಾರಿ ಮೃತ್ಯು
ಬ್ರಹ್ಮಾವರ, ಜೂ.27: ಉಪ್ಪಿನಕೋಟೆ ರಾಘವೇಂದ್ರ ಕ್ಯಾಂಟಿನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂ.26ರಂದು ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತ ಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ಉಪ್ಪಿನಕೋಟೆಯ ಜಾನ್ ಡಿಸಿಲ್ವ(83) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮೀನು ತರಲು ಮನೆ ಯಿಂದ ಸಾಸ್ತಾನಕ್ಕೆ ಹೊರಟಿದ್ದು, ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತಿರುವಾಗ ಬ್ರಹ್ಮಾವರ ಕಡೆಯಿಂದ ಬಂದ ಕಾರು ರಸ್ತೆ ಬದಿ ನಿಂತಿದ್ದ ಜಾನ್ ಡಿಸಿಲ್ವರಿಗೆ ಢಿಕ್ಕಿ ಹೊಡೆಯಿತು. ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಜಾನ್ ಡಿಸಿಲ್ವರನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾ ಯಿತು. ಆದರೆ ಅವರು ಚಿಕಿತ್ಸೆ ಫಲಕಾರಿ ಯಾಗದೆ ಮಧ್ಯಾಹ್ನ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಜಿ ಆಹ್ವಾನ
ಉಡುಪಿ, ಜೂ.27: ಕಾರ್ಕಳ ತಾಲೂಕು ಮಿಯ್ಯರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ 2016-17ನೆ ಸಾಲಿನಲ್ಲಿ ಖಾಲಿ ಇರುವ ಗಣಿತ ಮತ್ತು ಇಂಗ್ಲೀಷ್ ವಿಷಯಗಳ ಉಪನ್ಯಾಸಕರ ಹುದ್ದೆಗೆ ಅರ್ಹ ನಿವೃತ್ತ ಉಪನ್ಯಾಸಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ತವ್ಯದ ಅವಧಿ 2016-17ನೆ ಸಾಲಿಗೆ ಸೀಮಿತವಾಗಿದ್ದು, ಆಸಕ್ತರು ತಮ್ಮ ಅರ್ಜಿಯನ್ನು ಜೂ.30ರೊಳಗೆ ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕು ಇವರಿಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.