ವಿ.ಎಸ್. ಅಚ್ಯುತಾನಂದ್ರಿಗೆ ಸ್ಥಾನಮಾನ ತೀರ್ಮಾನವಾಗಿದೆ: ಪ್ರಕಾಶ್ ಕಾರಟ್
![ವಿ.ಎಸ್. ಅಚ್ಯುತಾನಂದ್ರಿಗೆ ಸ್ಥಾನಮಾನ ತೀರ್ಮಾನವಾಗಿದೆ: ಪ್ರಕಾಶ್ ಕಾರಟ್ ವಿ.ಎಸ್. ಅಚ್ಯುತಾನಂದ್ರಿಗೆ ಸ್ಥಾನಮಾನ ತೀರ್ಮಾನವಾಗಿದೆ: ಪ್ರಕಾಶ್ ಕಾರಟ್](https://www.varthabharati.in/sites/default/files/images/articles/2016/06/28/003_prakash_karat.jpg)
ತಿರುವನಂತಪುರಂ, ಜೂ.28: ವಿ.ಎಸ್. ಅಚ್ಯುತಾನಂದನ್ರಿಗೆ ನೀಡುವ ಸ್ಥಾನಮಾನದ ಕುರಿತು ಸಿಪಿಐಎಂ ಈಗಾಗಲೇ ತೀರ್ಮಾನಿಸಿದ್ದು ರಾಜ್ಯ ಸಚಿವ ಸಂಪುಟ ಈ ವಿಷಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದು ಸಿಪಿಐಎಂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಘಟಕದಲ್ಲಿ ಸ್ಥಾನ ನೀಡಬೇಕೆಂಬುದು ವಿ.ಎಸ್.ರ ಆಗ್ರಹವಾಗಿದೆ ಎನ್ನಲಾಗಿದೆ. ವಿ.ಎಸ್.ರೊಂದಿಗೆ ಈ ಕುರಿತು ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾರಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿ.ಎಸ್.ರ ವಯಸ್ಸು, ಆರೋಗ್ಯ ಇತಿಮಿತಿ ಗಣನೆಗೆೆ ತೆಗೆದುಕೊಂಡು ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿಲ್ಲ ಎಂದು ಕಾರಟ್ ಸ್ಪಷ್ಟಪಡಿಸಿದರು. ಸರಕಾರಕ್ಕೆ ಸಲಹೆಗಾರ ಮತ್ತು ಮಾರ್ಗದರ್ಶಕನ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಈ ವಿಷಯವನ್ನು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಕೇರಳದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಒಬ್ಬ ನಾಯಕರಿಗೆ ಒಂದು ತಿಂಗಳಾಗುವಷ್ಟರಲ್ಲಿ ಅನಾರೋಗ್ಯ ಬಂದಿದ್ದು ಹೇಗೆ ಎಂದು ಕಾರಟ್ರನ್ನು ಕೇಳಿದಾಗ ಸರಕಾರ ನಡೆಸುವುದೂ ಚುನಾವಣಾ ಪ್ರಚಾರ ನಡೆಸುವುದೂ ಸಮಾನ ವಿಷಯವಲ್ಲ ಎಂದು ಅವರು ಹೇಳಿದ್ದಾರೆ.
ವಿ.ಎಸ್.ಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಪದವಿ ನೀಡಬೇಕೆಂದು ಸಿಪಿಐಎಂ ಕೇಂದ್ರೀಯ ನಾಯಕತ್ವ ಆಲೋಚಿಸುತ್ತಿದೆ ಎಂಬ ಸುದ್ದಿ ಬಹಿರಂಗವಾಗಿತ್ತು. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಅಂತಹ ಚಿಂತನೆ ನಡೆದಿಲ್ಲ ಎಂದು ಹೇಳಿದ್ದರು.