ಮುಸ್ಲಿಮರ ಓಲೈಕೆಗೆ ಆರೆಸ್ಸೆಸ್ ಕಸರತ್ತು: ಶಿವಸೇನೆ
ಮುಂಬೈ, ಜೂ.28: ರಾಷ್ಟ್ರೀಯ ಸ್ವಯಂಸೇವಕ ಸಂಘ ಅದ್ದೂರಿ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಶಿವಸೇನೆ, ಹಿಂದೂರಾಷ್ಟ್ರ ನಿರ್ಮಿಸಲು ಹೊರಟಿರುವ ಬಲಪಂಥೀಯ ಆರೆಸ್ಸೆಸ್ಗೆ ತನ್ನ ಸಿದ್ಧಾಂತದ ಬಗ್ಗೆ ಗೊಂದಲವಿದೆ ಎಂದು ಲೇವಡಿ ಮಾಡಿದೆ.
ಇದು ತೀರಾ ಅಚ್ಚರಿಯ ಬೆಳವಣಿಗೆ. ಏಕೆಂದರೆ ಆರೆಸ್ಸೆಸ್ ಸದಾ ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಇಫ್ತಾರ್ ಕೂಟಗಳನ್ನು ಆಯೋಜಿಸಿದಾಗ ಆರೆಸ್ಸೆಸ್ ಟೀಕಿಸುತ್ತಿತ್ತು. ಇದೀಗ ಸ್ವತಃ ಆರೆಸ್ಸೆಸ್ ಇಫ್ತಾರ್ ಕೂಟಗಳನ್ನು ಏರ್ಪಡಿಸುತ್ತಿದೆ ಎಂದು ಶಿವಸೇನೆ ನಾಯಕಿ ಮನಿಶಾ ಕಯಾಂಡೆ ಹೇಳಿದ್ದಾರೆ.
ಈ ವರೆಗೆ ಖಂಡಿಸುತ್ತಾ ಬಂದ ಮುಸ್ಲಿಮರನ್ನು ಈಗ ಓಲೈಸಲು ಹೊರಟಂತಿದೆ. ಆರೆಸ್ಸೆಸ್ ತನ್ನ ಮೂಲ ಚಿಂತನೆಯಿಂದ ಸಂಪೂರ್ಣ ದೂರ ಸರಿಯುತ್ತಿದೆ ಎಂದು ಟೀಕಿಸಿದ್ದಾರೆ.
ಒಂದು ಕಡೆ ಅವರು ಘರ್ವಾಪಸಿ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೊಂದೆಡೆ ಇಫ್ತಾರ್ ಆಯೋಜಿಸುತ್ತಿದ್ದಾರೆ. ಇಂದು ಆರೆಸ್ಸೆಸ್ನ ಮನಸ್ಥಿತಿ ಗೊಂದಲಮಯವಾಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಆರೆಸ್ಸೆಸ್ನ ಅಂಗಸಂಸ್ಥೆಯಾದ ಮುಸ್ಲಿಮ್ ರಾಷ್ಟ್ರೀಯ ಮಂಚ್, 140 ದೇಶಗಳ ರಾಯಭಾರಿಗಳನ್ನು ಅದ್ದೂರಿ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಸಂಸತ್ಭವನದಲ್ಲಿ ಜುಲೈ 2ರಂದು ಈ ಕೂಟ ಆಯೋಜಿಸಲಾಗಿದೆ.