ಮಲೇರ್ಕೋಟ್ಲಾ : ಕುರ್ ಆನ್ ಗೆ ಬೆಂಕಿ ಹಚ್ಚಿ ಕೋಮುಗಲಭೆಗೆ ಯತ್ನಿಸಿದ ಉದ್ಯಮಿ ಬಂಧನ
![ಮಲೇರ್ಕೋಟ್ಲಾ : ಕುರ್ ಆನ್ ಗೆ ಬೆಂಕಿ ಹಚ್ಚಿ ಕೋಮುಗಲಭೆಗೆ ಯತ್ನಿಸಿದ ಉದ್ಯಮಿ ಬಂಧನ ಮಲೇರ್ಕೋಟ್ಲಾ : ಕುರ್ ಆನ್ ಗೆ ಬೆಂಕಿ ಹಚ್ಚಿ ಕೋಮುಗಲಭೆಗೆ ಯತ್ನಿಸಿದ ಉದ್ಯಮಿ ಬಂಧನ](https://www.varthabharati.in/sites/default/files/images/articles/2016/06/29/13d86166-6c24-441e-b372-506177351fea.jpg)
ಮಲೇರ್ಕೋಟ್ಲಾ , ಜೂ. 29 : ಇತ್ತೀಚಿಗೆ ಕುರ್ ಆನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಓರ್ವ ಪ್ರಮುಖ ಉದ್ಯಮಿ ಹಾಗೂ ಆತನಿಗೆ ಸಹಕಾರ ನೀಡಿದ ಇಬ್ಬರನ್ನು ಬಂಧಿಸಲಾಗಿದೆ.
ಕೆನಡಾದಲ್ಲಿದ್ದು ಇದೀಗ ಭಾರತಕ್ಕೆ ಮರಳಿರುವ ಉದ್ಯಮಿ ವಿಜಯ್ ಕುಮಾರ್ ಎಂಬಾತ ಮುಖ್ಯ ಆರೋಪಿಯಾಗಿದ್ದು ಈತ ಈ ಹಿಂದಿನಿಂದಲೇ ಮುಸ್ಲಿಂ ದ್ವೇಷಿಯಾಗಿ ಗುರುತಿಸಿಕೊಂಡಿದ್ದ. ಉಳಿದಿಬ್ಬರನ್ನು ಈತ ಹಣದ ಆಮಿಷ ಒಡ್ಡಿ ತನ್ನ ಕುಕೃತ್ಯಕ್ಕೆ ಬಳಸಿಕೊಂಡಿದ್ದ.
ಪಕ್ಕಾ ಮುಸ್ಲಿಂ ದ್ವೇಷಿಯಾಗಿರುವ ಈತ ಮುಸ್ಲಿಮರು ಭಾರತವನ್ನು ತಮ್ಮ ವಶಕ್ಕೆ ಪಡೆಯುತ್ತಾರೆ, ಅವರ ಜನಸಂಖ್ಯೆ ಬಹುದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ ಇತ್ಯಾದಿ ಕಪೋಲಕಲ್ಪಿತ ಹೇಳಿಕೆಗಳನ್ನು ಈ ಹಿಂದೆಯೂ ನೀಡುತ್ತಿದ್ದು ಈಗ ಬಂಧಿತನಾದ ಮೇಲೂ ಅದನ್ನೇ ಹೇಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರ್ ಆನ್ ಗೆ ಬೆಂಕಿ ಹಚ್ಚಿ ಮುಸ್ಲಿಮರನ್ನು ಪ್ರಚೋದಿಸಿ ಕೋಮು ಗಲಭೆ ಸೃಷ್ಟಿಸುವುದು ಈತನ ಉದ್ದೇಶವಾಗಿತ್ತು. ಈತನ ಕೃತ್ಯದಿಂದ ಕೋಪೋದ್ರಿಕ್ತ ಕೆಲವು ಮುಸ್ಲಿಮರು ಹಿಂಸಾಚಾರಕ್ಕೆ ಇಳಿದು ವಾಹನಗಳಿಗೆ ಬೆಂಕಿ ಹಚ್ಚಿದ್ದರು ಹಾಗೂ ಸ್ಥಳೀಯ ಅಕಾಲಿದಳ ಶಾಸಕಿ ಫರ್ಝಾನ ಅವರ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು.