ಇಲಾಖೆಗಳ ಎಡವಟ್ಟು: ವಿದ್ಯಾರ್ಥಿಗಳ ಸ್ಕಾಲರ್ಶಿಪ್ಗೆ ಕುತ್ತು
![ಇಲಾಖೆಗಳ ಎಡವಟ್ಟು: ವಿದ್ಯಾರ್ಥಿಗಳ ಸ್ಕಾಲರ್ಶಿಪ್ಗೆ ಕುತ್ತು ಇಲಾಖೆಗಳ ಎಡವಟ್ಟು: ವಿದ್ಯಾರ್ಥಿಗಳ ಸ್ಕಾಲರ್ಶಿಪ್ಗೆ ಕುತ್ತು](https://www.varthabharati.in/sites/default/files/images/articles/2016/06/30/33-picture-study-in-singapore-for-indian-students-2.gif)
ಪುತ್ತೂರು, ಜೂ.29: ಕೇಂದ್ರ ಸರಕಾರದ ಅಧೀನದಲ್ಲಿರುವ ವಿವಿಧ ಯೋಜನೆಗಳಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಿಗುವ ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಿಗುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ, ಬೀಡಿ ಕಾರ್ಮಿಕರ ಮಕ್ಕಳಿಗೆ ಸಿಗುವ ವಿದ್ಯಾರ್ಥಿವೇತನ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸಿಗುವ ಎಂಎಚ್ಆರ್ಡಿ ವಿದ್ಯಾರ್ಥಿವೇತನ ಬಯಸಿ 2015-16ನೆ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಸಲ್ಲಿಸಿದ್ದ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗದೆ ಗೊಂದಲ ಮತ್ತು ನಿರಾಶೆ ಮೂಡಿಸಿದೆ.
ಏನು ಕಾರಣ?: 2015-16ನೆ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಕೇಂದ್ರ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನದ ಅಧೀನದಲ್ಲಿರುವ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ರೂಪುಗೊಳಿಸಿದ ಏಕಗವಾಕ್ಷಿ ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್ ಮುಖಾಂತರ ಈ ಮೇಲಿನ ಎಲ್ಲಾ ವಿದ್ಯಾರ್ಥಿವೇತನ ಪಡೆಯಲು ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸುವಂತೆ ಆದೇಶಿಸಲಾಗಿತ್ತು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಕೆಲವು ಅಗತ್ಯ ಸೂಚನೆಗಳನ್ನೂ ಇಲಾಖೆಯು ವಿದ್ಯಾರ್ಥಿಗಳಿಗೆ ಒದಗಿಸಿತ್ತು: 1) ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್ ಎಲ್ಲಾ ವಿದ್ಯಾರ್ಥಿವೇತನಗಳಿಗೆ ಒಂದು ಸಾಮಾನ್ಯ ಅಪ್ಲಿಕೇಶನ್ ಮಾದರಿ. 2) ಈ ಪೋರ್ಟಲ್ನಲ್ಲಿ ಒಬ್ಬ ವಿದ್ಯಾರ್ಥಿಯು ಒಂದು ಬಾರಿ ಮಾತ್ರ ಆನ್ಲೈನ್ ಮುಖಾಂತರ ತಮ್ಮ ಸವಿವರಗಳನ್ನು ಒದಗಿಸಿ ನೋಂದಾಯಿಸಿಕೊಳ್ಳಬೇಕು. 3) ನೋಂದಾಯಿಸಿಕೊಂಡ ವಿದ್ಯಾರ್ಥಿಯು ತನ್ನ ಅರ್ಹತೆಗೆ ಸರಿಯಾಗಿ ಲಭ್ಯವಿರುವ ಎಲ್ಲಾ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಇದೇ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು. 4) ಒಂದು ವೇಳೆ ಒಬ್ಬ ವಿದ್ಯಾರ್ಥಿಯು ಒಂದು ಇಲಾಖೆಯಿಂದ ದೊರೆಯುವ ವಿದ್ಯಾರ್ಥಿವೇತನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಿದ್ದರೆ, ಅಂತಹ ನಕಲಿ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಇಲಾಖೆಗೆ ನೀಡಿತ್ತು. 5) ಮಂಜೂರಾತಿ ಸಂದರ್ಭ ವಿದ್ಯಾರ್ಥಿಯು ತನಗೆ ಮಂಜೂರಾದ ವಿದ್ಯಾರ್ಥಿವೇತನಗಳಲ್ಲಿ ಸೂಕ್ತವಾದ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ.
ಈ ಮೇಲಿನ ಎಲ್ಲಾ ಸೂಚನೆಗಳನ್ನು ಕ್ರಮಬದ್ಧವಾಗಿ ಪಾಲಿಸಿ, ಒಂದಕ್ಕಿಂತ ಹೆಚ್ಚು ಇಲಾಖೆಗಳಲ್ಲಿನ ವಿದ್ಯಾರ್ಥಿವೇತನ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಲಾಖೆಗಳು ಮಾಡಿರುವ ಎಡವಟ್ಟು ಪೀಕಲಾಟ ತಂದಿಟ್ಟಿದೆ. ಉದಾಹರಣೆಗೆ ಬೀಡಿ ಕಾರ್ಮಿಕರ ಮಕ್ಕಳು ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾಗ, ಅಂತಹ ವಿದ್ಯಾರ್ಥಿಯು ಬೀಡಿ ಸ್ಕಾಲರ್ಶಿಪ್ ಮಾತ್ರವಲ್ಲದೇ ಎಂಎಚ್ಆರ್ಡಿ ಸ್ಕಾಲರ್ಶಿಪ್ಗೂ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆಯುತ್ತಾರೆ. ಅಂತಹ ಸಂದಭರ್ಗಳಲ್ಲಿ ವಿದ್ಯಾರ್ಥಿಯು ಎರಡೂ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರೆ, ‘ಒಂದಕ್ಕಿಂತ ಹೆಚ್ಚಿನ ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಿದ್ದೀರಿ’ ಎಂಬ ಕಾರಣ ನೀಡಿ ಬೀಡಿ ಸ್ಕಾಲರ್ಶಿಪ್ಗೆ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲನಾ ಹಂತದಲ್ಲಿಯೇ ರಾಜ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ತಿರಸ್ಕೃತಗೊಳಿಸಲಾಗಿದೆ.
ಎಂಎಚ್ಆರ್ಡಿ ಸ್ಕಾಲರ್ಶಿಪ್ಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯು ಇನ್ನೂ ಮೆರಿಟ್ ಲಿಸ್ಟ್/ಆಯ್ಕೆ ಪಟ್ಟಿಗೆ ಬರುವ ಮುನ್ನವೇ ಬೀಡಿ ಸ್ಕಾಲರ್ಷಿಪ್ ಅರ್ಜಿಯನ್ನು ತಿರಸ್ಕೃತಗೊಳಿಸಿರುವುದರಿಂದ, ಎಂಎಚ್ಆರ್ಡಿ ಸ್ಕಾಲರ್ಶಿಪ್ ಮಂಜೂರಾಗದಿದ್ದರೆ, ಅಂತಹ ವಿದ್ಯಾರ್ಥಿಯು ಆ ಎರಡೂ ವಿದ್ಯಾರ್ಥಿವೇತನಗಳಿಂದ ವಂಚಿತನಾಗುತ್ತಾನೆ. ವಿಪರ್ಯಾಸವೆಂದರೆ, ಇಂತಹ ಎಡವಟ್ಟುಗಳಿಂದಾಗಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗೆ ಸಿಗಬೇಕಾದ ಸವಲತ್ತು ಕೈತಪ್ಪಿ, ತನಗಿಂತಲೂ ಕಡಿಮೆ ಅಂಕ ಗಳಿಸಿದ ಇನ್ನೋರ್ವ ವಿದ್ಯಾರ್ಥಿಗೆ ಇದರ ಲಾಭ ಸಿಗುತ್ತಿದೆ. ತನ್ಮಧ್ಯೆ, ಇಂತಹ ಲೋಪದೋಷಗಳಿಂದ ತೊಂದರೆಗೊಳಗಾದ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ಪರಿಹಾರಕ್ಕಾಗಿ ಯಾವ ಸಂಪರ್ಕಾಧಿಕಾರಿಯನ್ನು ಸಂಪರ್ಕಿಸಬಹುದು ಎಂಬ ಕನಿಷ್ಠ ಮಾಹಿತಿಯನ್ನೂ ನೀಡಲಾಗಿಲ್ಲ.