ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿ!
ರಾಜೀ ಸಂಧಾನದಲ್ಲಿ ಸಮಿತಿಗೆ ಸದಸ್ಯರ ಅವಿರೋಧ ಆಯ್ಕೆ
![ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿ! ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿ!](https://www.varthabharati.in/sites/default/files/images/articles/2016/06/30/NAN_2001.jpg)
ಮಂಗಳೂರು,ಜೂ.30: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಬಹುಮತ ಹೊಂದಿರುವ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆಡರನ್ನೂ ಪಡೆದಿರುವ ಬಿಜೆಪಿ, ಐದು ಸ್ಥಾಯಿ ಸಮಿತಿಗಳ ಅಧ್ಯಕ್ಷ ಗಾದಿಯನ್ನು ಹಂಚಿಕೊಳ್ಳುವ ಮೂಲಕ ರಾಜೀ ಸಂಧಾನದೊಂದಿಗೆ ಕೊನೆ ಕ್ಷಣದಲ್ಲಿ ಸದಸ್ಯರ ಆಯ್ಕೆಗೆ ನಡೆಯಬೇಕಿದ್ದ ಮತದಾನಕ್ಕೆ ತೆರೆ ಎಳೆದ ಪ್ರಸಂಗ ಇಂದು ನಡೆಯಿತು.
ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಜಿ.ಪಂ.ನ ಐದು ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆಗಾಗಿ ವಿಶೇಷ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹಿರಿಯ ಜನಪ್ರತಿನಿಧಿಗಳ ಮಧ್ಯಸ್ಥಿಕೆಯಲ್ಲಿ ಸದಸ್ಯರು ಪರಸ್ಪರ ರಾಜೀ ಸಂಧಾನಕ್ಕೆ ಒಪ್ಪಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಐದು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ನ ಐದು ಸ್ಥಾಯಿ ಸಮಿತಿಗಳಲ್ಲಿ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ.ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೇ ಕ್ರಮವಾಗಿ ಅಧ್ಯಕ್ಷರಾಗಿರುವುದು ನಿಯಮ. ಈ ಎರಡು ಸ್ಥಾಯಿ ಸಮಿತಿಗಳಿಗೆ ತಲಾ 6 ಸದಸ್ಯರು ಹಾಗೂ ಹಾಗೂ ಉಳಿದಂತೆ ಸಾಮಾಜಿಕ ನ್ಯಾಯ, ಕೃಷಿ ಮತ್ತು ಕೈಗಾರಿಕೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ತಲಾ 7 ಸದಸ್ಯರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು. ಪೂರ್ವಾಹ್ನ 11:30ರ ವೇಳೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಐದೂ ಸ್ಥಾಯಿ ಸಮಿತಿಗಳಿಗೆ ನಾಮಪತ್ರ ಸಲ್ಲಿಕೆಗೆ 12ರವರೆಗೆ ಸಮಯಾವಕಾಶ ಕಲ್ಪಿಸಲಾಗಿತ್ತು. ಅದರಂತೆ ಸಾಮಾನ್ಯ ಸ್ಥಾಯಿ ಸಮಿತಿ ಹಾಗೂ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ತಲಾ 11 ಹಾಗೂ ಇತರ ಮೂರು ಸ್ಥಾಯಿ ಸಮಿತಿಗಳಿಗೆ ತಲಾ 14ರಂತೆ ನಾಮ ಪತ್ರಗಳು ಸಲ್ಲಿಕೆಯಾಗಿದ್ದವು.
ನಾಮಪತ್ರ ಪರಿಶೀಲನೆಯ ಬಳಿಕ ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಈ ನಡುವೆ ಸದಸ್ಯರು ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ರಾಜೀ ಸಂಧಾನದಲ್ಲಿ ಪಡೆಯಲು ಮುಂದಾದರು. ಅದರಂತೆ ರಾಜೀ ಸಂಧಾನದಲ್ಲಿ ಅವಿರೋಧ ಆಯ್ಕೆ ಹಾಗೂ ಐದು ಸ್ಥಾಯಿ ಸಮಿತಿಗಳಲ್ಲಿ 2 ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ನಿರ್ಧರಿಸಿದರು. ಮಾತ್ರವಲ್ಲದೆ, ಅವಿರೋಧ ಆಯ್ಕೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಮಿತಿಗಳಿಗೆ ಸಲ್ಲಿಕೆಯಾಗಿದ್ದ ಹೆಚ್ಚುವರಿ ನಾಮಪತ್ರಗಳನ್ನು ಹಿಂಪಡೆಯಲು 1:15ರವರೆಗೆ ಕಾಲಾವಕಾಶ ಒದಗಿಸಲಾಯಿತು. ಅಂತಿಮವಾಗಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸದಸ್ಯರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಒಪ್ಪಂದದ ಪ್ರಕಾರ ಐದು ಸ್ಥಾಯಿ ಸಮಿತಿ ಸ್ಥಾನಗಳಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ಲಭ್ಯವಾಗಲಿದೆ. ಐದು ಸಮಿತಿಗಳಿಗೂ ಸದಸ್ಯರ ಆಯ್ಕೆ ನಡೆದಿದ್ದು, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗೆ ಜಿ.ಪಂ.ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೇ ಎರಡು ಸದಸ್ಯರೊಳಗೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಸಮಿತಿಗಳ ಅಧ್ಯಕ್ಷರ ಅಧಿಕಾರಾವಧಿ 20 ತಿಂಗಳು.
ಬಿಜೆಪಿಗೆ ತಲೆನೋವಾಗಿದ್ದ ಸಮಬಲದ ಸಮಸ್ಯೆ!
ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನದಲ್ಲಿ ಬಿಜೆಪಿ 21 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಪಡೆದಿದ್ದರೂ, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಸಂಬಂಧಿಸಿದ ನಿಯಮಾವಳಿ ಪ್ರಕಾರ ಚುನಾವಣೆಯಲ್ಲಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರಿಗೂ ಅವಕಾಶವಿತ್ತು. ಇದರಂತೆ ಕಾಂಗ್ರೆಸ್ನ 15 ಮಂದಿ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರೂ ಆಗಿರುವ ಬಿ. ರಮಾನಾಥ ರೈ, ಆಹಾರ ಸಚಿವ ಹಾಗೂ ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಹಾಗೂ ಶಾಸಕರಾದ ಅಭಯಚಂದ್ರ ಜೈನ್, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವಾ, ಜೆ.ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಮೂರು ತಾಲೂಕು ಪಂಚಾಯತ್ಗಳಲ್ಲಿ ಅಧ್ಯಕ್ಷ ಗಾದಿ ಅಲಂಕರಿಸಿರುವ ಕಾಂಗ್ರೆಸ್ನ ಜನಪ್ರತಿನಿಧಿಗಳು ಸೇರಿ ಒಟ್ಟು ಮತದಾನದಲ್ಲಿ ಕಾಂಗ್ರೆಸ್ನ ಸದಸ್ಯ ಬಲ 26 ಆಗುತ್ತಿತ್ತು.
ಇದೇ ರೀತಿ ಬಿಜೆಪಿಯ 21 ಮಂದಿ ಸದಸ್ಯರು, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭೆಯ ಸದಸ್ಯ ಅಂಗಾರ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎರಡು ತಾಲೂಕು ಪಂಚಾಯತ್ನ ಅಧ್ಯಕ್ಷರು ಸೇರಿ 26 ಸದಸ್ಯ ಬಲದೊಂದಿಗೆ ಎರಡೂ ಪಕ್ಷಗಳೂ ಸಮಬಲವನ್ನು ಹೊಂದಿತ್ತು. ಅದರಂತೆ ಮತದಾನ ನಡೆದಾಗ ಸಮಬಲದ ಹಿನ್ನೆಲೆಯಲ್ಲಿ ಮತ್ತೆ ಚೀಟಿ ಎತ್ತುವುದು ಅಥವಾ ನಾಣ್ಯ ಚಿಮ್ಮಿಸುವ ಮೂಲಕ ಸದಸ್ಯರ ಆಯ್ಕೆಯನ್ನು ನಡೆಸಬೇಕಾಗಿತ್ತು. ಇದನ್ನು ತಪ್ಪಿಸುವ ಕಾರಣಕ್ಕಾಗಿಯೇ ಕೊನೆಗೆ ಕಾಂಗ್ರೆಸ್ಗೆ ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿಯನ್ನು ನೀಡುವ ರಾಜೀ ಸಂಧಾನಕ್ಕೆ ಬಿಜೆಪಿ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯ.ಟಿ. ಖಾದರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಂಸದ ನಳಿನ್ ಕುಮಾರ್ ಕಟೀಲ್ , ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕ ಕ್ಯಾ. ಗಣೇಶ್ ಕಾರ್ನಿಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ , ಶಾಸಕರಾದ ಕೆ.ವಸಂತ ಬಂಗೇರ , ಕೆ. ಅಂಗಾರ , ಕೆ.ಅಭಯಚಂದ್ರ ಜೈನ್, ಜೆ.ಆರ್. ಲೋಬೊ, ಮೊಯ್ದೀನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉಪಸ್ಥಿತರಿದ್ದರು.
ಅವಿರೋಧವಾಗಿ ಆಯ್ಕೆಯಾದ ಸದಸ್ಯರು
ಸಾಮಾನ್ಯ ಸ್ಥಾಯಿ ಸಮಿತಿ:
ಮಮತಾ ಡಿ. ಎಸ್. ಗಟ್ಟಿ, ಪಿ. ಧರಣೇಂದ್ರ ಕುಮಾರ್, ಜನಾರ್ದನ ಗೌಡ, ಪ್ರಮೀಳಾ ಜನಾರ್ದನ್, ಮಮತಾ ಎಂ. ಶೆಟ್ಟಿ, ಎಸ್. ಎನ್. ಮನ್ಮಥ.
ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ
ವಿನೋದ್ಕುಮಾರ್ ಬೊಳ್ಳೂರು, ಕೆ. ಕೊರಗಪ್ಪ ನಾಯ್ಕ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನಮಿತ, ಜಯಶ್ರೀ ಕೋಡಂದೂರು, ಎಂ. ತುಂಗಪ್ಪ ಬಂಗೇರ
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
ಅನಿತಾ ಹೇಮನಾಥ ಶೆಟ್ಟಿ, ಕಮಲಾಕ್ಷಿ ಕೆ. ಪೂಜಾರಿ, ಮಂಜುಳಾ ಮಾಧವ ಮಾವೆ, ಯು. ಪಿ. ಇಬ್ರಾಹಿಂ, ಧನಲಕ್ಷ್ಮಿ, ಹರೀಶ ಕಂಜಿಪಿಲಿ, ಶಾಹುಲ್ ಹಮೀದ್ ಕೆ. ಕೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ
ಪಿ.ಪಿ. ವರ್ಗೀಸ್ ಕಡಬ, ಬಿ. ಪದ್ಮಶೇಖರ ಜೈನ್, ಶಯನ ಜಯಾನಂದ, ಸೌಮ್ಯಲತ, ರಶೀದಾ ಬಾನು, ಸರ್ವೋತ್ತಮ ಗೌಡ ಕೆ., ಕೆ. ರವೀಂದ್ರ ಕಂಬಳಿ
ಸಾಮಾಜಿಕ ನ್ಯಾಯ ಸಮಿತಿ
ಸೀಮಾ, ಸುಚರಿತ ಶೆಟ್ಟಿ, ಶೇಖರ ಕುಕ್ಕೇಡಿ, ವಸಂತಿ, ಸುಜಾತಾ ಕೆ.ಪಿ., ಆಶಾ ತಿಮ್ಮಪ್ಪ ಗೌಡ, ಪುಷ್ಪಾವತಿ ಬಾಳಿಲ.
ಗ್ರಂಥಾಲಯ ಸಮಿತಿ ಸದಸ್ಯತ್ವಕ್ಕೆ ಸುಚರಿತ ಶೆಟ್ಟಿ ರಾಜೀನಾಮೆ
ದ.ಕ. ಜಿಲ್ಲಾ ಪಂಚಾಯತ್ 36 ಸದಸ್ಯ ಬಲವನ್ನು ಹೊಂದಿದ್ದು, ಐದು ಸಮಿತಿಗಳಿಗೆ ತಲಾ ಏಳು ಸದಸ್ಯರಂತೆ 35 ಸದಸ್ಯರಿಗೆ ಸದಸ್ಯರಾಗುವ ಅವಕಾಶ. ಒಬ್ಬ ಸದಸ್ಯ ಯಾವುದೇ ಸಮಿತಿಗಳಲ್ಲಿ ಗುರುತಿಸಲು ಸಾಧ್ಯವಾಗದಿರುವುದರಿಂದ, ಅವರು ಮತದಾನ ಪ್ರಕ್ರಿಯೆಗೆ ಆಗ್ರಹಿಸುವ ಕಾರಣದಿಂದ ಬಿಜೆಪಿಯ ಸುಚರಿತ ಶೆಟ್ಟಿಯವರು ತಮಗೆ ಇತ್ತೀಚೆಗೆ ದೊರಕಿದ್ದ ದ.ಕ. ಜಿಲ್ಲಾ ಗ್ರಂಥಾಲಯ ಸಮಿತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಸ್ಥಾನವನ್ನು ಸಮಿತಿಯಿಂದ ಹೊರಗುಳಿಯುವ ಸದಸ್ಯರಿಗೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಚರಿತ ಶೆಟ್ಟಿಯವರು ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದು, ಕಾಂಗ್ರೆಸ್ನ ಹಿರಿಯ ಸದಸ್ಯ ಎಂ.ಎಸ್. ಮುಹಮ್ಮದ್ರವರು ಯಾವುದೇ ಸ್ಥಾಯಿ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲದ ಕಾರಣ ಇದೀಗ ಅವರು ಗ್ರಂಥಾಲಯ ಸಮಿತಿಗೆ ತೆರವಾಗಲಿರುವ ಸ್ಥಾನಕ್ಕೆ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.