ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕರ ಹೆಚ್ಚಳಕ್ಕೆ ನಿರ್ಣಯ
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ
![ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕರ ಹೆಚ್ಚಳಕ್ಕೆ ನಿರ್ಣಯ ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕರ ಹೆಚ್ಚಳಕ್ಕೆ ನಿರ್ಣಯ](https://www.varthabharati.in/sites/default/files/images/articles/2016/06/30/7_063016095035.jpg)
ಬಂಟ್ವಾಳ, ಜೂ.30: ಪುರಸಭಾ ವ್ಯಾಪ್ತಿಯಲ್ಲಿ ಮುಂದಿನ ತಿಂಗಳಿನಿಂದ ನೀರಿನ ಕರ ಹೆಚ್ಚಿಸಲು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ನಿರ್ಣಯವನ್ನು ಅಂಗೀಕರಿಸಿದ್ದು, ಗೃಹಬಳಕೆದಾರರಿಗೆ ಈವರೆಗಿದ್ದ 60 ರೂ. ಇನ್ನು ಮುಂದೆ 80 ರೂ. ಆಗಲಿದ್ದರೆ ವಾಣಿಜ್ಯ ಬಳಕೆಗೆ ಇದ್ದ 150 ರೂ.ವನ್ನು 200ಕ್ಕೆ ಏರಿಸಲಾಗಿದೆ.
ಪುರಸಭೆಯ ಆದಾಯದ ಹಿತದೃಷ್ಟಿಯಿಂದ ಮತ್ತು ಈ ಸಂಬಂಧ ಸರಕಾರದಿಂದಲೂ ಹಲವು ಸುತ್ತೋಲೆಗಳು ಬಂದಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ನೀರಿನ ಕರೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸದ್ಯದ ಮಟ್ಟಿಗೆ ನೀರು ಪೂರೈಕೆಯ ವ್ಯವಸ್ಥೆ ಸರಿಯಿಲ್ಲದಿದ್ದು ಮುಂದಿನ ವರ್ಷ 2ನೆ ಹಂತದ ಬೃಹತ್ ಕುಡಿಯುವ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ನೀರಿನ ಕರ ಹೆಚ್ಚಿಸುವಂತೆ ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಸಲಹೆ ನೀಡಿದರೆ, ಅಕ್ರಮ ನಳ್ಳಿ ನೀರಿನ ಸಂಪರ್ಕ ಪಡೆದವರ ವಿರುದ್ಧ ಹಾಗೂ ಕೆಲವೆಡೆ ಒಂದೇ ಮನೆಗೆ ಮೂರು ನಳ್ಳಿ ನೀರಿನ ಸಂಪರ್ಕ ಪಡೆದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರಾದ ವಾಸು ಪೂಜಾರಿ, ಪ್ರವೀಣ್ ಬಿ. ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಅಕ್ರಮ ನಳ್ಳಿ ನೀರಿನ ಸಂಪರ್ಕವನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಪುರಸಭೆಯಿಂದ ಶೀಘ್ರವೇ ಪ್ರಕಟನೆಯೊಂದನ್ನು ಹೊರಡಿಸಲಾಗುವುದು ಎಂದು ತಿಳಿಸಿದರು. ಸುದೀರ್ಘ ಚರ್ಚೆಯ ಬಳಿಕ ಗೃಹಬಳಕೆದಾರರರಿಗೆ ಹೀಗಿರುವ 60 ರೂ.ಗೆ 20 ರೂ. ಹೆಚ್ಚಿಸಿ 80 ರೂ. ಹಾಗೆಯೇ ವಾಣಿಜ್ಯ ಬಳಕೆದಾರರರಿಗೆ ಈಗಿರುವ 150 ರೂ.ಗೆ 50 ರೂ. ಹೆಚ್ಚಿಸಿ 200 ರೂ. ಪಡೆಯಲು ನಿರ್ಧಾರ ಕೈಗೊಳ್ಳಲಾಯಿತು.
ಆಡಳಿತ ಸದಸ್ಯರ ಆಕ್ರೋಶ
ಮಳೆಗಾಲಕ್ಕೆ ಮುನ್ನ ಚರಂಡಿಯ ಹೂಳೆತ್ತದಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ಪ್ರಾಕೃತಿಕ ವಿಕೋಪದಿಂದ ಜಕ್ರಿಬೆಟ್ಟು ಕಾಲೇಜು ಬಳಿ ಲೊರೆಟ್ಟೋ ಪರಿಸರ ಮೊದಲಾದೆಡೆ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ದಾರಿದೀಪದ ವ್ಯವಸ್ಥೆಯೇ ಇಲ್ಲ. ಪುರಸಭೆಗೆ ಸಮಸ್ಯೆಯನ್ನು ಹೇಳಿದರೆ ಕೇಳುವವರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಸದಸ್ಯರಾದ ಗಂಗಾಧರ, ವಾಸು ಪೂಜಾರಿ, ಪ್ರವೀಣ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್, ಮೆಸ್ಕಾಂ ಸಹಿತ ಇಲಾಖಾಧಿಕಾರಿಗಳಿಗೆ ಸಭೆಯ ನೋಟಿಸು ಜಾರಿಗೊಳಿಸಲಾಗಿದೆ, ಆದರೆ ಅವರು ಗೈರಾಗಿದ್ದಾರೆ. ಬಲವಂತವಾಗಿ ಅವರನ್ನು ಕರೆಸಲು ಸಾಧ್ಯವಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ, ಪುರಸಭೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯೊಂದನ್ನು ಶೀಘ್ರವಾಗಿ ನಿಗದಿಪಡಿಸಲಾಗುವುದು. ಆಗ ಎಲ್ಲ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳೋಣ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ಬಂಟ್ವಾಳ ಪರಿಸರದಲ್ಲಿ ಡೆಂಗ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು, ವ್ಯಾಪಕವಾಗಿದ್ದು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದವರ ಗಮನಸೆಳೆಯುವಂತೆ ಸದಸ್ಯರು ಆಗ್ರಹಿಸಿದರು. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದೆಂದು ಅಧ್ಯಕ್ಷರು ಭರವಸೆ ನೀಡಿದರು.
ಘನತ್ಯಾಜ್ಯ ವಿಲೇವಾರಿಯಾದ ಸ್ಥಳದಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಕ್ರಿಮಿಗಳನ್ನು ನಾಶಗೊಳಿಸುವ ಕಾರ್ಯ ನಡೆಯಬೇಕು. ಇದಕ್ಕೆ ಪುರಸಭೆಯಿಂದಲೇ ವ್ಯವಸ್ಥೆ ಮಾಡುವಂತೆ ಅವರು ಮುಖ್ಯಾಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಮುಹಮ್ಮದ್ ನಂದಾವರ, ಸದಸ್ಯರಾದ ಮುಹಮ್ಮದ್ ಇಕ್ಬಾಲ್ ಐಎಂಆರ್, ಮುನೀಶ್ ಅಲಿ, ಮುಮ್ತಾಝ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.