ತಿಂಗಳ 2ನೆ ಸೋಮವಾರ ಕಾರ್ಮಿಕ ಅದಾಲತ್: ಡಿಸಿ
ಮಂಗಳೂರು, ಜೂ.30: ಕಟ್ಟಡ ಕಾರ್ಮಿಕರು, ಇನ್ನಿತರ ಕಾರ್ಮಿಕರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸಲು ಸಹಾಯಕ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಪ್ರತೀ ತಿಂಗಳ 2ನೆ ಸೋಮವಾರ ಕಾರ್ಮಿಕ ಅದಾಲತ್ಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಕಟ್ಟಡ ಕಾರ್ಮಿಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಇಲಾಖೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರ ನೋಂದಣಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಮಾಜಿ ಹೊರಗುತ್ತಿಗೆ ನೌಕರ ವಿಷ್ಣುಪ್ರಸಾದ್ ಹಾಗೂ ಆತನನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಂಡಿದ್ದ ಬೆಂಗಳೂರಿನ ಅರನೀಸ್ ಬುಸಿನೆಸ್ ಪ್ರೊಸೆಸ್ ಏಜನ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಹಾಯಕ ಕಾರ್ಮಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಒಟ್ಟು 9,610 ಜನರು ನೋಂದಣಿ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 4,607 ಅರ್ಜಿಗಳು ಪುರಸ್ಕೃತಗೊಂಡು ವಿವಿಧ ಸೌಲಭ್ಯಗಳಿಗಾಗಿ ಇವರಿಗೆ 2,12,52,098 ರೂ. ವೆಚ್ಚ ಮಾಡಲಾಗಿದೆ. 1,923 ಅರ್ಜಿಗಳು ತಿರಸ್ಕೃತಗೊಂಡಿದ್ದರೆ, 3,080 ಅರ್ಜಿಗಳು ಬಾಕಿ ಇವೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇನ್ನು ಮುಂದೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವ ಮುನ್ನ ಯಾವ ಕಾರಣಕ್ಕೆ ತಿರಸ್ಕೃತಗೊಂಡಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಕಾರಣಗಳನ್ನು ಕಾಲಮಿತಿಯೊಳಗೆ ಸರಿಪಡಿಸಿ ತರುವಂತೆ ಅವಕಾಶ ನೀಡಬೇಕು. ನಂತರವೂ ಅವರು ಸರಿಪಡಿಸದಿದ್ದಲ್ಲಿ ತಿರಸ್ಕರಿಸಲು ಹಾಗೂ ಬಾಕಿ ಇರುವ 3,080 ಅರ್ಜಿಗಳನ್ನು ಜುಲೈ 30ರೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಸುಮಾರು 500ಕ್ಕೂ ಮಿಕ್ಕಿ ಕಟ್ಟಡ ಕಾರ್ಮಿಕರು 3 ಅವಕಾಶ ಗಳನ್ನು ನೀಡಿದರೂ ತಮ್ಮ ಸದಸ್ಯತ್ವ ನವೀಕರಣ ಮಾಡಿಸದೆ ಇರುವುದು ಕಂಡು ಬಂದಿದ್ದು, ಇವರ ಸದಸ್ಯತ್ವ ನವೀಕರಣವನ್ನು ಕಾರ್ಮಿಕ ಕಲ್ಯಾಣ ಮಂಡಳಿಗಳಿಗೆ ವಿಶೇಷ ಆದ್ಯತೆ ಮೇಲೆ ನವೀಕರಿಸಲು ಅವಕಾಶ ಕೋರಿ ಪತ್ರ ಬರೆಯಲು ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕಾರ್ಮಿಕ ಸಂಘಟನೆಯ ಸಿಐಟಿಯು ಘಟಕದ ವಸಂತ ಆಚಾರಿ ಉಪಸ್ಥಿತರಿದ್ದರು.





