ಪುತ್ತೂರು: ಗಾಳಿ-ಮಳೆಯಿಂದ ಮನೆಗೆ ಹಾನಿ;ಮಹಿಳೆಗೆ ಗಾಯ
![ಪುತ್ತೂರು: ಗಾಳಿ-ಮಳೆಯಿಂದ ಮನೆಗೆ ಹಾನಿ;ಮಹಿಳೆಗೆ ಗಾಯ ಪುತ್ತೂರು: ಗಾಳಿ-ಮಳೆಯಿಂದ ಮನೆಗೆ ಹಾನಿ;ಮಹಿಳೆಗೆ ಗಾಯ](https://www.varthabharati.in/sites/default/files/images/articles/2016/07/1/1ptr3-male-haani.jpg)
ಪುತ್ತೂರು, ಜು.1: ಗುರುವಾರ ರಾತ್ರಿ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಯಿಂದಾಗಿ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಾಂಧೀನಗರ ಎಂಬಲ್ಲಿ ಮನೆಯೊಂದಕ್ಕೆ ಹಾನಿಯಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅದೇ ಮನೆಯ ಅಂಗಳದಲ್ಲಿರುವ ಕೊರಗಜ್ಜ ದೈವದ ಗುಡಿಯ ಮೇಲ್ಛಾವಣಿಗೂ ಹಾನಿಯಾಗಿದೆ.
ಕೆದಿಲ ಗ್ರಾಮದ ಗಾಂಧೀನಗರ ನಿವಾಸಿ ಅಪ್ಪಿ ಮುಗೇರ ಎಂಬವರ ಮನೆಯ ಮಾಡಿನ ಹೆಂಚುಗಳು ಹಾರಿಹೋಗಿದ್ದು, ಹೆಂಚು ಮೈಮೇಲೆ ಬಿದ್ದ ಪರಿಣಾಮವಾಗಿ ಅಪ್ಪಿಮುಗೇರ ಅವರು ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಮನೆಯೊಳಗಿದ್ದ 6ತಿಂಗಳ ಮಗು ಸಹಿತ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಒಂದು ಭಾಗದ ಹೆಂಚುಗಳು ಮತ್ತು ಮನೆಯ ಎದುರು ಭಾಗದಲ್ಲಿ ಅಳವಡಿಸಲಾಗಿದ್ದ 6 ಸಿಮೆಂಟ್ ಶೀಟುಗಳು ಹಾರಿ ಹೋಗಿವೆ. ಮನೆಯ ಅಂಗಳದಲ್ಲಿರುವ ಕೊರಗಜ್ಜ ದೈವದ ಗುಡಿಯ ಮೇಲ್ಛಾವಣಿಗೂ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಕುಲಾಲ್, ಸದಸ್ಯರಾದ ಕುಶಾಲಪ್ಪ ಕಜೆ, ಒ.ಶ್ಯಾಮ ಪ್ರಸಾದ್ ಭಟ್, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಕಾರ್ಯದರ್ಶಿ ಬಿ.ಗಣರಾಜ ಭಟ್ ಕೆದಿಲ ಮತ್ತಿತರರು ಹಾಗೂ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೆದಿಲ ಗ್ರಾಮದ ಗಾಂಧೀನಗರ ಮತ್ತು ಕೊಳಚ್ಚಪ್ಪು ಮತ್ತಿತರ ಕಡೆಗಳಲ್ಲಿಯೂ ಗಾಳಿ-ಮಳೆಯಿಂದ ಅಪಾರ ಹಾನಿಯಾಗಿದೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.