ಮೂಡುಬಿದಿರೆ: ಆಳ್ವಾಸ್ ವತಿಯಿಂದ ಬೃಹತ್ ಇಫ್ತಾರ್ ಕೂಟ

ಮೂಡುಬಿದಿರೆ, ಜು.1: ಆಹಾರ ತ್ಯಜಿಸುವುದರಿಂದ ಉಪವಾಸ ಪರಿಪೂರ್ಣವಾಗುವುದಿಲ್ಲ. ಕೆರಳುತ್ತಿರುವ ಭಾವನೆಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳುವುದು. ಉಪವಾಸ ಹಾಗೂ ರಮಝಾನ್ನ ಮುಖ್ಯ ಗುರಿಯಾಗಿದೆ ಎಂದು ಮುಸ್ಲಿಂ ಧಾರ್ಮಿಕ ವಿದ್ವಾಂಸ ಸಿರಾಜುದ್ದೀನ್ ಪೈಝಿ ಬಪ್ಪಳಿಕೆ ಹೇಳಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯಲ್ಲಿ ಗುರುವಾರ ನಡೆದ ಆಳ್ವಾಸ್ ಇಫ್ತಾರ್ಕೂಟದಲ್ಲಿ ಅವರು ಮಾತನಾಡಿದರು.
ನಾವು ಎಂದೂ ಅಶ್ಲೀಲ, ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಉಪವಾಸದ ಸಂದರ್ಭದಲ್ಲಿ ಯಾರಾದರೂ ಸಂಘರ್ಷಕ್ಕಿಳಿದರೂ ಪ್ರತೀಕಾರ ಭಾವನೆಯನ್ನು ಬೆಳೆಸದೇ ಕ್ಷಮಾ ಶೀಲವಾಗಿ ಎದುರಿಸಬೇಕು. ಇತರರಿಗೆ ಕೆಡುಕನ್ನು, ಕ್ಷೋಭೆಯನ್ನು ಉಂಟುಮಾಡುವವರನ್ನು ಅಲ್ಲಾಹು ಕ್ಷಮಿಸುವುದಿಲ್ಲ ಎಂದ ಅವರು ಸಹ ಜೀವಿಗಳೊಂದಿಗೆ ಉತ್ತಮ ಒಡನಾಟ, ಸಹಿಷ್ಣುತೆ, ಉತ್ತಮ ನಡವಳಿಕೆಯನ್ನು ಅನುಸರಿಸುವುದು ರಮಝಾನ್ನ ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಚಿವ ಯು.ಟಿ.ಖಾದರ್ ಮಾತನಾಡಿ, ರಮಝಾನ್ ಪರಸ್ಪರ ವಿಶ್ವಾಸ, ಸೌಹಾರ್ದಕ್ಕೆ ಪೂರಕವಾಗಿದೆ. ನಾವು ಪರಸ್ಪರ ಅರಿತು ಬಾಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದರು.
ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವುದು ನಮ್ಮ ಕರ್ತವ್ಯವಾಗಬೇಕು. ಕಠಿಣವಾದ ಉಪವಾಸ ಆಚರಿಸುವುದರಿಂದ ಆತ್ಮ ಸ್ಥೈರ್ಯ ಹೆಚ್ಚುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಪ್ರತಿಯೊಂದು ಧರ್ಮಕ್ಕೂ ನಾವು ಗೌರವ ನೀಡಬೇಕು. ವಿದ್ಯೆಯೊಂದಿಗೆ ಧರ್ಮದ ತಿಳುವಳಿಕೆಯನ್ನು ನೀಡಬೇಕು. ಬದುಕಿಗೆ ಸಂಸ್ಕಾರ ನೀಡುವ ಕೆಲಸವನ್ನು ಮಾಡಬೇಕು ಎಂದರು.
ಮೂಡುಬಿದಿರೆ ವಲಯ ಜಮೀಯತುಲ್ ಫಲಾಹ್ನ ಅಧ್ಯಕ್ಷ ಎಸ್.ಎ. ಗಫೂರ್, ಹಿರಿಯ ಉದ್ಯಮಿಗಳಾದ ನಾರಾಯಣ ಪಿ.ಎಂ., ಶ್ರೀಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಹ್ಯಾ ಪುತ್ತಿಗೆ ಕಿರಾಅತ್ ಪಠಿಸಿದರು. ಮುಹಮ್ಮದ್ ಶರೀಫ್ ಅತಿಥಿಗಳನ್ನು ಪರಿಚಯಿಸಿದರು. ಸಲೀಂ ಹಂಡೇಲ್ ವಂದಿಸಿದರು. ಅಬುಲ್ ಅಲಾ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಇಫ್ತಾರ್ ಕೂಟದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಚಿತ್ರಗಳು: ಮಾನಸ ಡಿಜಿಟಲ್ಸ್, ಮೂಡುಬಿದಿರೆ.







