ನಾಗಾಲ್ಯಾಂಡ್ನಲ್ಲಿ ಅಫ್ಸ್ಪಾ ಮುಂದುವರಿಕೆ
ಹೊಸದಿಲ್ಲಿ,ಜು.1: ಇಡೀ ನಾಗಾಲ್ಯಾಂಡ್ ರಾಜ್ಯವನ್ನು ‘ಆತಂಕಿತ ಪ್ರದೇಶ’ ಎಂದು ಘೋಷಿಸಿ ತಾನು ಹೊರಡಿಸಿದ್ದ ಅಧಿಸೂಚನೆಯನ್ನು ಕೇಂದ್ರವು ಜೂನ್ 30ರಿಂದ ಇನ್ನೂ ಆರು ತಿಂಗಳ ಅವಧಿಗೆ ನವೀಕರಿಸಿದೆ. ಈ ಅಧಿಸೂಚನೆಯು ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆ(ಅಫ್ಸ್ಪಾ)ಯಡಿ ವಾರಂಟ್ ಇಲ್ಲದೆ ಶೋಧ, ದಾಳಿ ಮತ್ತು ಬಂಧನ ಕಾರ್ಯಾಚರಣೆಗಳನ್ನು ನಡೆಸಲು ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡುತ್ತದೆ.
ಸಮಗ್ರ ನಾಗಾಲ್ಯಾಂಡ್ ರಾಜ್ಯವು ನಾಗರಿಕ ಆಡಳಿತದ ನೆರವಿಗೆ ಸಶಸ್ತ್ರ ಪಡೆಗಳ ಬಳಕೆ ಅಗತ್ಯವಾಗಿರುವ ‘ಆತಂಕಿತ ಮತ್ತು ಅಪಾಯಕಾರಿ ’ ಸ್ಥಿತಿಯಲ್ಲಿದೆ ಎನ್ನುವುದು ತನ್ನ ಅಭಿಪ್ರಾಯವಾಗಿದೆ ಎಂದು ಗೃಹ ಸಚಿವಾಲಯವು ತನ್ನ ಅಧಿಸೂಚನೆಯಲ್ಲಿ ಹೇಳಿದೆ.
ಎನ್ಎಸ್ಸಿಎನ್-ಐಎಂ ಅಧ್ಯಕ್ಷ ಇಸಾಕ್ ಚಿಷಿ ಸ್ವು ಅವರು ಅನಾರೋಗ್ಯದಿಂದ ಇಲ್ಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾದ ಮೂರು ದಿನಗಳ ಬಳಿಕ ಸರಕಾರದ ಈ ಪ್ರಕಟಣೆ ಹೊರಬಿದ್ದಿದೆ.
ಸಮಗ್ರ ನಾಗಾಲ್ಯಾಂಡನ್ನು ಆತಂಕಿತ ಪ್ರದೇಶವೆಂದು ಘೋಷಿಸಲು ನಿರ್ದಿಷ್ಟ ಕಾರಣಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ಇದು ಹಲವು ವರ್ಷಗಳ ಹಿಂದಿನ ಆದೇಶದ ಮುಂದುವರಿಕೆಯಾಗಿದೆ ಮತ್ತು ರಾಜ್ಯದಲ್ಲಿಯ ಪ್ರಚಲಿತ ಸ್ಥಿತಿ ಕುರಿತ ವರದಿಯನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಾಗಾ ಬಂಡುಕೋರ ಗುಂಪು ಎನ್ಎಸ್ಸಿಎನ್-ಐಎಂ ಸರಕಾರದೊಂದಿಗೆ ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆಯಾದರೂ ಎಸ್.ಎಸ್.ಖಪ್ಲಾಂಗ್ ನೇತೃತ್ವದ ಇನ್ನೊಂದು ಬಣವು ನಾಗಾಲ್ಯಾಂಡ್ ಮತ್ತು ಮಣಿಪುರಗಳಲ್ಲಿ ಭದ್ರತಾ ಪಡೆಗಳ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದೆ.
ಈಶಾನ್ಯ ಭಾರತ ಮತ್ತು ಜಮ್ಮು-ಕಾಶ್ಮೀರದಲ್ಲಿ ಹಲವರು ಗುಂಪುಗಳು ‘ಕರಾಳ’ ಅಫ್ಸ್ಪಾವನ್ನು ರದ್ದುಗೊಳಿಸುವಂತೆ ಆಗ್ರಹಿಸಿವೆ. ಆದರೆ ಸಶಸ್ತ್ರ ಪಡೆಗಳು ಇದನ್ನು ವಿರೋಧಿಸಿವೆ.