ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ನಿಷ್ಪ್ರಯೋಜಕ, ಹಣ ವ್ಯರ್ಥ
ಮಾಜಿ ಆರ್ಬಿಐ ಉಪ ಗವರ್ನರ್ ರಾಕೇಶ್ ಮೋಹನ್
ಹೊಸದಿಲ್ಲಿ, ಜು.2: ಮುಂಬೈ -ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ ‘ನಿಷ್ಪ್ರಯೋಜಕ’ ಹಾಗೂ ‘ಹಣ ವ್ಯರ್ಥ ಮಾಡುವ’ ಯೋಜನೆಯೆಂದು ಬಣ್ಣಿಸಿರುವ ಆರ್ಬಿಐ ಮಾಜಿ ಗವರ್ನರ್ ರಾಕೇಶ್ ಮೋಹನ್, ಭಾರತದ ಸಾರಿಗೆ ವಲಯ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವ ಅಗತ್ಯವಿದೆಯೆಂದು ಹೇಳಿದ್ದಾರೆ.
ಸರಕಾರ ಸಾರಿಗೆ ವಲಯದಲ್ಲಿ ಹೂಡಿಕೆ ಮಾಡದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಯಶಸ್ವಿಯಾಗದು ಎಂದು ಬ್ರೂಕಿಂಗ್ಸ್ ಇಂಡಿಯಾ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ರಾಕೇಶ್ ಮೋಹನ್ ಹೇಳಿದ್ದಾರೆ.
508 ಕಿ.ಮೀ. ಉದ್ದದ ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಅಂದಾಜು ವೆಚ್ಚ 1 ಲಕ್ಷ ಕೋ ರೂ. ಆಗಿದ್ದು ಇದು ಎರಡು ಸರಕು ಕಾರಿಡಾರ್ಗಳ ಯೋಜನಾ ವೆಚ್ಚಕ್ಕಿಂತಲೂ ಅಧಿಕವಾಗಿದೆ ಎಂದು ಅವರು ವಿವರಿಸಿದ್ದಾರೆ. ಭಾರತ ಹೈ ಸ್ಪೀಡ್ ರೈಲು ಯೋಜನೆಗಳಿಗೆ ಹಣ ವ್ಯರ್ಥ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಎರಡು ಅವಧಿಗೆ ಆರ್ಬಿಐ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ( ಐಎಂಎಫ್) ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ಅನುಭವವಿರುವ ರಾಕೇಶ್ ಮೋಹನ್ ಅವರ ಹೆಸರು ರಘುರಾಮ್ ರಾಜನ್ ಉತ್ತರಾಧಿಕಾರಿಯಾಗಿ ಮುಂದಿನ ಆರ್ ಬಿಐ ಗವರ್ನರ್ ಹುದ್ದೆಗೆ ಸದ್ಯ ಕೇಳಿ ಬರುತ್ತಿದೆ.