ಅ.ಪ್ರದೇಶ:ಭೂಕುಸಿತದಲ್ಲಿ ಸತ್ತವರ ಸಂಖ್ಯೆ 10ಕ್ಕೇರಿಕೆ
![ಅ.ಪ್ರದೇಶ:ಭೂಕುಸಿತದಲ್ಲಿ ಸತ್ತವರ ಸಂಖ್ಯೆ 10ಕ್ಕೇರಿಕೆ ಅ.ಪ್ರದೇಶ:ಭೂಕುಸಿತದಲ್ಲಿ ಸತ್ತವರ ಸಂಖ್ಯೆ 10ಕ್ಕೇರಿಕೆ](https://www.varthabharati.in/sites/default/files/images/articles/2016/07/2/arunachal-pradesh_650x400_81467447078.jpg)
ಇಟಾನಗರ,ಜು.2: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ಭಲುಕ್ಪಾಂಗ್ನಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಇಂದು ಬೆಳಿಗ್ಗೆ ಇನ್ನೂ ಐದು ಶವಗಳು ಪತ್ತೆಯಾಗುವುದರೊಂದಿಗೆ 10ಕ್ಕೇರಿದೆ. ಇವುಗಳಲ್ಲಿ ಒಂಬತ್ತು ತಿಂಗಳ ಮಗುವಿನ ಶವವೂ ಸೇರಿದೆ.
ನಿರಂತರ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಮೃತ ಐವರ ಶವಗಳು ನಿನ್ನೆಯೇ ಪತ್ತೆಯಾಗಿದ್ದು,ಇತರ ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಎ.ಕೋನ್ ತಿಳಿಸಿದರು.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.
ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಾಲಾ ಕಟ್ಟಡ ಸರ್ಕ್ಯೂಟ್ ಹೌಸ್ ಮತ್ತು ನಾಲ್ಕು ಸರಕಾರಿ ಇಲಾಖೆಗಳ ಉಗ್ರಾಣಗಳಿಗೆ ಸಾಕಷ್ಟು ಹಾನಿಯುಂಟಾಗಿದೆ,ಅಲ್ಲದೇ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ನೆರೆ ನೀರು ತುಂಬಿಕೊಂಡಿದೆ.
ಇದು ಈ ವರ್ಷ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿರುವ ಎರಡನೇ ಭಾರೀ ಭೂಕುಸಿತವಾಗಿದೆ. ಎ.22ರಂದು ತವಾಂಗ್ ಜಿಲ್ಲೆಯ ಫಾಮ್ಲಾದಲ್ಲಿ ಸಂಭವಿಸಿದ್ದ ಭೂ ಕುಸಿತದಲ್ಲಿ 16 ಜನರು ಜೀವಂತ ಸಮಾಧಿಯಾಗಿದ್ದರು.