ಮಕ್ಕಳ ಆಯೋಗದ ಅಧ್ಯಕ್ಷರ ಭೇಟಿ
ಉಡುಪಿ, ಜು.2: ಇತ್ತೀಚೆಗೆ ಕುಂದಾಪುರ ತಾಲೂಕಿನ ತ್ರಾಸಿ ಸಮೀಪದ ಮೊವಾಡಿ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತ ದಲ್ಲಿ ಮಡಿದ ಎಂಟು ಮಕ್ಕಳ ಮನೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ ಅವರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರೊಂದಿಗೆ ಭೇಟಿ ನೀಡಿದರು.
ಇದೇ ಸಂದರ್ಭದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳನ್ನು ಭೇಟಿ ಮಾಡಿದರು. ನಾಲ್ಕೂವರೆ ವರ್ಷದ ಬಾಲಕಿ ಲೀಚೆಲ್ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೋರ್ವ ಬಾಲಕ ಆನ್ಸನ್ನನ್ನು ವಾರ್ಡ್ಗೆ ವರ್ಗಾಯಿಸಿದ್ದು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತಿದ್ದಾರೆ. ಉಳಿದೆಲ್ಲಾ ಮಕ್ಕಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುವ ಆರು ಮಕ್ಕಳ ವೈದ್ಯಕೀಯ ವೆಚ್ಚವನ್ನು ಸರಕಾರದ ಮಟ್ಟದಲ್ಲಿ ಭರಿಸುವ ಬಗ್ಗೆ ಪ್ರಯತ್ನಿಸುವುದಾಗಿ ಕೃಪಾ ಆಳ್ವ ತಿಳಿಸಿದರು. ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲಾ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪೋಷಕರು ವಾಹನ ಸಂಚಾರಕ್ಕೆ ಸೂಕ್ತವಾದ ಮಾರ್ಗ ಇದ್ದರೂ ಎರಡು ವರ್ಷಗಳಿಂದ ಶಾಲಾ ವಾಹನದ ವ್ಯವಸ್ಥೆ ಇಲ್ಲದಿರು ವುದರಿಂದ ಖಾಸಗಿ ವಾಹನವನ್ನು ಅವಲಂಬಿಸಿ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಒದಗಿರುವುದಾಗಿ ತಮ್ಮ ಅಳಲನ್ನು ತೋಡಿಕೊಂಡರು. ಎಲ್ಲಾ ಶಾಲೆಗಳಲ್ಲಿ ಶಾಲಾ ವಾಹನದ ವ್ಯವಸ್ಥೆ ಮಾಡುವಂತೆ ಸರಕಾರದಿಂದ ಪ್ರಯತ್ನಿಸುವ ಭರವಸೆಯನ್ನು ಆಳ್ವ ನೀಡಿದರು. ಇನ್ನು ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಭರವಸೆ ನೀಡಿದರು.







