ಸುಳ್ಯದಲ್ಲಿ ಬಸ್-ಬೈಕ್ ಢಿಕ್ಕಿ: ಯುವಕ ಮೃತ್ಯು
ಸುಳ್ಯ, ಜು.3: ಬಸ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಮೊಗರ್ಪಣೆ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಸುಳ್ಯ ಬೆಟ್ಟಂಪಾಡಿ ನಿವಾಸಿ ಮುಹಮ್ಮದ್ರ ಪುತ್ರ, ಸುಳ್ಯ ಮೆನ್ಸ್ ಪಾರ್ಕ್ ಶಾಪ್ನ ಉದ್ಯೋಗಿ ಶೌಕತ್ ಅಪಘಾತದಲ್ಲಿ ಮೃತಪಟ್ಟ ಯುವಕ. ರಮಝಾನ್ ಇಫ್ತಾರ್ಕೂಟದಲ್ಲಿ ಪಾಲ್ಗೊಳ್ಳಲು ಮೊಗರ್ಪಣೆ ಮಸೀದಿಗೆ ತನ್ನ ಸಹೋದ್ಯೋಗಿ ಸೈಫುದ್ದೀನ್ರೊಂದಿಗೆ ಶೌಕತ್ ಬೈಕ್ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಮೊಗರ್ಪಣೆ ಬಳಿ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ಇಬ್ಬರು ಸವಾರರೂ ಗಂಭೀರವಾಗಿ ಗಾಯಗೊಂಡರು. ಸ್ಥಳೀಯರು ತಕ್ಷಣ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ದರು.
ಆದರೆ ಪುತ್ತೂರು ತಲುಪುವಷ್ಟರಲ್ಲಿ ಶೌಕತ್ ಮೃತಪಟ್ಟರೆಂದು ತಿಳಿದು ಬಂದಿದೆ. ಸೈಫುದ್ದೀನ್ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ