ಗುಜರಾತ್ ರೈತರಲ್ಲಿ ಭುಗಿಲೇಳುತ್ತಿದೆ ಮೋದಿ ವಿರುದ್ಧ ಅಸಮಾಧಾನ

ಜೂ ನ್ ಮಧ್ಯಭಾಗ. ತೀವ್ರ ಬರಗಾಲದಿಂದ ಕಂಗೆಟ್ಟ ಜಾಮ್ನಗರ ಜಿಲ್ಲೆಯ ಸುಮ್ರಿ ಗ್ರಾಮದ ರೈತರು ದಟ್ಟ ಕಾಡಿನ ಮರದ ನೆರಳಲ್ಲಿ, ಹಣದುಬ್ಬರ ಹಾಗೂ ಹತ್ತಿ ಬೆಲೆಯ ಬಗ್ಗೆ ಗಹನ ಚರ್ಚೆಯಲ್ಲಿ ತೊಡಗಿದ್ದರು.
ನಾಲ್ಕು ವರ್ಷಗಳ ಹಿಂದೆ ರಸಗೊಬ್ಬರದ ದರ 50 ಕೆ.ಜಿ.ಗೆ 800 ರೂ. ಇತ್ತು. ಇದೀಗ ಈ ಬೆಲೆ 1375 ರೂಪಾಯಿಗೆ ಏರಿದೆ ಎಂದು ಮೂರು ಎಕರೆ ಹತ್ತಿ ಬೆಳೆಯುವ ಭೂಮಿ ಹೊಂದಿರುವ ಭೀಮಾಭಾಯ್ ಚಾಯಿಯಾ ಎಂಬ ರೈತ ನಿಟ್ಟುಸಿರು ಬಿಟ್ಟ. ಹಲವು ಲಕ್ಷ ರೂಪಾಯಿ ಸಾಲದಿಂದ ಆತ ಕಂಗಾಲಾಗಿದ್ದ. ಆದರೆ ನಾವು ಮಾರುವ ಹತ್ತಿಯ ಬೆಲೆ ಕಳೆದ ವರ್ಷ 20 ಕೆ.ಜಿ.ಗೆ 800 ರೂಪಾಯಿ ಕಚ್ಚಾ ಹತ್ತಿಯ ಮಾರುಕಟ್ಟೆ ಬೆಲೆಯನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತದೆ. ಭೀಮಾಭಾಯ್ ಸ್ಥಿತಿಗೆ ಯಾವ ರೀತಿಯಲ್ಲೂ ನೆರವಾಗುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮತ್ತೊಬ್ಬ ರೈತ ರಾಮ್ಬಾಯ್ಚಾಯಿಯಾ, ಹಿಂದಿನ ಯುಪಿಎ ಸರಕಾರ ಹಾಗೂ ಇಂದಿನ ಎನ್ಡಿಎ ಸರಕಾರ ಹೀಗೆ ಎರಡು ಸರಕಾರಗಳನ್ನು ಹೋಲಿಸುತ್ತಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿ, ಮೋದಿ ಮುಖ್ಯ ಮಂತ್ರಿಯಾಗಿದ್ದಾಗ ಹತ್ತಿಯ ಧಾರಣೆ 20 ಕೆಜಿಗೆ 1,400 ರೂಪಾಯಿ ಇತ್ತು. ಆಗ ಮೋದಿ ದೊಡ್ಡ ದೊಡ್ಡ ಮಾತನಾ ಡುತ್ತಿದ್ದರು. ಹತ್ತಿಯ ಬೆಲೆ ಕನಿಷ್ಠ 2,000 ರೂಪಾಯಿ ಆಗಬೇಕು ಎಂದು ಆಗ್ರಹಿಸುತ್ತಿದ್ದರು. ಇದೀಗ ಮೋದಿ ಪ್ರಧಾನಿಯಾ ಗಿದ್ದಾರೆ. ಅವರು ನಮಗಾಗಿ ಏನು ಮಾಡಿದ್ದಾರೆ ನೋಡಿ. ಹತ್ತಿಯಧಾರಣೆ 20 ಕೆ.ಜಿ.ಗೆ 800 ರೂಪಾಯಿ ಆಗಿದೆ. ಏನಿಲ್ಲವೆಂದರೂ, ಮನಮೋಹನ್ ಸಿಂಗ್ ಸುಶಿಕ್ಷಿತ ಅರ್ಥಶಾಸ್ತ್ರಜ್ಞ!
ಹತ್ತಿಯ ಬೆಲೆಯನ್ನು ತಾವು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವ ಸುಮ್ರಿ ರೈತರಿಗೆ ಅರಿವಿದೆ. ಆದರೆ 2017ರಲ್ಲಿ ನಡೆ ಯುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ತಿರುಗಿದೆ ಅಲೆ
ದಶಕದ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿದ ಬಳಿಕ ಪ್ರಧಾನಿಯಾದರು. ಈ ಚುನಾವಣೆಯಲ್ಲಿ ದೇಶಾದ್ಯಂತ ಅದರಲ್ಲೂ ತಮ್ಮ ತವರು ರಾಜ್ಯದಲ್ಲಿ ಭರ್ಜರಿ ಬೆಂಬಲ ಪಡೆದರು.
ಮೋದಿ ಪ್ರಭಾವ ತವರು ರಾಜ್ಯದಲ್ಲಿ ಎಷ್ಟು ದಟ್ಟವಾಗಿದೆ ಎಂದರೆ, ಮೋದಿ ದಿಲ್ಲಿಗದ್ದುಗೆ ಏರಿದ ಬಳಿಕ, ಅವರ ಮುಖ್ಯ ಮಂತ್ರಿ ಸ್ಥಾನವನ್ನು ಅಲಂಕರಿಸಿದ ಆನಂದಿಬೆನ್ ಪಟೇಲ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದು ಎರಡು ವರ್ಷಗಳಾದರೂ ಗುಜರಾತ್ನ ಜನಸಾಮಾನ್ಯರು ಮಾತ್ರ ರಾಜ್ಯದ ಬಿಜೆಪಿ ಸರಕಾರಕ್ಕೆ ಮೋದಿ ಜತೆಗೇ ಸಂಬಂಧ ಕಲ್ಪಿಸುತ್ತಾರೆ.
ಆದರೆ ಇದು ಬಿಜೆಪಿಗೆ ಗುಜರಾತ್ನಲ್ಲಿ ಅನುಕೂಲಕರವಾಗಿ ಪರಿವರ್ತನೆಯಾಗುತ್ತಿಲ್ಲ. ದೊಡ್ಡ ಸಂಖ್ಯೆಯ ಮತದಾರರಲ್ಲಿ ಮೋದಿ ವಿರೋಧಿ ಭಾವನೆಗಳು ದಿನದಿಂದ ದಿನಕ್ಕೆ ದಟ್ಟವಾ ಗುತ್ತಿವೆ. ಅದರಲ್ಲೂ ಮುಖ್ಯವಾಗಿ ಬರದಿಂದ ಕಂಗೆಟ್ಟಿರುವ ಸೌರಾಷ್ಟ್ರ ಪ್ರದೇಶದ ಗ್ರಾಮಗಳಲ್ಲಂತೂ ಮೋದಿ ವಿರೋಧಿ ಅಲೆ ಪ್ರಬಲವಾಗುತ್ತಿದೆ.
ಪಾಟಿದಾರರ ಪ್ರತಿಭಟನೆಯೊಂದಿಗೇ ಈ ಅಸಮಾಧಾನದ ಅಲೆ ಸೃಷ್ಟಿಯಾಗಿದೆ. 2015ರ ಆಗಸ್ಟ್ನಲ್ಲಿ ಪಟೇಲರಿಗೆ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ವೇಳೆ ಪ್ರತಿಭಟ ನಾಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸರಕಾರವೇ ಹೊಣೆ ಎನ್ನುವ ಅಭಿಪ್ರಾಯ ಇಡೀ ಸಮದಾಯದಲ್ಲಿದೆ.
ಕಳೆದ ಫೆಬ್ರವರಿಯಲ್ಲಿ ಪಾಟಿದಾರ್ ಮುಖಂಡರು ಬಹಿರಂಗ ವಾಗಿ ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸಿದ್ದರು. ಜತೆಗೆ ಇದು ಹಲವು ವರ್ಷಗಳಿಂದ ರಾಜ್ಯದಲ್ಲಿ ಮುಸ್ಲಿಂ ವಿರೋಧಿ ಸಿದ್ಧ್ದಾಂತವನ್ನು ಬೆಳೆಸಿದ್ದು, 2002ನೆ ಇಸ್ವಿಯಲ್ಲಿ ಅಧಿಕಾರಕ್ಕೆ ಬರುವ ಏಕೈಕ ಉದ್ದೇಶದಿಂದಲೇ ಗೋಧ್ರಾ ರೈಲು ದಹನ ಹಾಗೂ ಕೋಮುದಳ್ಳುರಿ ಪ್ರಕರಣ ಸೃಷ್ಟಿಸಿದೆ ಎನ್ನುವುದು ಅವರ ಆರೋಪ. ಕಳೆದ ಡಿಸೆಂಬರ್ನಲ್ಲಿ ಗುಜರಾತ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಪ್ರದರ್ಶನ ಪೇಲವವಾಗಲು ತಮ್ಮ ನಿರ್ಧಾರವೇ ಕಾರಣ ಎಂದು ಬಿಜೆಪಿ ಯಿಂದ ಹೊರಗುಳಿಯಲು ನಿರ್ಧರಿಸಿದ ಪಾಟಿದಾರರು ಸಮರ್ಥಿಸಿಕೊಳ್ಳುತ್ತಾರೆ.
ಜೂನ್ ತಿಂಗಳಲ್ಲಿ ಸತತ ಮೂರು ವರ್ಷಗಳಿಂದ ಬರಪೀಡಿತ ವಾಗಿರುವ ಸೌರಾಷ್ಟ್ರ ಪ್ರದೇಶದ ಜಾಮ್ನಗರ ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿದಾಗ, ಬಿಜೆಪಿ ಬಗೆಗಿನ ಆಕ್ರೋಶ ಪಾಟಿದಾರ ಸಮುದಾಯಕ್ಕಷ್ಟೇ ಸೀಮಿತವಲ್ಲ ಎನ್ನುವ ವಾಸ್ತವ ಅರಿವಿಗೆ ಬಂತು. ರಾಜ್ಯಾದ್ಯಂತ ರೈತರು ಬಿಜೆಪಿ ವಿರುದ್ಧ, ಅದರಲ್ಲೂ ಪ್ರಮುಖವಾಗಿ ಮೋದಿ ವಿರುದ್ಧ ಅಸಮಾಧಾನ ಹೊಂದಿರು ವುದು ಸ್ಪಷ್ಟವಾಗಿದೆ. ಪ್ರಧಾನಿಯಾಗಿ ಮೋದಿ ನೀಡಿದ ಬಹುತೇಕ ಆಶ್ವಾಸನೆಗಳು ಇನ್ನೂ ಈಡೇರಿಲ್ಲ ಎನ್ನುವುದು ಅವರ ಅಭಿಮತ.
ಗುಜರಾತ್ ಅಭಿವೃದ್ಧಿಗೆ ಮಳೆಕಾರಣ
ಈ ಗ್ರಾಮದ ಸುತ್ತಮುತ್ತ ಯಾವ ಗ್ರಾಮಗಳಲ್ಲೂ ಪಾಟಿದಾ ರರಿಲ್ಲ. ಆದಾಗ್ಯೂ ಕಳೆದ ವರ್ಷದ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಬಿಜೆಪಿ ಸೋತಿದೆ ಎನ್ನುತ್ತಾರೆ ಜಾಮ್ ನಗರದ ವಿಜಾರ್ಖಿ ಗ್ರಾಮದ ಹತ್ತಿ ಬೆಳೆಗಾರ ಮಹೇಶ್ ಆಹಿರ್. ಬಿಜೆಪಿ ಸೋಲಿಗೆ ಮುಖ್ಯ ಕಾರಣವೆಂದರೆ, ನಮ್ಮಂಥ ಹಲವು ಮಂದಿ ರೈತರು, ನಮ್ಮನ್ನು ಕಡೆಗಣಿಸಿರುವ ಬಗ್ಗೆ ಹತಾಶರಾಗಿರುವುದು ಕಾರಣ ಎನ್ನುವುದು ಅವರ ಸ್ಪಷ್ಟ ನಿಲುವು.
ಈ ಪ್ರದೇಶದ ಇತರ ಹಲವು ಗ್ರಾಮಗಳಂತೆ, ವಿಜಾರ್ಖಿ ಗ್ರಾಮ ಕೂಡಾ ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ ಗ್ರಾಮ. ವಿಜಾರ್ಖಿ ಅಣೆಕಟ್ಟು ತುಂಬಬೇಕಾದರೆ ಮುಂಗಾರು ಮಳೆ ಉತ್ತಮವಾಗಿರಲೇಬೇಕು. ಇದೇ ಜಲಾಶಯವೇ ಅವರ ಕುಡಿಯುವ ನೀರಿಗೆ ಹಾಗೂ ಮನೆಬಳಕೆಯ ನೀರಿನ ಸೆಲೆ. ಜತೆಗೆ ಹೊಲಗಳಿಗೂ ನೀರುಣಿಸುವ ತಾಣ ಇದು. ಆದರೆ 2013ರಲ್ಲಿ ಇದು ಸಂಪೂರ್ಣ ಬತ್ತಿದ ಬಳಿಕ, ಯಾವ ಫೀಡರ್ ಚಾನಲ್ಗಳಲ್ಲೂ ನೀರು ಹರಿದಿಲ್ಲ. ಆ ಬಳಿಕ ಗ್ರಾಮದಲ್ಲಿ ಹನಿ ನೀರಿಗೂ ಟ್ಯಾಂಕರ್ ನೀರಿಗೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ. ಕೃಷಿಗಂತೂ ಹೆಚ್ಚುವರಿ ನೀರು ಕನಸಿನ ಮಾತು.
ಈ ಜಲಾಶಯಕ್ಕೆ ನರ್ಮದಾ ಅಣೆಕಟ್ಟಿನ ಕಾಲುವೆಗಳನ್ನು ಸಂಪರ್ಕಿಸುವುದಾಗಿ ಹಲವು ವರ್ಷಗಳಿಂದ ಸರಕಾರ ಭರವಸೆ ನೀಡುತ್ತಲೇ ಬಂದಿದೆ. ಆದರೆ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸರ್ದಾರ್ ಸರೋವರ ಅಣೆಕಟ್ಟಿನಿಂದ ನಮಗೆ ನೀರು ದೊರಕುವುದು ಯಾವಾಗ? ಎನ್ನುವುದು ಆಹಿರ್ ಅವರ ಪ್ರಶ್ನೆ.
2002ರಿಂದ 2012ರವರೆಗೆ ಗುಜರಾತ್ನಲ್ಲಿ ಉತ್ತಮ ಮಳೆ ಬಿದ್ದದ್ದೇ ರಾಜ್ಯದ ಬೆಳವಣಿಗೆಗೆ ಹಾಗೂ ಅಭೂತ ಪೂರ್ವ ಪ್ರಗತಿಗೆ ಮೂಲ ಕಾರಣವೇ ವಿನಃ ಮೋದಿ ಮುಖ್ಯಮಂತ್ರಿ ಯಾಗಿದ್ದುದು ಕಾರಣವಲ್ಲ ಎನ್ನುವುದು ಅವರ ಖಡಾಖಂಡಿತ ಅಭಿಪ್ರಾಯ.
ಆಹಿರ್ ಹಾಗೂ ಇತರ ರೈತರು ಸಾಲದ ಶೂಲದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಪದೇ ಪದೇ ಬೆಳೆನಷ್ಟ ಉಂಟಾಗಿರುವುದು ಇದಕ್ಕೆ ಕಾರಣ. ರೈತರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ರಾಜ್ಯ ಸರಕಾರದಿಂದ ಆಗಿರುವ ಎಲ್ಲ ವೈಫಲ್ಯಗಳನ್ನು ಸಹಜವಾಗಿಯೇ ಕೇಂದ್ರ ಸರಕಾರದ ಜತೆಗೆ ಸಂಬಂಧ ಕಲ್ಪಿಸಲಾಗುತ್ತಿದೆ.
ವೈಬ್ರಂಟ್ ಗುಜರಾತ್ನಂಥ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರಕಾರದ ಬಳಿ ಸಾಕಷ್ಟು ಹಣವಿದೆ. ಆದರೆ ನರ್ಮದಾ ನದಿ ನೀರನ್ನು ಹಲವು ಗ್ರಾಮಗಳಿಗೆ ಹರಿಸಲು ಮಾತ್ರ ಸರಕಾರದ ಬಳಿ ಹಣ ಇಲ್ಲ ಎಂದು ಜಾಮ್ನಗರದ ತೆಹ್ಬಾ ಗ್ರಾಮದ ಕೃಷಿ ಪರಿಕರ ವ್ಯಾಪಾರಿ ಮತ್ತು ಭಾರತೀಯ ಕಿಸಾನ್ ಸಂದ ಜಿಲ್ಲಾ ಪ್ರಮುಖ್ ಮನಸುಖ ಮುಂಗ್ರಾ ಲೇವಡಿ ಮಾಡುತ್ತಾರೆ. 2017ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಏನು ಡಿಜಿಟಲ್ ಇಂಡಿಯಾ?
ಈ ಬರಪೀಡಿತ ಗ್ರಾಮಗಳ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಯೋಜನೆ ಕೇವಲ ವೈಬ್ರಂಟ್ ಗುಜರಾತ್ ಒಂದೇ ಅಲ್ಲ. ಮೂರು ವರ್ಷಗಳ ಕಾಲ ಸತತ ಮಳೆ ಅಭಾವದ ಪರಿಣಾಮವಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೂ ತತ್ವಾರ. ಜಾನುವಾರುಗಳ ಮೇವಿಗೂ ಬರ. ಇದರ ಜತೆಗೆ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯವೂ ಸಿಗುತ್ತಿಲ್ಲ. ಉದ್ಯೋಗಾವಕಾಶಗಳೂ ಇಲ್ಲ. ಬರ ಪರಿಸ್ಥಿತಿಗೆ ಸರಕಾರದ ಸ್ಪಂದನೆ ವಿಳಂಬ ಹಾಗೂ ಅಸಮರ್ಪಕ. ಗುಜರಾತನ್ನು ಬರಪೀಡಿತ ಎಂದು ಘೋಷಿಸುವ ಬದಲು ಎಪ್ರಿಲ್ನಿಂದ ಇದುವರೆಗೆ 1100 ಗ್ರಾಮಗಳನ್ನು ಅರೆ ಅಭಾವ ಪರಿಸ್ಥಿತಿಯ ಗ್ರಾಮಗಳು ಎಂದು ಘೋಷಿಸಲಾಗಿದೆ.
ಜತೆಗೆ ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ, ಥಂಬ್ ಸ್ಕ್ಯಾನರ್ ಮೂಲಕ ಗ್ರಾಮಸ್ಥರ ಹೆಬ್ಬೆಟ್ಟಿನ ಗುರುತನ್ನು ಖಚಿತಪಡಿ ಸಿಕೊಂಡ ಬಳಿಕವಷ್ಟೇ ಅಕ್ಕಿ ಹಾಗೂ ಗೋಧಿಯನ್ನು ವಿತರಿಸಲಾ ಗುತ್ತದೆ. ಈ ಸ್ಕ್ಯಾನರ್ ಆನ್ಲೈನ್ ಮಾಹಿತಿ ಆಧಾರದಲ್ಲಿ ಕೆಲಸ ಮಾಡುತ್ತದೆ. ಆದರೆ ಆಂತರಿಕ ಸಂಪರ್ಕ ವ್ಯವಸ್ಥೆ ಕೈಕೊಟ್ಟರೆ, ಸರದಿ ಸಾಲುಗಳಲ್ಲಿ ನಿಲ್ಲುವ ಬಡವರಿಗೆ ಪಡಿತರ ಧಾನ್ಯಗಳು ಸಿಗುವುದಿಲ್ಲ.
ಸುಮ್ತಿ ಗ್ರಾಮದ ಭೀಮಾಭಾಯ್ ಚಾಯಿಯಾ ಅವರ ಪ್ರಕಾರ, ಇದು ಮೋದಿಯವರ ಮಹತ್ವಾಕಾಂಕ್ಷಿ, ಅತ್ಯಧಿಕ ಪ್ರಚಾರ ಪಡೆದ ಡಿಜಿಟಲ್ ಇಂಡಿಯಾ ಅಭಿಯಾನದ ಘೋರ ವೈಫಲ್ಯ. ದೇಶಾದ್ಯಂತ ಇಂಟರ್ನೆಟ್ ಸಂಪರ್ಕ ಜಾಲವನ್ನು ಬಲಪ ಡಿಸುವ ಮಹತ್ವಾಕಾಂಕ್ಷೆಯ ಯೋಜನೆಯ ವೈಫಲ್ಯಕ್ಕೆ ಇದು ಕನ್ನಡಿ ಎನ್ನುವುದು ಅವರ ಅಭಿಪ್ರಾಯ. ಸ್ಕ್ಯಾನರ್ಗಳಲ್ಲಿ ನಮ್ಮ ಬೆರಳಚ್ಚು ಪಡೆಯುತ್ತಾರೆ. ಆದರೆ ಇಂಟರ್ನೆಟ್ ಸಂಪರ್ಕ ಕೈಕೊಟ್ಟರೆ,ಮನೆಗೆ ಹೋಗಿ, ಮತ್ತೊಂದು ದಿನ ಬರುವಂತೆ ಸೂಚಿಸುತ್ತಾರೆ ಎಂದು ಚಾಯಿಯಾ ಹೇಳುತ್ತಾರೆ. ಇದನ್ನು ಮೋದಿ ಡಿಜಿಟಲ್ ಇಂಡಿಯಾ ಎಂದು ಕರೆಯುತ್ತಾರೆಯೇ? ಅಂತರ್ಜಾಲ ಇಲ್ಲದಿ ರುವುದು, ಪಡಿತರ ಸಿಗದಿರುವುದು ಡಿಜಿಟಲ್ ಇಂಡಿಯಾವೇ? ಎನ್ನುವುದು ಅವರ ಪ್ರಶ್ನೆ.
ಮೋದಿ ಸರಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಯಾದ ಸರ್ದಾರ್ ಪಟೇಲ್ ಅವರ ಏಕತೆಯ ಪುತ್ಥಳಿ ಸ್ಥಾಪಿಸುವ ಯೋಜನೆ ಬಗ್ಗೆ ಅದೇ ಗ್ರಾಮದ ರಾಮ್ಭಾಯ್ ಚಾಯಿಯಾ ಆಕ್ರೋಶ ವ್ಯಕ್ತಪಡಿಸುತ್ತಾರೆ. ನರ್ಮದಾ ಅಣೆಕಟ್ಟುಬಳಿ 3,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಿಸಲು ಉದ್ದೇಶಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಅವರು ಪುತ್ಥಳಿ ಸ್ಥಾಪಿಸಲು ಮುಂದಾಗಿದ್ದಾರೆ? ಎನ್ನುವುದು ಅವರ ಪ್ರಶ್ನೆ. ಆ ಹಣದಲ್ಲಿ ಒಂದು ಭಾಗವನ್ನು ನಮಗೆ ನೀಡಲು ಹೇಳಿ. ಇದರಿಂದ ನಾವು ನಮ್ಮ ಸಾಲವನ್ನಾದರೂ ತೀರಿಸಿಕೊಳ್ಳಬಹುದು.
ಕೃಪೆ: scroll.in







