ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ ನಿಷೇಧ: ಡಿಸಿ ಸೂಚನೆ
ಮಂಗಳೂರು, ಜು.3: ಭಾರತದ ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹಬ್ಬ ಗಳಲ್ಲಿ ಹಾಗೂ ಮತ್ತಿತರ ಸರಕಾರಿ ಸಮಾರಂಭಗಳಲ್ಲಿ ಆರೋಹಣ ಮಾಡುವುದು ಮತ್ತು ರಾಷ್ಟ್ರಗೀತೆಯೊಂದಿಗೆ ಧ್ವಜವನ್ನು ಗೌರವಿಸುವುದು ರಾಷ್ಟ್ರಭಕ್ತಿಗಳನ್ನೊಳಗೊಂಡ ಸಂಪ್ರದಾಯವಾಗಿದೆ. ಆದ್ದರಿಂದ ಸಾರ್ವಜನಿಕರು ಧ್ವಜದ ಪ್ರಾಮುಖ್ಯತೆ ಅರಿತು, ಗೌರವಪೂರ್ವಕವಾಗಿ ಬಳಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಆದರೆ ರಾಷ್ಟ್ರಧ್ವಜಗಳನ್ನು ಕಿರಿಯರು ಹಿರಿಯರು ಎನ್ನದೆ ಬಳಸುವುದು ಮತ್ತು ಬಳಸಿದ ಧ್ವಜಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಎಸೆಯಲ್ಪಟ್ಟ ಧ್ವಜಗಳು ಜನಸಾಮಾನ್ಯರ ಕಾಲ್ತುಳಿತಕ್ಕೆ ಒಳಗಾಗುವುದು. ರಸ್ತೆ ಬದಿ ಚರಂಡಿಗಳಲ್ಲಿ ಕಂಡು ಬರುವುದು ಶೋಚ ನೀಯ. ಇದು ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನವಾಗಿದ್ದು, ಇದನ್ನು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಬೇಕಾಗುತ್ತದೆ.
ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮನಬಂದಂತೆ ಬಳಸಿ, ಎಲ್ಲೆಂದರಲ್ಲಿ ವಿಲೇ ಮಾಡುವುದು ಮತ್ತು ಈ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಷ್ಟಧ್ವಜಕ್ಕೆ ಅವಮಾನ ಹಾಗೂ ಅಗೌರವ ತೋರುವುದನ್ನು ತಡೆಗಟ್ಟಬೇಕಿದೆ. ಅಲ್ಲದೇ, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರವಾಗುವುದರಿಂದ, ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ, ಪೇಪರ್ನಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸುವಂತೆ ಮತ್ತು ಕಾರ್ಯಕ್ರಮ ಮುಗಿದ ನಂತರ ಅವುಗಳನ್ನು ನೆಲದ ಮೇಲೆ ಎಲ್ಲೆಂದರಲ್ಲಿ ಎಸೆಯಬಾರದು.
ಹಾನಿಗೊಂಡ, ಹಳೆಯದಾಗಿರುವ ರಾಷ್ಟ್ರ ಧ್ವಜವನ್ನು ಗೌರವಪೂರ್ವಕ ವಾಗಿ ಖಾಸಗಿಯಾಗಿ ಸುಟ್ಟು ನಾಶಗೊಳಿಸಬೇಕು. ಇದರ ಹೊರತಾಗಿ ಬೇರೆ ಯಾವುದೇ ರೀತಿಯಲ್ಲಿ ವಿಲೇ ಮಾಡಬಾರದು. ರಾಷ್ಟ್ರಧ್ವಜ ಮತ್ತು ರಾಷ್ಟ್ರದ ಲಾಂಛನವನ್ನು ನಾಶಗೊಳಿಸುವ ಅವಮಾನಿಸುವ ಅಥವಾ ಧ್ವಜ ನಿಯಮಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.