ಸಚಿವರ ಬಗ್ಗೆ ಪ್ರಧಾನಿಯ ಸಮೀಕ್ಷೆಯಲ್ಲಿ ನನಗೆ ನಂಬಿಕೆಯಿಲ್ಲ, ಎಂದ ಕೇಂದ್ರ ಸಚಿವ ಬೀರೇಂದ್ರ ಸಿಂಗ್
ನವದೆಹಲಿ, ಜು.4: ತಮ್ಮ ಸಚಿವ ಸಹೋದ್ಯೋಗಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಆನ್ ಲೈನ್ ಸಮೀಕ್ಷೆಯ ಫಲಿತಾಂಶದಲ್ಲಿ ತಮಗೆ ನಂಬಿಕೆಯಿಲ್ಲ, ಎಂದು ಕೇಂದ್ರ ಗ್ರಾಮೀಣ ವಿಕಾಸ ಸಚಿವ ಚೌಧುರಿ ಬೀರೇಂದ್ರ ಸಿಂಗ್ ಹೇಳಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಜತೆ `ಐಡಿಯಾಸ್ ಎಕ್ಸ್ ಪೋಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ಸಚಿವರ ಕಾರ್ಯ ಶೈಲಿಯನ್ನು ನಾವು ಸ್ವತಹ ನಮ್ಮ ಕಣ್ಣುಗಳಿಂದಲೇ ನೋಡದ ಹೊರತು ನಮಗೆ ಅವರ ಕಾರ್ಯನಿರ್ವಹಣೆಯ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲವೆಂದಿದ್ದಾರೆ.
ಈ ಸಮೀಕ್ಷೆಯ ಫಲಿತಾಂಶ ಸರಕಾರದ ರೇಟಿಂಗ್ ಮಾಡಿಲ್ಲ. ಬೇರೆ ಬೇರೆ ಸಮೀಕ್ಷೆ, ಏಜನ್ಸಿಗಳು ಹಾಗೂ ಇತರರಿಂದ ಈ ರೇಟಿಂಗ್ ನೀಡಲಾಗಿದೆ ಎಂದು ಹೇಳಿದ ಅವರು ಸಮೀಕ್ಷೆಯ ವಿಶ್ವಸನೀಯತೆಯನ್ನು ಪ್ರಶ್ನಿಸಿದ್ದಾರೆ. ``ನಾನು ಇಂತಹ ಸಮೀಕ್ಷೆಗಳ ಫಲಿತಾಂಶಗಳನ್ನು ನಂಬುವುದಿಲ್ಲ, ಇದು ಒಂದು ವೈಜ್ಞಾನಿಕ ಸಮೀಕ್ಷೆಯಾಗಿಬಹುದು, ಆದರೆ ಅದು ಒಬ್ಬ ವ್ಯಕ್ತಿಯ ಮನಸ್ಸನ್ನು ಓದಲು ಸಾಧ್ಯವಿಲ್ಲ, ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಸಿಂಗ್ ಕಳೆದ ಲೋಕಸಭಾ ಚುನಾವಣೆಯ ಮೊದಲು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಅವರು ``ಬಿಜೆಪಿ ಕ್ಯಾಡರ್ ಆಧರಿತ ಪಕ್ಷವಾಗಿದ್ದು ಕಾಂಗ್ರೆಸ್ ಆಂದೋಲನವೊಂದರ ಮುಖಾಂತರ ಹುಟ್ಟಿಕೊಂಡ ಪಕ್ಷವಾಗಿದೆ. ಬಿಜೆಪಿಯಲ್ಲಿ ದೊಡ್ಡ ನೇತಾರರಗೆ ನೀಡುವಷ್ಟೇ ಮಹತ್ವವನ್ನು ಕಾರ್ಯಕರ್ತರಿಗೂ ನೀಡಲಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಹಾಗಿಲ್ಲದೇ ಇರಬಹುದು,'' ಎಂದು ಹೇಳಿದರು.