ಅಭಿವೃದ್ಧಿಯಲ್ಲಿ ಜನರ ಪಾಲುದಾರಿಕೆ ಉತ್ತಮ ವಿಚಾರ: ಶಕುಂತಳಾ ಶೆಟ್ಟಿ
ಮಾದರಿ ವಾರ್ಡ್ ರಚನೆಗೆ ಚಾಲನೆ
![ಅಭಿವೃದ್ಧಿಯಲ್ಲಿ ಜನರ ಪಾಲುದಾರಿಕೆ ಉತ್ತಮ ವಿಚಾರ: ಶಕುಂತಳಾ ಶೆಟ್ಟಿ ಅಭಿವೃದ್ಧಿಯಲ್ಲಿ ಜನರ ಪಾಲುದಾರಿಕೆ ಉತ್ತಮ ವಿಚಾರ: ಶಕುಂತಳಾ ಶೆಟ್ಟಿ](https://www.varthabharati.in/sites/default/files/images/articles/2016/07/4/4ptr2-Nagarasabhe.jpg)
ಪುತ್ತೂರು, ಜು.4: ಮಾದರಿ ವಾರ್ಡ್ ಎಂಬುದು ಊರಿನ ಅಭಿವೃದ್ಧಿಯ ಹಾಗೂ ಊರಿನ ಜನರನ್ನೂ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸುವ ದೃಷ್ಟಿಕೋನದ ಕಾರ್ಯಕ್ರಮ. ವಾರ್ಡ್ನ ಸಮಸ್ಯೆಗಳನ್ನು ಗುರುತಿಸಿ ಬೆಳಕು ತೋರುವ ಈ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎಂದು ರಾಜ್ಯ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಅವರು ಮರೀಲ್ ಯೂತ್ ಕೌನ್ಸಿಲ್, ನಮ್ಮ ವಾರ್ಡ್ ಜನ ಸೇವಾ ಸಮಿತಿ, ಕಲಿಯುಗ ಸೇವಾ ಸಮಿತಿ ನೆಕ್ಕರೆ, ನಗರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪುತ್ತೂರು ನಗರಸಭೆಯ 7, 20, 23, 24, 25 ವಾರ್ಡ್ಗಳನ್ನು ಮಾದರಿ ವಾರ್ಡ್ಗಳ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಧರ್ಮದ ಜನರು ಬೇಧ ಮರೆತು ಬಾಂಧವ್ಯದಿಂದ ಕೆಲಸಮಾಡುವ ಕಾರ್ಯವು ಇಲ್ಲಿಂದ ಆರಂಭವಾಗಿದೆ. ಇದು ವಾರ್ಡ್, ಗ್ರಾಮ, ತಾಲೂಕು ಹೀಗೆ ದೊಡ್ಡ ಎಲ್ಲಾ ಕಡೆ ಮಾದರಿಯಾಗಿ ಪಸರಿಸಬೇಕು. ಸರ್ವಧರ್ಮೀಯರು ಒಂದೇ ಎಂಬ ಭಾವನೆಯನ್ನು ಮೆರೆಯುವ ಜತೆಗೆ ಅಭಿವೃದ್ಧಿಯ ಆಶಯ ಈಡೇರಬೇಕು ಎಂದರು.
ನಮ್ಮ ವಾರ್ಡ್ ಜನ ಸೇವಾ ಸಮಿತಿ ಸಂಚಾಲಕ ಹಾಗೂ ಬೆದ್ರಾಳ ಚರ್ಚ್ನ ಧರ್ಮಗುರು ಪಾ.ಫ್ರಾನ್ಸಿಸ್ ಅಸ್ಸಿಸಿ ಡಿ ಅಲ್ಮೇಡಾ ಮಾತನಾಡಿ, ಈ ಕಾರ್ಯಕ್ರಮವನ್ನು ಒಂದು ಧರ್ಮ, ಜಾತಿಗೆ ಮೀಸಲಿಡದೆ ಸಮಾಜದ ಒಳಿತಿಗಾಗಿ ಎಲ್ಲರ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಸಮಾಜದ ಕಾರ್ಯಕರ್ತನಾಗಿ ಸುತ್ತಮುತ್ತಲಿನ ಜನರನ್ನು ಸಾಮಾಜಿಕ ಕಳಕಳಿಯಿಂದ ಒಟ್ಟಾಗಿಸಿ ಅವರ ಪ್ರದೇಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು, ಪೌರಾಯುಕ್ತೆ ರೇಖಾ ಜೆ. ಶೆಟ್ಟಿ, ಸದಸ್ಯರಾದ ಎಚ್. ಮುಹಮ್ಮದ್ ಅಲಿ, ಮುಕೇಶ್ ಕೆಮ್ಮಿಂಜೆ, ಅನ್ವರ್ ಖಾಸಿಂ, ಶೈಲಾ ಪೈ, ನಾಮ ನಿರ್ದೇಶಿತ ಸದಸ್ಯ ಕೇಶವ ಪೂಜಾರಿ ಬೆದ್ರಾಳ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪ್ರೊ ಎಡ್ವಿನ್ ಡಿ’ಸೋಜಾ, ಕಲಿಯುಗ ಸೇವಾ ಸಮಿತಿ ಅಧ್ಯಕ್ಷ ಜಯರಾಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮರೀಲ್ ಯೂತ್ ಕೌನ್ಸಿಲ್ ಅಧ್ಯಕ್ಷ ರೋಶನ್ ಡಿಸೋಜ ಸ್ವಾಗತಿಸಿದರು. ನಮ್ಮ ವಾರ್ಡ್ ಜನ ಸೇವಾ ಸಮಿತಿ ಸಂಯೋಜಕ ಎಡೋಲ್ಫ್ ಫೆರ್ನಾಂಡಿಸ್ ವಂದಿಸಿದರು. ಅನಿಲ್ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.
ಮಾದರಿ ವಾರ್ಡ್ ಯೋಜನೆಯ ಕಾರ್ಯಚಟುವಟಿಕೆಗಳು
ಸಾರ್ವಜನಿಕರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಎಲ್ಲಾ ಪಿಂಚಣಿ ಮತ್ತು ವೇತನಗಳನ್ನು ಪಡೆಯುವಲ್ಲಿ ಸಹಕಾರ
2016-17 ರಲ್ಲಿ ಮರೀಲ್ ಪರಿಸರದಲ್ಲಿ ಸುಮಾರು 2,000 ಗಿಡಗಳನ್ನು ನೆಟ್ಟು ಹಸಿರು ಕ್ರಾಂತಿಯೆಡೆಗೆ ನಡೆ
ಸ್ವಚ್ಛತಾ ಆಂದೋಲನ *ಎಲ್ಲಾ ಸಾರ್ವಜನಿಕ ರಸ್ತೆಗಳಿಗೆ ರಸ್ತೆ ಸೂಚನಾ ಫಲಕಗಳ ಅಳವಡಿಕೆ
ರಸ್ತೆ ಸಮಸ್ಯೆಯಿರುವ ಕಡೆಗಳಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿ ರಸ್ತೆ ನಿರ್ಮಿಸುವಲ್ಲಿ ಸಹಕಾರ.
ಎಲ್ಲಾ ಸಾರ್ವಜನಿಕ ರಸ್ತೆಗಳಿಗೆ ನಗರಸಭೆಯ ವತಿಯಿಂದ ಕಾಂಕ್ರೀಟ್/ ಡಾಮರು/ಇಂಟರ್ಲಾಕ್ ಅಳವಡಿಸುವಂತೆ ನೋಡಿಕೊಳ್ಳುವುದು.
ಪ್ರತಿಯೊಂದು ರಸ್ತೆಗೆ ಶಾಶ್ವತ ಚರಂಡಿ ವ್ಯವಸ್ಥೆ ನಗರ ಸಭಾ ವತಿಯಿಂದ ಮಾಡಿಸುವಂತೆ ನೋಡಿಕೊಳ್ಳುವುದು.
ನಗರಸಭಾ ವತಿಯಿಂದ ಕೊಳವೆ ಬಾವಿ ಅಥವಾ ಇತರ ಸೌಕರ್ಯಗಳ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು.
ಭ್ರಷ್ಟಾಚಾರ ಮುಕ್ತವಾಗಿ ಸರಕಾರದ ಸವಲತ್ತುಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವಲ್ಲಿ ಸಹಕಾರ.
ಕಾಲಕಾಲಕ್ಕೆ ದಾರಿ ದೀಪ ಮತ್ತು ಮೆಸ್ಕಾಂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು.
ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಹಕಾರ
ಕಾನೂನಿನ ಅರಿವು ಮೂಡಿಸುವುದು, ಮಹಿಳಾ ಸಬಲೀಕರಣದೆಡೆಗೆ ಹೆಜ್ಜೆ
ಸಾರ್ವಜನಿಕವಾಗಿ ಸಂಬಂಧಿಸಿದ ಕಂದಾಯ ಮತ್ತು ಕಾನೂನಿನ ಸಮಸ್ಯೆಗಳಿಗೆ ಪರಿಹಾರ
ಸರ್ವ ಶಿಕ್ಷಣ ಅಭಿಯಾನ ಮತ್ತು ಕಡ್ಡಾಯ ಶಿಕ್ಷಣದ ಕುರಿತ ಕ್ರಮಗಳು
ಎಲ್ಲಾ ಅಂಗನವಾಡಿಗಳನ್ನು ಜೊತೆಗೂಡಿಸಿ ಬಾಲ ಮೇಳ ಮತ್ತು ಮೂಲ ಶಿಕ್ಷಣದ ಕುರಿತು ಕಾರ್ಯಕ್ರಮಗಳು.