ಜು.9ರಿಂದ 13 : ಮಡವೂರ್ನಲ್ಲಿ ಉರೂಸ್ ಸಮಾರಂಭ
ಪುತ್ತೂರು, ಜು.4: ದಕ್ಷಿಣ ಭಾರತದ ಪ್ರಸಿದ್ಧ ಆಧ್ಯಾತ್ಮಿಕ ಪವಿತ್ರ ಸಂದರ್ಶನಾ ಸ್ಥಳವಾದ ಮಡವೂರ್ ಸಿ.ಎಂ. ಮುಖಾಂ ಶರೀಫಿನಲ್ಲಿ ಸಿ.ಎಂ. ಅಬೂಬಕ್ಕರ್ ಮುಸ್ಲಿಯಾರ್ರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಜು.9ರಿಂದ 13ರ ತನಕ ನಡೆಯುವುದು ಎಂದು ಉರೂಸ್ ಸ್ವಾಗತ ಸಮಿತಿಯ ಸಂಚಾಲಕ ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ಪರ್ತಿಪ್ಪಾಡಿ ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರೂಸ್ ಕಾರ್ಯಕ್ರಮದ ಅಂಗವಾಗಿ ಹೊಸ ಮನೆಗಳ ಕೀ ಹಸ್ತಾಂತರ, ಸಾಮೂಹಿಕ ಮಖಾಂ ಝಿಯಾರತ್, ಧ್ವಜಾರೋಹಣ, ಖತಂ ದುಆ ಸ್ವಲಾತ್ ಮಜ್ಲೀಸ್, ಮತಪ್ರಬಾಷಣ, ದ್ಸಿಕ್ರ್ ದುಆ, ಆಧ್ಯಾತ್ಮಿಕ ಸಮ್ಮೇಳನ, ಅನಾಥ ಮಕ್ಕಳ ಸಾಮೂಹಿಕ ಪ್ರಾರ್ಥನೆ, ಅನ್ನದಾನ ಮತ್ತಿತರ ಕಾರ್ಯಕ್ರಮಗಳು ನಡೆಯುವುದು ಎಂದರು.
ಕಷ್ಟ ಕಾರ್ಪಣ್ಯಗಳ ನಿವಾರಣೆ, ಉದ್ದೇಶ ಸಾಫಲ್ಯತೆ, ಮನಶಾಂತಿಗೆ ಹೆಸರುವಾಸಿಯಾಗಿರುವ ಇಲ್ಲಿ ನಡೆಯುವ ಉರೂಸ್ಗೆ ಭಕ್ತಾಧಿಗಳು ನೀಡುವ ದೇಣಿಗೆಯಿಂದ ಮುಖಾಂ ಶರೀಫಿನ ಅಧೀನದಲ್ಲಿರುವ ಅನಾಥ ಹುಡುಗರು ಮತ್ತು ಹುಡುಗಿಯರ ಯತೀಂಖಾನ, ಪಳ್ಳಿ ದರ್ಸ್ಗಳು, ಪ್ರಾಥಮಿಕ ಮತ್ತು ಸೆಕೆಂಡರಿ ಮದ್ರಸಗಳು, ಪ್ರೌಢ ಶಾಲೆಗಳು, ಇಂಗ್ಲೀಷ್ ಮೀಡಿಯಂ ಶಾಲೆ, ಜಾಮಿಅಃ ಅಲ್ ಅಝ್ಹರಿಯ್ಯ ಇಸ್ಲಾಮಿಕ್ ಆರ್ಟ್ ಕಾಲೇಜು, ಹೋಂ ಕೇರ್ ಓರ್ಪನ್ ಮೊದಲಾದ ಹತ್ತು ಹಲವು ಧಾರ್ಮಿಕ ಮತ್ತು ಸಮನ್ವಯ ಕೇಂದ್ರಗಳ ನಿರ್ವಹಣೆಗೆ ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಕೆ.ವಿ. ಹಸೈನಾರ್ ಮುಸ್ಲಿಯಾರ್ ಕುಡ್ತಮುಗೇರು, ಸದಸ್ಯ ಎನ್.ಎ.ಮುಹಮ್ಮದ್ ಮುಸ್ಲಿಯಾರ್ ನೂಜಿ ಹಾಜರಿದ್ದರು.