ಓವೈಸಿ ಮೇಲೆ ಕೇಂದ್ರ, ರಾಜ್ಯ ಸರಕಾರಗಳು ನಿಗಾ ಇಡಬೇಕು: ಕಾಂಗ್ರೆಸ್
ನವದೆಹಲಿ, ಜು.5: ತಮ್ಮ ಪಕ್ಷಕ್ಕೆ ಮತಗಳನ್ನು ಪಡೆಯುವುದೊಂದೇ ಉದ್ದೇಶ ಹೊಂದಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಓವೈಸಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಯಾವ ಹಂತಕ್ಕೂ ಹೋಗಬಹುದಾದುದರಿಂದ ಅವರ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಗಾ ಇಡಬೇಕೆಂದು ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಹೇಳಿದ್ದಾರೆ.
``ಮತಗಳನ್ನು ಒಡೆದು ಲಾಭ ಪಡೆಯುವುದು ಓವೈಸಿ ಕೆಲಸವಾಗಿದೆ. ಅವರ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ,'' ಎಂದು ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡುತ್ತಾ ವಡಕ್ಕನ್ ಹೇಳಿದರು.
``ಮತಗಳನ್ನು ಪಡೆಯುವ ಸಲುವಾಗಿ ದಂಗೆ ಹಾಗೂ ಅಹಿತಕರ ಘಟನೆಗಳನ್ನು ಅವರು ಸೃಷ್ಟಿಸಬಹುದು. ಅವರು ಹೋದಲ್ಲೆಲ್ಲಾ ಅವರ ಮೇಲೆ ಕಣ್ಣಿಡಬೇಕಾಗಿದೆ,'' ಎಂದು ಅವರು ತಿಳಿಸಿದರು.
ಅತ್ತ ರಾಷ್ಟ್ರ್ರೀಯ ತನಿಖಾ ದಳ ಬಂಧಿಸಿದ ಶಂಕಿತ ಉಗ್ರರಿಗೆ ಕಾನೂನು ಸಹಾಯ ಮಾಡುವುದಾಗಿ ಹೇಳಿಕೆ ನೀಡಿದ ಓವೈಸಿ ವಿರುದ್ಧ ವಕೀಲರಾದ ಕೆ ಕರುಣಾ ಸಾಗರ್ ಸೈಬರಾಬಾದ್ ನ ಸಾರೂರ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ``ಭಾರತವನ್ನು ತನ್ನ ಗುರಿಯಾಗಿಸುವುದಾಗಿ ವೀಡಿಯೋ ಒಂದನ್ನು ತಂದಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಓವೈಸಿ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಇದು ದೇಶದ್ರೋಹವಾಗಿದೆ,''ಎಂದು ದೂರುದಾರರು ಆರೋಪಿಸಿದ್ದಾರೆ.