ಹೋಟೆಲ್ ನಲ್ಲಿ ಗಾಂಜಾ ಮಾರಾಟ: ಮೂವರ ಸೆರೆ

ಮಂಗಳೂರು, ಜು. 5: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯ ಹೊಟೇಲ್ವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹೊಟೇಲ್ ಮಾಲಕ ಸಹಿತ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರ ವಶದಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೃಷ್ಣಾಪುರದ ನಿವಾಸಿಗಳಾದ ಮುಹಮ್ಮದ್ ರಿಯಾಝ್ (30), ಅಬ್ದುಲ್ ಸಮದ್ (27) ಮತ್ತು ಕೈಕಂಬ ಗಣೇಶಪುರದ ನಿವಾಸಿ ರಝಾಕ್ ಅಲಿ(23) ಎಂದು ಗುರುತಿಸಲಾಗಿದೆ.
ಬೈಕಂಪಾಡಿ ಬಸ್ಸು ನಿಲ್ದಾಣದ ಬಳಿಯ ಹೊಟೇಲ್ ಮುಬಾರಕ್ನಲ್ಲಿ ಹಾಗೂ ಹೊಟೇಲ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ಹೊಂಡಾ ಮ್ಯಾಸ್ಟ್ರೋ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರು ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಟ್ಟು 1.2 ಕೆ.ಜಿ. ಗಾಂಜಾ, 4 ಮೊಬೈಲ್ ಫೋನ್ಗಳು,7,300 ರೂ. ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಹೊಂಡಾ ಮ್ಯಾಸ್ಟ್ರೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 93,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ತುಂಬಿಸಿಕೊಂಡು ಹೊಟೇಲ್ಗೆ ಬರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿಸಿಬಿ ಘಟಕದ ಸಬ್ ಇನ್ಸ್ಪೆೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.







