ಕಾರವಾರ: ಹೆಚ್ಚಿದ ಕಡಲು ಕೊರೆತಕ್ಕೆ ಜನಜೀವನ ತತ್ತರ

ಕಾರವಾರ, ಜು.5: ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮುದ್ರ ಕಿನಾರೆಯಲ್ಲಿರುವ ದಾಂಡೇಭಾಗ, ಬಾವಳ, ಹಿಪಳಿ, ನಚಿಕನ್ಬಾಗ ಗ್ರಾಮಸ್ಥರು ಸಮುದ್ರ ಕೊರೆತದಿಂದಾಗಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಈ ಬಾರಿ ಕಡಲ ಅಬ್ಬರ ದ್ವಿಗುಣವಾಗಿದ್ದು, ಒಂದು ತಿಂಗಳ ಮಳೆಗೆ ನಾಲ್ಕೈದು ಮೀಟರ್ಗಳಷ್ಟು ತೀರ ಕೊಚ್ಚಿ ಹೋಗಿದೆ. ಕಡಲ ತಡಿಯಲ್ಲಿರುವ ಗಾಳಿಯ ಮರಗಳನ್ನು ನುಂಗಿಕೊಂಡು ಸಮುದ್ರ ಮುಂದೆ ಬರಲಾರಂಭಿಸಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ದಾಂಡೇಬಾಗದಲ್ಲಿ ರಸ್ತೆಯ ಕಲ್ಲುಗಳು ಕಿತ್ತು ಬೀಳುತ್ತಿದ್ದು ಸಮುದ್ರ ಕೊರೆತ ಮುಂದುವರಿದರೆ ಒಂದೆರಡು ದಿನದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ. ಈ ಗ್ರಾಮದ ನೂರಾರು ವಿದ್ಯಾರ್ಥಿಗಳು ಕಾರವಾರ-ಮಾಜಾಳಿ-ದಾಂಡೇಬಾಗ-ಬಾವಳಕ್ಕೆ ಸಂಚರಿಸುವ ಬಸ್ನಲ್ಲಿ ಓಡಾಟ ನಡೆಸುತ್ತಾರೆ. ರಸ್ತೆ ಬಂದ್ ಆದರೆ ನೂರಾರು ಮಕ್ಕಳಿಗೆ ಸಂಚಾರದ ತೊಂದರೆ ಉಂಟಾಗುವ ಸಾಧ್ಯತೆ ನಿರ್ಮಾಣವಾಗಲಿದೆ.
ಅಧಿಕಾರಿಗಳ ಭೇಟಿ
ಸೋಮವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯ ರವೀಂದ್ರ ಪವಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೀತಲ್ ಪವಾರ್, ಸದಸ್ಯರಾದ ಅನಿಲ ಮಾಜಾಳಿಕರ್, ನಿಶಾ ಮಾಜಾಳಿಕರ್, ಪಿಡಿಒ ಭಾರತಿ ಕಾಂಬ್ಳೆ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲಲ್ಲಿ ಕಾಮಗಾರಿ: ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಲ ತಡಿಯಲ್ಲಿ 500 ಕ್ಕೂ ಹೆಚ್ಚು ಮೀನುಗಾರರ ಮನೆಗಳಿವೆ. ಸಮುದ್ರ ಪಕ್ಕದಲ್ಲಿ ದೋಣಿ ಇಡಲು ಮೀನುಗಾರರು ಗುಡಿಸಲು ಕಟ್ಟಿಕೊಂಡಿದ್ದಾರೆ. ಇದುವರೆಗೆ ತೀರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಾತ್ರ ಸಮುದ್ರ ಕೊರೆತ ತಡೆಯಲು ಬಂಡೆಕಲ್ಲು ಹಾಕಲಾಗಿದೆ. ಬಂಡೆ ಕಲ್ಲು ಹಾಕಿ ತಡೆಗೋಡೆ ನಿರ್ಮಾಣ ಮಾಡದ ಸ್ಥಳಗಳಲ್ಲಿ ಈ ವರ್ಷ ಕೊರೆತ ಪ್ರಾರಂಭವಾಗಿದೆ. ತಕ್ಷಣ ತಡೆಗೋಡೆ ನಿರ್ಮಾಣ ಮಾಡುವಷ್ಟು ಅನುದಾನ ನಮ್ಮ ಬಳಿ ಇಲ್ಲ. ನಾವು ಸದ್ಯ ಕ್ರಿಯಾ ಯೋಜನೆ ಮಾಡಿ ಸರಕಾರಕ್ಕೆ ನೀಡಲಿದ್ದೇವೆ. ಸರಕಾರದಿಂದ ಹಣ ಮಂಜೂರಾದ ಬಳಿಕವೇ ಕಾಮಗಾರಿ ನಡೆಸಲು ಸಾಧ್ಯ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕುಮಾರ್ ಹೇಳಿದ್ದಾರೆ.
ದೋಣಿ ಶೆಡ್ಗಳಿಗೂ ಆತಂಕ
ದಾಂಡೇಬಾಗದಲ್ಲಿ ಸಮುದ್ರ ಕೊರೆತದಿಂದ 50 ಕ್ಕೂ ಹೆಚ್ಚು ಶೆಡ್ಗಳು ಆತಂಕದಲ್ಲಿವೆ. ಕಡಲ ಅಬ್ಬರ ಮುಂದುವರಿದರೆ ದೋಣಿಗಳನ್ನು ಇಡಲು ಮೀನುಗಾರರು ಪರದಾಡುವ ಪರಿಸ್ಥಿತಿ ಎದುರಾಗಲಿದೆ.
ಸಮುದ್ರ ತೀರದ ಸಮಸ್ಯೆಗಳ ಬಗ್ಗೆ ದೂರುಗಳು, ಅಹವಾ ಲುಗಳು ಸಮುದ್ರದ ಅಲೆಗಳಂತೆ ಬರಲಾರಂಭಿಸಿದೆ. ಸಮುದ್ರ ಕೊರೆತ ತಡೆಗೆ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ಸಂಚಾರ ಸ್ಥಗಿತ ೊಳ್ಳಲಿದೆ. ಅಲ್ಲದೆ, ನೂರಾರು ಮೀನುಗಾರರ ಗುಡಿಸ ಲುಗಳು ಸಮುದ್ರ ಪಾಲಾಗಲಿವೆೆ. ಈ ಕುರಿತು ಜಿಲ್ಲಾಡಳಿತ ತುರ್ತು ಕಾರ್ಯಾಚರಣೆಗೆ ಮುಂದಾಗಿ ಜನರು ಮತ್ತು ಅವರ ಆಸ್ತಿ ಪಾಸ್ತಿಗಳ ರಕ್ಷಣೆಗೆ ಮುಂದಾಗಬೇಕು.





