ಇಶ್ರತ್ ಪ್ರಕರಣದ ತನಿಖಾಧಿಕಾರಿಯನ್ನು ನೀಪ್ಕೊದಿಂದ ಎತ್ತಂಗಡಿ ಮಾಡಿದ ಕೇಂದ್ರ
ಹೊಸದಿಲ್ಲಿ,ಜು.5: ಈ ಹಿಂದೆ ಇಶ್ರತ್ ಜಹಾನ್ ಪ್ರಕರಣದ ತನಿಖೆಯನ್ನು ನಡೆಸಿದ್ದ ವಿಶೇಷ ತನಿಖಾ ತಂಡ(ಸಿಟ್)ದ ಸದಸ್ಯರಾಗಿದ್ದು, ಹಾಲಿ ಈಶಾನ್ಯ ವಿದ್ಯುಚ್ಛಕ್ತಿ ನಿಗಮ(ನೀಪ್ಕೊ)ದ ಮುಖ್ಯ ಜಾಗೃತ ಅಧಿಕಾರಿ(ಸಿವಿಒ)ಯಾಗಿದ್ದ ಐಎಎಸ್ ಅಧಿಕಾರಿ ಸತೀಶ್ ವರ್ಮಾ ಅವರ ಅಧಿಕಾರಾವಧಿಯನ್ನು ಕೇಂದ್ರವು ಮೊಟಕುಗೊಳಿಸಿದೆ.
ವರ್ಮಾ ಅವರ ಸೇವೆಯನ್ನು ಗೃಹ ಸಚಿವಾಲಯದ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತನ್ನ ಆದೇಶದಲ್ಲಿ ಹೇಳಿದೆ.
ವರ್ಮಾ ಅವರನ್ನು ಆಗಸ್ಟ್ 2014ರಲ್ಲಿ ಮೂರು ವರ್ಷಗಳ ಆರಂಭಿಕ ಅವಧಿಗೆ ನೀಪ್ಕೊದ ಸಿವಿಒ ಆಗಿ ನೇಮಕಗೊಳಿಸಲಾಗಿತ್ತು. ವರ್ಮಾ ಅವರ ಅಧಿಕಾರಾವಧಿಯನ್ನು ಮೊಟಕು ಗೊಳಿಸುವ ಮುನ್ನ ಈ ವರ್ಷದ ಮೇ ತಿಂಗಳಲ್ಲಿ ‘ದುರ್ವರ್ತನೆ’ ಮತ್ತು ಕರ್ತವ್ಯಕ್ಕೆ ‘ಅನಧಿಕೃತ ಗೈರು ಹಾಜರಿ’ ಆರೋಪದಲ್ಲಿ ಅವರಿಗೆ ಎರಡು ಬಾರಿ ಶೋಕಾಸ್ ನೋಟೀಸ್ಗಳನ್ನು ಜಾರಿಗೊಳಿಸಲಾಗಿತ್ತು.
ಗುಜರಾತ್ ಕೇಡರ್ನ 1986ರ ತಂಡದ ಐಪಿಎಸ್ ಅಧಿಕಾರಿಯಾಗಿರುವ ವರ್ಮಾ ಇಶ್ರತ್ ಜಹಾನ್ ಎನ್ಕೌಂಟರ್ ಹತ್ಯೆ ಪ್ರಕರಣದ ತನಿಖೆಗಾಗಿ ಗುಜರಾತ್ ಉಚ್ಚ ನ್ಯಾಯಾಲಯವು ನೇಮಿಸಿದ್ದ ಮೂವರು ಸದಸ್ಯರ ಸಿಟ್ನ ಭಾಗವಾಗಿದ್ದರು.
ಇತರ ಇಬ್ಬರು ಸದಸ್ಯರಿಗಿಂತ ಭಿನ್ನವಾದ ಅಭಿಪ್ರಾಯವನ್ನು ತಳೆದಿದ್ದ ಅವರು, ಎನ್ಕೌಂಟರ್ ಪೂರ್ವಯೋಜಿತ ವಾಗಿರಬಹುದು ಎಂದು ಹೈಕೋರ್ಟ್ನಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರಲ್ಲದೆ, ಇಶ್ರತ್ ನಿಷೇಧಿತ ಲಷ್ಕರೆ ತಯ್ಯಿಬಾ ಸಂಘಟನೆಯ ಭಯೋತ್ಪಾದಕಿಯಾಗಿದ್ದಳು ಎಂಬ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದರು.