ಹಾಕಿ ದಂತಕತೆ ಶಾಹಿದ್ಗೆ ಕೇಂದ್ರ ನೆರವು: ಧನರಾಜ್ ಪಿಳ್ಳೈ ಕೃತಜ್ಞತೆ

ಹೊಸದಿಲ್ಲಿ, ಜು.5: ಅನಾರೋಗ್ಯ ಪೀಡಿತರಾಗಿದ್ದ ಹಾಕಿ ದಂತಕತೆ ಮುಹಮ್ಮದ್ ಶಾಹಿದ್ಗೆ ಆರ್ಥಿಕ ನೆರವು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವಾಲಯ ಹಾಗೂ ಇಂಡಿಯನ್ ರೈಲ್ವೇಸ್ಗೆ ಭಾರತದ ಮಾಜಿ ಹಾಕಿ ನಾಯಕ ಧನರಾಜ್ ಪಿಳ್ಳೈ ಕೃತಜ್ಞತೆ ಸಲ್ಲಿಸಿದ್ದಾರೆ.
ಶಾಹಿದ್ ಚಿಕಿತ್ಸೆಗೆ ಪ್ರಾಮಾಣಿಕ ಬೆಂಬಲ ಹಾಗೂ ನೆರವು ನೀಡಿರುವ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ, ಕ್ರೀಡಾ ಸಚಿವರಾದ ಜಿತೇಂದ್ರ ಸಿಂಗ್, ಇಂಡಿಯನ್ ರೈಲ್ವೇಸ್ ಹಾಗೂ ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಕೃತಜ್ಞತೆ ಸಲ್ಲಿಸುವೆ ಎಂದು ಪಿಳ್ಳೈ ತಿಳಿಸಿದರು.
ಲಿವರ್ ಹಾಗೂ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವ ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಪಟು ಮುಹಮ್ಮದ್ ಶಾಹಿದ್ ಚಿಕಿತ್ಸೆಗೆ ನೆರವು ನೀಡುವಂತೆ ಪ್ರಧಾನಮಂತ್ರಿ ಸಹಿತ ಇತರ ಸಚಿವರು ಹಾಗೂ ಸಂಸ್ಥೆಗಳಿಗೆ ಪಿಳ್ಳೈ ಮನವಿ ಸಲ್ಲಿಸಿದ್ದರು.
ಪಿಳ್ಳೈ ಮನವಿಗೆ ತಕ್ಷಣವೇ ಸ್ಪಂದಿಸಿರುವ ರೈಲ್ವೇ ಸಚಿವರು, ತಮ್ಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಹಿದ್ರ ಎಲ್ಲ ಖರ್ಚುವೆಚ್ಚವನ್ನು ಭರಿಸುವ ಆಶ್ವಾಸನೆ ನೀಡಿತ್ತು. ಕ್ರೀಡಾ ಸಚಿವರು 10 ಲಕ್ಷ ರೂ. ನೆರವು ಘೋಷಿಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯಾದವ್ 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು.







