ಹೆಜಮಾಡಿ ಕೋಡಿಗೆ ಬಂದರು: ಪರಿಸರ ಇಲಾಖೆಯಿಂದ ಸಭೆ

ಪಡುಬಿದ್ರೆ, ಜು.5: ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸಂಬಂಧಿಸಿ ಮಂಗಳವಾರ ಜಿಲ್ಲಾಧಿಕಾರಿ ಆರ್. ವಿಶಾಲ್ ನೇತೃತ್ವದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಾರ್ವಜನಿಕ ಅಹವಾಲು ಸಭೆ ಹೆಜಮಾಡಿ ಕೋಡಿಯ ಪಲಿಮಾರು ಮೊಗವೀರ ಸಭಾಗೃಹದಲ್ಲಿ ನಡೆಯಿತು.
ಸಾಮಾಜಿಕ ಹಾಗೂ ಆರ್ಥಿಕ ಹೊಣೆಗಾರಿಕೆಯ ಈ ಯೋಜನೆಗೆ ಪರಿಸರ ಇಲಾಖೆಯ ಅನುಮೋದನೆ ಬಳಿಕ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ುನ್ನು ಪೂರ್ಣಗೊಳಿಸುವಂತೆ ಬಂದರು ಮತ್ತು ಮೀನುಗಾರಿ
ಕಾ ಇಲಾಖೆ ಅಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ 50:50 ಅನುದಾನ ದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಾಲ್ಕೈದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಎಸ್. ರಾಥೋಡ್ ಮಾಹಿತಿ ನೀಡಿದರು.
ಯೋಜನೆಯ ವಿವರ:
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್ ಯೋಜನೆಯ ಸಮಗ್ರ ಮಾಹಿತಿ ನೀಡಿದರು. ಹೆಜಮಾಡಿ ಕೋಡಿ ಶಾಂಭವಿ ಮತ್ತು ನಂದಿನಿ ಹೊಳೆಗಳು ಸಮುದ್ರ ಸೇರುವ ಅಳಿವೆಯ ದಕ್ಷಿಣ ಭಾಗದಲ್ಲಿ ಸುಸಜ್ಜಿತ ಬಂದರು ನಿರ್ಮಾಣಕ್ಕೆ ಇಲಾಖಾ ವರದಿಯಲ್ಲಿ ನೀಲಿನಕ್ಷೆ ತಯಾರಿಸಲಾಗಿದೆ. ಒಟ್ಟು 122.59 ಕೋ.ರೂ. ಅಂದಾಜು ವೆಚ್ಚದಲ್ಲಿ ಅಳಿವೆಯ ಎರಡೂ ಭಾಗಗಳಲ್ಲಿ ಅಲೆ ತಡೆಗೋಡೆ (692 ಮತ್ತು 781 ಮೀಟರ್) ನಿರ್ಮಾಣ, ಹರಾಜು ಕೇಂದ್ರ, ಬೋಟ್ ತಂಗುದಾಣ, ವಿಶ್ರಾಂತಿ ಕಟ್ಟಡಗಳು, ಆಡಳಿತ ಕಚೇರಿ, ಬೋಟ್ ರಿಪೇರಿ ಕೇಂದ್ರ, ಭದ್ರತಾ ಸಿಬ್ಬಂದಿ ಕಟ್ಟಡ, ಶೌಚಾಲಯ, ಬಲೆ ನೇಯುವ ಕೇಂದ್ರ, ರೇಡಿಯೊ ಸಂಪರ್ಕ ಕೇಂದ್ರ, ರೆಸ್ಟೋರೆಂಟ್, ಏರಿ ನಿರ್ಮಾಣ, ಸಹಿತ ಸುಸಜ್ಜಿತ ಬಂದರು ನಿರ್ಮಾಣವಾಗಲಿದೆ.
ಸ್ಥಳೀಯ ಮೀನುಗಾರಿಕೆ ಕುಂಠಿತ ಸಹಿತ ಹಲವು ಪ್ರಶ್ನೆಗಳನ್ನು ಮೀನುಗಾರ ಮುಖಂಡರಾದ ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ್, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶರತ್ ಗುಡ್ಡೆಕೊಪ್ಲ, ವೈ.ಗಂಗಾಧರ ಸುವರ್ಣ, ಕೇಶವ ಕೋಟ್ಯಾನ್, ಯಶವಂತ್ ಮೆಂಡನ್, ರೇಣುಕಾ ಪುತ್ರನ್ ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೀರ್ತಿಕುಮಾರ್ ಉಪಸ್ಥಿತರಿದ್ದರು.
ಪಡುಬಿದ್ರೆಗೆ ಅಗ್ನಿಶಾಮಕ ದಳ: ಸಭೆಯಲ್ಲಿ ಸ್ಥಳೀಯ ನಿವಾಸಿ ಮುಹಮ್ಮದ್ ಅಲಿ ಮಾತನಾಡಿ, ಹೆಜಮಾಡಿಯಲ್ಲಿ ಬಂದರು ನಿರ್ಮಾಣವಾದರೂ ಅಗ್ನಿ ಶಾಮಕ ದಳದ ಪ್ರಸ್ತಾಪ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ವಿಶಾಲ್, ಈಗಾಗಲೇ ಪಡುಬಿದ್ರೆಯಲ್ಲಿ ಅಗ್ನಿಶಾಮಕ ದಳದ ಪ್ರಸ್ತಾವ ಇದ್ದು, ಸರಕಾರಿ ಜಾಗ ದೊರೆತ ತಕ್ಷಣ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.







