ಜು.16-17: ಪಿಲಿಕುಳದಲ್ಲಿ ‘ಹಲಸು ಮೇಳ’
ಮಂಗಳೂರು,ಜು.5: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಹಾಗೂ ದ.ಕ. ಜಿಪಂ ಸಹಯೋಗದೊಂದಿಗೆ ಜು.16 ಮತ್ತು 17ರಂದು ಪಿಲಿಕುಳದಲ್ಲಿ ಹಲಸು ಮೇಳವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಪಿಲಿಕುಳದ ಮೃಗಾಲಯದ ಎದುರುಗಡೆ ಮೇಳ ನಡೆಯಲಿದೆ ಎಂದರು. ಹಲಸನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈಗಾಗಲೇ 31 ವಿವಿಧ ತಳಿಗಳ ಹಲಸಿನ ಗಿಡಗಳನ್ನು ಪಿಲಿಕುಳದಲ್ಲಿ ಬೆಳೆಸಲಾಗಿದ್ದು, 3 ವರ್ಷಗಳ ಅವಧಿಯಲ್ಲೇ ಕೆಲವು ಹಲಸಿನಲ್ಲಿ ಫಲ ಬಂದಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮೇಳದ ಅಂಗವಾಗಿ ಹಲಸಿನ ಬೇಸಾಯ ಕ್ರಮಗಳು ಮತ್ತು ವೌಲ್ಯವರ್ಧನೆ ಬಗ್ಗೆ ಸಂವಾದವನ್ನು ಆಯೋಜಿಸಲಾಗಿದೆ. ಮಳೆಕೊಯ್ಲು ಮತ್ತು ನೀರಿಂಗಿಸುವ ಬಗ್ಗೆ ಜಲತಜ್ಞ ಶ್ರೀಪಡ್ರೆ ಅವರಿಂದ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಉಚಿತ ಮಳಿಗೆಗಳನ್ನು ಒದಗಿಸಲಾಗುವುದು. ಬೆಂಗಳೂರಿನ ಡಾ. ನಿರಂಜನ್ ಮೂರ್ತಿ ಮೇಳದಲ್ಲಿ ಸಸ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಪಿಲಿಕುಳದ ಜಯಪ್ರಕಾಶ್ ಭಂಡಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ಕೆ.ಚೌಟ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಎನ್.ಜಿ. ಮೋಹನ್, ಶಿವಶಂಕರ್ ಮತ್ತಿತರರಿದ್ದರು.
ಮೇಳದ ವಿಶೇಷತೆಗಳು
ರಾಜ್ಯದ ವಿವಿಧ ತಳಿಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ.
ಹಲಸಿನಿಂದ ತಯಾರಿಸಿದ ವಿವಿಧ ವೌಲ್ಯ ವರ್ಧಿತ ಉತ್ಪನ್ನಗಳಾದ ಹಲ್ವ, ಹಪ್ಪಳ, ಸುಕ್ಕೇಳಿ, ಮಾಂಬಳ, ಗಾರಿಗೆ, ಹಣ್ಣಿನ ರಸ, ಸೊಳೆಯ ವಡೆ, ಉಂಡುಲಗ, ಪಾಯಸ, ಜೆಲ್ಲಿ, ಚಿಪ್ಸ್ ಹಾಗೂ ಹಲಸು ಕಬಾಬ್ಗಳ ಪ್ರದರ್ಶನ ಮತ್ತು ಮಾರಾಟ.
ಹಲಸಿನ ಐಸ್ಕ್ರೀಂಗಳೂ ಮೇಳದಲ್ಲಿ ಲಭ್ಯವಾಗಲಿದ್ದು, ಹಲಸಿನ ಬೀಜದ ಕಾಫಿ (ಜಾಫಿ) ಪ್ರಾತ್ಯಕ್ಷಿಕೆ ಹಾಗೂ ಮಾರಾಟಕ್ಕೂ ಅವಕಾಶವಿದೆ. ಮೇಳದಲ್ಲಿ ಮಾವು ಹಾಗೂ ಇತರ ಜಾತಿಯ ಫಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ.
ಗಿಡಗಳ ಕಸಿ ಕಟ್ಟುವ ಪ್ರಾತ್ಯಕ್ಷಿಕೆ ಹಾಗೂ ತರಬೇತಿ
ಬೆಳುವಾಯಿಯ ಸಮ್ಮಿಳನ್ ಶೆಟ್ಟಿ ಅವರಿಂದ ಚಿಟ್ಟೆಗಳ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾಹಿತಿ.